ಬಂಟಕಲ್: ಆಧ್ಯಾತ್ಮಿಕ ಸತ್ಸಂಗ ಸಮಾರೋಪ
ಶಿರ್ವ, ಜು.29: ಬಂಟಕಲ್ಲಿನ ಶ್ರೀಮಧ್ವ ವಾದಿರಾಜ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಆ್ಯಂಡ್ ಮ್ಯಾನೇಜ್ಮೆಂಟ್ ವತಿಯಿಂದ ಸಂಸ್ಥೆಯ ಆವರಣದಲ್ಲಿ ಆಯೋಜಿಸಲಾದ ಆಧ್ಯಾತ್ಮಿಕ ಸತ್ಸಂಗ ಕಾರ್ಯಕ್ರಮದ ಸಮಾರೋಪ ಸಮಾ ರಂಭವು ರವಿವಾರ ಜರಗಿತು.
ಸೋದೆ ಮಠಾಧೀಶ ಶ್ರೀವಿಶ್ವವಲ್ಲಭ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿ, ಆಧ್ಯಾತ್ಮಿಕ ಚಿಂತನೆಯಿಂದ ಮಾನಸಿಕ ನೆಮ್ಮದಿ ಮತ್ತು ಆನಂದದ ಅನುಭೂತಿ ಸಾಧ್ಯ. ಜಗತ್ತು ಭಗವಂತನ ಅದ್ಭುತ ಸೃಷ್ಟಿ. ಭಗವಂತನ ಇರುವಿಕೆ ಹೊರಗಣ್ಣಿಗೆ ಕಾಣದಿದ್ದರೂ ಆತನ ಅಸ್ತಿತ್ವ ಈ ಜಗತ್ತಿನ ಕಣ ಕಣದಲ್ಲೂ ಅಡಕವಾಗಿದೆ. ಆಧ್ಯಾತ್ಮಿಕ ವಿಚಾರಗಳಿಂದ ಅದು ನಮ್ಮ ಒಳಗಣ್ಣಿಗೆ ತೋರುತ್ತದೆ ಎಂದರು.
ಶಿಕ್ಷಣ ತಜ್ಞ, ವೈದಿಕ ಜ್ಞಾನ ಪ್ರಚಾರಕ ಡಾ.ಪಿ.ಆರ್.ಮುಕುಂದ್ ಮಾತನಾಡಿ, ಸಾಧನೆಗೆ ವೈರಾಗ್ಯ ಅಗತ್ಯ. ಆದರೆ ವೈರಾಗ್ಯ ಇರಬೇಕಾದದ್ದು ನಮ್ಮ ಗುರಿಯನ್ನು ತಲುಪುವುದಕ್ಕೆ ಅಡ್ಡಿಪಡಿಸುವ ಅಂಶಗಳ ಬಗ್ಗೆ ಅಷ್ಟೇ ಎಂದು ತಿಳಿಸಿದರು.
ವಿದ್ವಾಂಸ ವ್ಯಾಸನಕೆರೆ ಪ್ರಂಜನಾಚಾರ್ಯ ಪೌರಾಣಿಕ ಪುರುಷರಿಂದ ಆಧ್ಯಾತ್ಮಿಕ ಅರ್ಜನೆ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದರು. ಸಂಸ್ಥೆಯ ಕಾರ್ಯದರ್ಶಿ ರತ್ನಕುಮಾರ್, ಕಾಲೇಜಿನ ಪ್ರಾಂಶುಪಾಲ ಡಾ.ತಿರುಮಲೇಶ್ವರ ಭಟ್ ಉಪಸ್ಥಿತರಿದ್ದರು. ವಿದ್ಯಾ ಭಟ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.