ಬಂಟ್ವಾಳ: ವಿದ್ಯಾರ್ಥಿಗಳ ನಡುವೆ ಜಗಳ; ಓರ್ವನಿಗೆ ಗಾಯ
ಬಂಟ್ವಾಳ, ಜು. 28: ಶಾಲೆಯಲ್ಲಿ ವಿದ್ಯಾರ್ಥಿಗಳ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳ ನಡೆದು ವಿದ್ಯಾರ್ಥಿಯೋರ್ವ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಶನಿವಾರ ಸಂಭವಿಸಿದೆ.
ಬಂಟ್ವಾಳ ತಾಲೂಕಿನ ವಾಮದಪದವು ಸಮೀಪದ ಖಾಸಗಿ ಶಿಕ್ಷಣ ಸಂಸ್ಥೆಯ ಎಂಟನೆ ತರಗತಿಯ ವಿದ್ಯಾರ್ಥಿ ಅಭಿಷೇಕ್ (13) ಗಾಯಗೊಂಡ ವಿದ್ಯಾರ್ಥಿ. ಘಟನೆಯಿಂದ ಅಭಿಷೇಕ್ ಅವರ ಸ್ಥಿತಿ ಗಂಭೀರವಾಗಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ತಿಳಿದು ಬಂದಿದೆ.
ಘಟನೆ ವಿವರ: ಇಂದು ಮಧ್ಯಾಹ್ನ ಶಾಲೆ ಬಿಡುವ ಹೊತ್ತಿಗೆ ಒಂದೇ ತರಗತಿಗೆ ಸೇರಿದ ಅಭಿಷೇಕ್ ಹಾಗೂ ಇನ್ನಿಬ್ಬರು ವಿದ್ಯಾರ್ಥಿಗಳ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳ ನಡೆದಿದೆ. ತದನಂತರ ಇಬ್ಬರು ವಿದ್ಯಾರ್ಥಿಗಳು ಸೇರಿ ಅಭಿಷೇಕ್ ಮೇಲೆ ಹಲ್ಲೆ ನಡೆಸಿದ್ದಾರೆನ್ನಲಾಗಿದೆ.
ಘಟನೆಯಿಂದ ನಿಸ್ತೇಜಗೊಂಡ ಅಭಿಷೇಕ್ನನ್ನು ಇತರ ವಿದ್ಯಾರ್ಥಿಗಳು ಸಮೀಪದ ಆತನ ಅಜ್ಜನ ಮನೆಗೆ ಕರೆತಂದಿದ್ದರು. ಈ ವಿಚಾರವನ್ನು ಇತರ ವಿದ್ಯಾರ್ಥಿಗಳು ಶಿಕ್ಷಕರ ಗಮನಕ್ಕೆ ತಂದಿದ್ದು, ಶಿಕ್ಷಕರು ಆತನನ್ನು ಸ್ಥಳೀಯ ವೈದ್ಯರಲ್ಲಿ ತೋರಿಸಿದ್ದರು. ಅದಾಗಲೇ ಗಂಭೀರಾವಸ್ಥೆಯಲ್ಲಿದ್ದ ಅಭಿಷೇಕ್ನನ್ನು ತಕ್ಷಣ ಅಂಬ್ಯುಲೆನ್ಸ್ನಲ್ಲಿ ತುಂಬೆ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಅಪಾಯದಿಂದ ಪಾರಾಗಿದ್ದಾನೆ ಎಂದು ಆತನ ಪೋಷಕರು ತಿಳಿಸಿದ್ದಾರೆ.
ಘಟನೆ ಕುರಿತು ಅಭಿಷೇಕ್ ಅವರ ಚಿಕ್ಕಪ್ಪ ರಾಜೇಂದ್ರ ಸಾಲ್ಯಾನ್ ಅವರು ಪುಂಜಾಲಕಟ್ಟೆ ಠಾಣೆಗೆ ದೂರು ನೀಡಿದ್ದು, ಠಾಣಾಧಿಕಾರಿ ಅವರು ವಿದ್ಯಾರ್ಥಿಗಳ ಪೋಷಕರನ್ನು ಹಾಗೂ ಶಾಲಾ ಆಡಳಿತ ಮಂಡಳಿಯ ಮುಖ್ಯಸ್ಥರನ್ನು ಕರೆಸಿ ವಿವರಣೆ ಪಡೆದುಕೊಂಡಿದ್ದಾರೆ. ಈ ಘಟನೆ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಪುಂಜಾಲಕಟ್ಟೆ ಠಾಣಾಧಿಕಾರಿ ತಿಳಿಸಿದ್ದಾರೆ.