ಉಡುಪಿಯಲ್ಲಿ ವಿಶ್ವ ಮಟ್ಟದ ಬಂಟರ ಸಮ್ಮಿಲನ
ಉಡುಪಿ, ಜು.30: ಜಾಗತಿಕ ಬಂಟರ ಸಂಘಗಳ ಒಕ್ಕೂಟ ಹಾಗೂ ಉಡುಪಿ ಜಿಲ್ಲೆಯ ಸಮಸ್ತ ಬಂಟರ ಸಂಘಗಳ ಸಹಯೋಗದಲ್ಲಿ ವಿಶ್ವ ಮಟ್ಟದ ಸಮಸ್ತ ಬಂಟರನ್ನು ಒಗ್ಗೂಡಿಸಿ ‘ವಿಶ್ವ ಬಂಟರ ಸಮ್ಮಿಲನ-2018’ ಕಾರ್ಯಕ್ರಮ ಸೆ. 9ರಂದು ಉಡುಪಿಯ ಶ್ರೀಮತಿ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಂಗಣದಲ್ಲಿ ನಡೆಯಲಿದೆ ಎಂದು ಸಮ್ಮೇಳನ ಸಮಿತಿಯ ಅಧ್ಯಕ್ಷ ಇಂದ್ರಾಳಿ ಜಯಕರ ಶೆಟ್ಟಿ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಬೆಳಗ್ಗೆ 8 ಗಂಟೆಯಿಂದ ರಾತ್ರಿ 9 ರವರೆಗೆ ನಡೆಯುವ ಒಂದು ದಿನದ ಈ ಸಮಾವೇಶದಲ್ಲಿ ವಿಶ್ವದಾದ್ಯಂತ ಇರುವ ಸುಮಾರು 15,000 ದಿಂದ 20,000 ಬಂಟರು ಭಾಗವಹಿಸುವ ನಿರೀಕ್ಷೆ ಇದೆ ಎಂದರು.
ಸಮ್ಮೇಳನದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ದೇಶ-ವಿದೇಶಗಳಲ್ಲಿರುವ ನೂರಾರು ಮಂದಿ ಬಂಟ ಸಮುದಾಯದವರು ಭಾಗವಹಿಸುವ ‘ಅನಿವಾಸಿ ಭಾರತೀಯರು’, ಬಂಟರ ಸಂಸ್ಕೃತಿ, ಸಂಸ್ಕಾರವನ್ನು ಪ್ರತಿಬಿಂಬಿಸುವ ‘ಬಂಟರು ಅಂದು-ಇಂದು-ಮುಂದು’ ಸಂವಾದ ಕಾರ್ಯಕ್ರಮವೂ ನಡೆಯಲಿದೆ ಎಂದರು.
ಜಾಗತಿಕ ಮಟ್ಟದ ವಿವಿಧ ಬಂಟರ ಸಂಘಗಳ ಸದಸ್ಯರು ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಲಿದ್ದಾರೆ. ಬಂಟ ಸಮುದಾಯದ ಪ್ರಮುಖ ಚಲನಚಿತ್ರ ತಾರೆಯರೆಲ್ಲಾ ಸೇರಿ ‘ತಾರಾ ಸಮ್ಮಿಲನ’ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಇದಲ್ಲದೇ ಭಕ್ತಿ ಗೀತೆ, ಭಜನಾ ಕಾರ್ಯಕ್ರಮಗಳೊಂದಿಗೆ ಬಂಟ ಸಮುದಾಯದ ರಾಜಕೀಯ ವ್ಯಕ್ತಿಗಳು ‘ರಾಜಕೀಯ ಸಮ್ಮಿಲನ’ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಜಯಕರ ಶೆಟ್ಟಿ ಇಂದ್ರಾಳಿ ತಿಳಿಸಿದರು.
ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಮಾತನಾಡಿ, ಕಾರ್ಯಕ್ರಮದಲ್ಲಿ ರಾಜ್ಯದ ಮುಖ್ಯಮಂತ್ರಿ ಕುಮಾರಸ್ವಾಮಿ ಭಾಗವಹಿಸುವ ನಿರೀಕ್ಷೆ ಇದೆ. ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮದ ಯಶಸ್ಸಿಗಾಗಿ ವಿವಿಧ ಸಮಿತಿಗಳನ್ನು ರಚಿಸಲಾಗಿದೆ ಎಂದರು.
ಜಗತ್ತಿನ ನಾನಾ ಭಾಗಗಳಲ್ಲಿ ನೆಲೆಸಿರುವ ಎಲ್ಲಾ ಬಂಟರನ್ನು, ಬಂಟರ ಸಂಘ ಗಳನ್ನು ಒಗ್ಗೂಡಿಸಿ ಎಲ್ಲರ ನಡುವೆ ಸಂವಾದ ಏರ್ಪಡಿಸುವುದು. ಬಂಟರ ಮೂಲ ಸಂಸ್ಕಾರ, ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸುವುದು ಈ ಸಮ್ಮೇಳನದ ಉದ್ದೇಶವಾಗಿದೆ. ಕರಾವಳಿಯ ಗ್ರಾಮೀಣ ಭಾಗದ ಬಂಟರ ಭಾಗವಹಿಸುವಿಕೆಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ಐಕಳ ಹರೀಶ್ ಶೆಟ್ಟಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮ್ಮೇಳನದ ಸಂಚಾಲಕ ಕಾಪು ಲೀಲಾಧರ ಶೆಟ್ಟಿ, ಉಡುಪಿ ಬಂಟರದ ಸಂಘದ ಕಾರ್ಯದರ್ಶಿ ಮೋಹನ ಶೆಟ್ಟಿ ಮೂಡನಿಡಂಬೂರು, ಕೋಶಾಧಿಕಾರಿ ಮನೋಹರ ಶೆಟ್ಟಿ ತೋನ್ಸೆ, ಸಂತೋಷ ಶೆಟ್ಟಿ ಕಟಪಾಡಿ ಉಪಸ್ಥಿತರಿದ್ದರು.