ಸಂಸ್ಕೃತಿ ಉಳಿವಿಗೆ ಕ್ರಿಶ್ಚಿಯನ್ನರ ಕೊಡುಗೆ ಅಪಾರ: ಶಾಸಕ ಸಂಜೀವ ಮಠಂದೂರು
ವಿಟ್ಲ, ಜು. 29: ಸಂಸ್ಕೃತಿ ಉಳಿವಿಗೆ ಕ್ರಿಶ್ಚಿಯನ್ನರ ಕೊಡುಗೆ ಅಪಾರವಾಗಿದೆ. ತುಳು ನಮ್ಮ ಸಂಸ್ಕೃತಿಯ ಒಂದು ಭಾಗವಾಗಿದೆ. ತುಳು ಸಂಪ್ರದಾಯಗಳು ಹೃದಯಗಳನ್ನು ಒಗ್ಗೂಡಿಸುತ್ತದೆ ಎಂದು ಪುತ್ತೂರು ಶಾಸಕ ಸಂಜೀವ ಮಠಂದೂರು ಹೇಳಿದರು.
ಅವರು ರವಿವಾರ ಪೆರುವಾಯಿ ಫಾತಿಮಾ ಮಾತೆಯ ದೇವಾಲಯ ವತಿಯಿಂದ ಸಂತ ವಿನ್ಸೆಂಟ್ ಡಿ ಪಾವ್ಲ್ ಸಂಘ, ಫಾತಿಮಾ ಸ್ತ್ರೀ ಸಂಘಟನೆ, ಐಸಿವೈಎಂ ಹಾಗೂ ಕುಕ್ಕಾಜೆ ಕಾಳಿಕಾಂಬ ಕ್ಷೇತ್ರದ ಸಹಕಾರದಲ್ಲಿ ಕುಕ್ಕಾಜೆ ಕ್ರಿಸ್ತಿನಾ ಡಿ ಸೋಜ ಅವರ ಗದ್ದೆಯಲ್ಲಿ ನಡೆದ ಗಾದ್ಯಾಂತ್ ಗಮ್ಮತ್ ಗದ್ದೆಯಲ್ಲಿ ಒಂದು ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ತುಳು ಭಾಷೆಯ ಉಳಿವಿನೊಂದಿಗೆ ಕೃಷಿ ಜೀವನ ಪದ್ಧತಿಯ ಪುನಃಶ್ಚೇತನ ಇಂತಹ ಕಾರ್ಯಕ್ರಮಗಳ ಮೂಲಕ ನಡೆಯುತ್ತಿದೆ. ನಮ್ಮ ಆಚಾರ-ವಿಚಾರಗಳನ್ನು ಮುಂದಿನ ಪೀಳಿಗೆಗೂ ವಿಸ್ತರಿಸುವ ಕೆಲಸಗಳು ನಡೆಯಬೇಕು ಎಂದು ಹೇಳಿದರು.
ಕುಕ್ಕಾಜೆ ಕಾಳಿಕಾಂಬ ಆಂಜನೇಯ ಕ್ಷೇತ್ರದ ಧರ್ಮದರ್ಶಿ ಕೃಷ್ಣ ಗುರೂಜಿ ಮಾತನಾಡಿ ಸ್ವದೇಶಿ ಚಿಂತನೆ, ರಾಷ್ಟ್ರ ಪೇಮ ಇಂತಹ ಕಾರ್ಯಕ್ರಮಗಳ ಮೂಲಕ ನಡೆಯಬೇಕು. ಕೆಸರ್ ಗದ್ದೆ ಕ್ರೀಡೆಗಳು ಹಿರಿಯರಿಂದ ನಡೆದುಕೊಂಡು ಬಂದಿರುವುದು. ಅವುಗಳನ್ನು ಮುಂದಿನ ಪೀಳಿಗೆಗೂ ವಿಸ್ತರಿಸುವ ಅನಿವಾರ್ಯತೆ ಇದೆ. ಮಣ್ಣಿನಲ್ಲಿ ಔಷಧಿಯ ಗುಣಗಳಿವೆ. ಇಂತಹ ಕಾರ್ಯಕ್ರಮಗಳ ಮೂಲಕ ರೋಗ ರುಜಿನಗಳು ನಿವಾರಣೆಯಾಗುತ್ತದೆ ಎಂದರು.
ಪೆರುವಾಯಿ ಫಾತಿಮಾ ಮಾತೆಯ ದೇವಾಲಯದ ಧರ್ಮಗುರು ವಿಶಾಲ್ ಮೋನಿಸ್ ಮಾತನಾಡಿದರು.
ಮಾಣಿಲ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜೇಶ್ ಕುಮಾರ್ ಬಾಳೆಕಲ್ಲು, ದೇವಸ್ಥಾನದ ಆಡಳಿತ ಮೊಕ್ತೇಸರ ಎಂ.ಕೆ ಕುಕ್ಕಾಜೆ, ಚರ್ಚ್ ಪಾಲನ ಸಮಿತಿ ಉಪಾಧ್ಯಕ್ಷ ಜೋನ್ಸನ್ ಮೊಂತೆರೊ, ಕಾರ್ಯದರ್ಶಿ ವಿಲಿಯಂ, ಕಾರ್ಯಕ್ರಮ ಸಂಯೋಜಕ ವಿನ್ಸೆಂಟ್ ಡಿಸೋಜ ಉಪಸ್ಥಿತರಿದ್ದರು. ಪೆರುವಾಯಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಲ್ಫ್ ಡಿಸೋಜ ಸ್ವಾಗತಿಸಿದರು. ರಾಜೇಶ್ ಪೆರೆರೊ ವಂದಿಸಿದರು. ಸಂತೋಷ್ ಮೊಂತೆರೊ ನಿರೂಪಿಸಿದರು. ವಿಲ್ಫ್ರೆಡ್ ಡಿ ಸೋಜ ಸಹಕರಿಸಿದರು.