ಕರವೇ ಸಾಮಾಜಿಕ ಸೇವೆಯಲ್ಲೂ ತೊಡಗಿಸಿಕೊಳ್ಳುವ ಸಂಘಟನೆ
ಪಡುಬಿದ್ರೆ, ಜು. 29: ರಾಜ್ಯದ ನೆಲ, ಜನ ರಕ್ಷಣೆಯೊಂದಿಗೆ ಸಾಮಾಜಿಕ ಸೇವೆಯಲ್ಲೂ ತಮ್ಮನ್ನು ತೊಡಗಿಸಿಕೊಳ್ಳುವ ರಾಜ್ಯದ ಅತ್ಯುತ್ತಮ ಸಂಘಟನೆಯೇ ಕರ್ನಾಟಕ ರಕ್ಷಣಾ ವೇದಿಕೆಯಾಗಿದೆ ಎಂದು ಉಡುಪಿ ಜಿಲ್ಲಾ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ಅಧ್ಯಕ್ಷ ಅನ್ಸಾರ್ ಅಹಮದ್ ಹೇಳಿದರು.
ಅವರು ರವಿವಾರ ಪಡುಬಿದ್ರಿಯ ನಯಾತ್ ಹೊಟೇಲ್ನಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಪಡುಬಿದ್ರಿ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜನರು ಸರ್ಕಾರದ ಸೌಲಭ್ಯಗಳನ್ನು ವಂಚಿತರಾದಾಗ ಅಥವಾ ಸರ್ಕಾರ, ಅಧಿಕಾರಿಗಳು ಜನ ಸಾಮಾನ್ಯರ ಸಮಸ್ಯೆಗೆ ಸ್ಪಂಧಿಸದಿದ್ದಲ್ಲಿ ಇದರ ವಿರುದ್ಧ ಧ್ವನಿ ಎತ್ತಬೇಕಾಗಿದೆ. ಹೋರಾಟದಲ್ಲಿ ಕಷ್ಟಗಳು ಎದುರಾದರೂ ಅದಕ್ಕೆ ಯಾವುದೇ ಹಿಂದೇಟು ಹಾಕದೆ ಜನರ ಸಮಸ್ಯೆಗೆ ನ್ಯಾಯ ದೊರಕಿಸಿಕೊಡುವುದೇ ಮುಖ್ಯವಾಗಿದೆ. ಇದುವೇ ನಿಜವಾದ ಹೋರಾಟ ಎಂದು ಅವರು ಹೇಳಿದರು.
ಇದೇ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳನ್ನು ಅನ್ಸಾರ್ ಅಹಮದ್ ಘೋಷಿಸಿದರು. ಅಧ್ಯಕ್ಷರಾಗಿ ಎಂ.ಎಸ್.ಮನ್ಸೂರ್, ಗೌರವಾಧ್ಯಕ್ಷ ಸಂತಪ್ ಶೆಟ್ಟಿ ಕರ್ನಿರೆ, ಉಪಾಧ್ಯಕ್ಷ ಅಶೋಕ್ ಸಾಲ್ಯಾನ್, ಕಾರ್ಯದರ್ಶಿ ಸುಜಿತ್, ಜತೆಕಾರ್ಯದರ್ಶಿ ಮುನಾರ್ ಮತ್ತಿತರರನ್ನು ಆರಿಸಲಾಯಿತು. ಜಿಲ್ಲಾ ಉಪಾಧ್ಯಕ್ಷ ಸಿ.ಪಿ.ಅಬ್ದುಲ್ ರಹ್ಮಾನ್, ಮಾಜಿ ಅಧ್ಯಕ್ಷ ಆಸೀಫ್, ಜಿಲ್ಲಾ ತುಳು ಒಕ್ಕೂಟದ ಮತಾಕ್, ತುಳುನಾಡ ರಕ್ಷಣಾ ವೇದಿಕೆ ಅಧ್ಯಕ್ಷ ಯೂಸುಫ್, ಜಮಾಲ್, ಶಫಿ ಎಂ.ಎಸ್, ಇಲ್ಯಾಸ್ ಉಪಸ್ಥಿತರಿದ್ದರು.