ಕೊಂಕಣಿ ಕುಟಮ್ ಪ್ರಶಸ್ತಿ: ರೆ.ಫಾ. ಪ್ರಶಾಂತ್ ವಲೇರಿಯನ್ ಮಾಡ್ತ ಸನ್ಮಾನ
ಮಂಗಳೂರು, ಜು.28: ಕೊಂಕಣಿ ಕುಟಮ್ ಬಾಹ್ರೇಯ್ನ ವತಿಯಿಂದ ರೆ.ಫಾ. ಪ್ರಶಾಂತ್ ವಲೇರಿಯನ್ ಮಾಡ್ತ ಅವರಿಗೆ ನಗರದ ಸೈಂಟ್ ಸೆಬಾಸ್ಪಿಯನ್ ಪ್ಲ್ಯಾಟಿನಂ ಜುಬಿಲಿ ಹಾಲ್ನಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ಕೊಂಕಣಿ ಕುಟಮ್ ಪ್ರಶಸ್ತಿಯನ್ನು ಪ್ರದಾನಿಸಲಾಯಿತು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ರೆ.ಫಾ. ಪ್ರಶಾಂತ್ ವಲೇರಿಯನ್ ಮಾಡ್ತ, ಚಿಂತಕರು, ಸಾಹಿತಿಗಳು, ಪರಿಚಾರಕರಿಗೆ ಕೊಂಕಣಿ ಕುಟಮ್ ಪ್ರಶಸ್ತಿಯನ್ನು ನೀಡಲಾಗುತ್ತಿದ್ದು, ಈ ಪೈಕಿ ತನಗೆ ಪರಿಚಾರಕ ವಿಭಾಗದಲ್ಲಿ ಪ್ರಶಸ್ತಿ ನೀಡಲಾಗಿದೆ. ಕೊಂಕಣಿ ಕುಟಮ್ ಬಾಹ್ರೇಯ್ನಿ ಪ್ರಶಸ್ತಿ ನೀಡುವ ಮೂಲಕ ಕವಿ, ಸಾಹಿತಿ, ಸಾಹಿತ್ಯಕ್ಕೆ ಪ್ರೋತ್ಸಾಹಿಸುವ ಕೆಲಸ ಅಮೋಘವಾದದ್ದು ಎಂದು ಅವರು ತಿಳಿಸಿದರು.
ಸಮಾರಂಭದಲ್ಲಿ ಖ್ಯಾತ ಸಾಹಿತಿ ಜಯಂತ್ ಕಾಯ್ಕಿಣಿ, ಸಾಹಿತಿ ಮೆಲ್ವಿನ್ ರೊಡ್ರಿಗಸ್, ಕೊಂಕಣಿ ಕುಟಮ್ನ ಸಂಚಾಲಕ ರಿಚಾರ್ಡ್ ಮೋರಸ್ ವೇದಿಕೆಯಲ್ಲಿದ್ದರು. ಸಮಾರಂಭದಲ್ಲಿ ಮಾಜಿ ಶಾಸಕ ಜೆ.ಆರ್. ಲೋಬೊ, ಸಮಿತಿ ಸದಸ್ಯ ಮನು ಬಹರೇನ್ ಉಪಸ್ಥಿತರಿದ್ದರು. ಸಿಜ್ಯೆಸ್ ತಾಕೊಡೆ ಪರಿಚಯಿಸಿದರು. ವಿತೋರಿ ಕಾರ್ಕಳ ಸ್ವಾಗತಿಸಿದರು. ಲೆಸ್ಲಿ ರೆಗೊ ನಿರೂಪಿಸಿದರು.