ಆಧಾರ್ ಎಲ್ಲಾ ಯೋಜನೆಗೂ ಅಗತ್ಯ- ಸಂಜೀವ ಮಠಂದೂರು
ಪುತ್ತೂರು, ಜು. 30: ಮುಂದಿನ ದಿನಗಲ್ಲಿ ಎಲ್ಲಾ ಯೋಜನೆಗಳಿಗೂ ಆಧಾರ್ ಅಗತ್ಯವಾಗಿದ್ದು, ಸಾರ್ವಜನಿಕರು ಆಧಾರ್ ಅದಾಲತ್ ವ್ಯವಸ್ಥೆಯನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.
ಅವರು ಸೋಮವಾರ ಪುತ್ತೂರಿನ ಸಮುದಾಯ ಭವನದಲ್ಲಿ ಆಡಳಿತ ಕೇಂದ್ರ ಬೆಂಗಳೂರು, ಜಿಲ್ಲಾಡಳಿತ ದ.ಕ. ಜಿಲ್ಲೆ ಇದರ ಸಂಯುಕ್ತ ಆಶ್ರಯದಲ್ಲಿ ತಾಲೂಕು ಮಟ್ಟದ ಆಧಾರ್ ಅದಾಲತ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ವಾರದ ಒಳಗಾಗಿ ಎಲ್ಲಾ ಗ್ರಾಮ ಪಂಚಾಯತ್ಗಳಲ್ಲಿ ಆದಾರ್ ನೋಂದಣಿ ವ್ಯವಸ್ಥೆಗಳನ್ನು ಕಲ್ಪಿಸಲಾಗುವುದು ಎಂದು ಹೇಳಿದರು.
ಸೋಮವಾರದಿಂದ ಶನಿವಾರದ ತನಕ ಅದಾಲತ್ ನಡೆಯಲಿದ್ದು, ದಿನವೊಂದಕ್ಕೆ 100 ಮಂದಿಯಂತೆ ಸುಮಾರು 600 ಮಂದಿಗೆ ಆಧಾರ್ ತಿದ್ದುಪಡಿ, ಹೊಸ ನೋಂದಣಿ ಮತ್ತು ಬೆರಳಚ್ಚು ಮರುಪರಿಶೀಲನೆ ನಡೆಯಲಿದೆ. ಮಕ್ಕಳಿಗೆ, ಬಾಣಂತಿಯರಿಗೆ ಮತ್ತು ವಿಕಲಚೇತನರಿಗೆ ವಿಶೇಷ ಆದ್ಯತೆ ನೀಡಲಾಗುವುದು ಎಂದು ಆಧಾರ್ ಜಿಲ್ಲಾ ಸಂಯೋಜನಾಧಿಕಾರಿ ನರೇಂದ್ರ ನಾಯ್ಕೆ ತಿಳಿಸಿದರು. ತಹಶೀಲ್ದಾರ್ ಅನಂತ ಶಂಕರ್, ಉಪ್ಪಿನಂಗಡಿ ಉಪತಹಶೀಲ್ದಾರ್ ಸದಾಶಿವ ನಾಯ್ಕಾ, ಕಂದಾಯ ನಿರೀಕ್ಷಕಿ ಶಶಿಕಲಾ ಉಪಸ್ಥಿತರಿದ್ದರು.
ಕಂದಾಯ ನಿರೀಕ್ಷಕ ದಯಾನಂದ ಹೆಗ್ಡೆ ಸ್ವಾಗತಿಸಿ, ವಂದಿಸಿದರು.