‘ಸ್ವಚ್ಛ್ ಭಾರತ್’ನಲ್ಲಿ ಚೇರ್ಕಾಡಿ ಮಹಿಳಾ ಮಂಡಳಿ ವಿಶೇಷ ಸಾಧನೆ
ಉಡುಪಿ, ಜು.30: ಕಳೆದ 40 ವರ್ಷಗಳಿಂದ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿರುವ ಚೇರ್ಕಾಡಿ ಪೇತ್ರಿಯ ಸಮೃದ್ಧಿ ಮಹಿಳಾ ಮಂಡಳಿ ಇದೀಗ ನೆಹರು ಯುವಕೇಂದ್ರ ಉಡುಪಿ ಇವರ ಮಾರ್ಗದರ್ಶನದಲ್ಲಿ ‘ಸ್ವಚ್ಛ ಭಾರತ್ ಸಮ್ಮರ್ ಇಂಟರ್ನ್ಶಿಪ್ ಪ್ರೋಗ್ರಾಂ’ ನಲ್ಲಿ ವಿಶೇಷ ಸಾಧನೆಗಳನ್ನು ಮಾಡಿದೆ ಎಂದು ಸಮೃದ್ಧಿ ಮಹಿಳಾ ಮಂಡಳಿಯ ಈ ಅಭಿಯಾನ ತಂಡದ ನಾಯಕಿ ಪ್ರಸನ್ನಾ ಪ್ರಸಾದ್ ಭಟ್ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇ 1ರಿಂದ ಜು.31ರವರೆಗೆ ನಡೆದ ಕೇಂದ್ರ ಸರಕಾರದ ಈ ಕಾರ್ಯಕ್ರಮದಲ್ಲಿ ಸಮೃದ್ಧಿ ಮಹಿಳಾ ಮಂಡಳಿ 30 ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿ 108 ಗಂಟೆಗಳಿಗೂ ಅಧಿಕ ಸಮಯವನ್ನು ಇದಕ್ಕಾಗಿ ವಿನಿಯೋಗಿಸಿದೆ ಎಂದು ಪ್ರಸನ್ನಾ ಭಟ್ ತಿಳಿಸಿದರು.
ಮಹಿಳಾ ಮಂಡಳಿಯ ಒಟ್ಟು 13 ಸದಸ್ಯೆಯರು ಈ ಮೋದಿ ಅವರ ಸ್ವಚ್ಚತಾ ಅಭಿಯಾನದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಇವರು ಚೇರ್ಕಾಡಿ ಗ್ರಾಮ ಪರಿಸರದ ಬಸ್ನಿಲ್ದಾಣ, ಕೊಳೆಗೇರಿ, ವಿವಿಧ ಕಾಲೋನಿ, ಕಲ್ಲು ಕೋರೆಯ ವಲಸೆ ಕಾರ್ಮಿಕರ ಜೋಪಡಿ, ಕಾರ್ಖಾನೆ, ಶಾಲೆಗಳು, ಆರೋಗ್ಯ ಕೇಂದ್ರ, ಮಡಿಸಾಲು ಹೊಳೆಬದಿ, ರಸ್ತೆಯ ಚರಂಡಿ ಪ್ರದೇಶಗಳನ್ನು ಸ್ವಚ್ಚಗೊಳಿಸಿ ಅಲ್ಲಿ ಗಿಡಗಳನ್ನು ನೆಟ್ಟು ಪರಿಸರ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಗಿದ್ದರು ಎಂದವರು ವಿವರಿಸಿದರು.
7500ರಷ್ಟು ಜನಸಂಖ್ಯೆ ಹೊಂದಿರುವ ಚೇರ್ಕಾಡಿ ಗ್ರಾಪಂ ವ್ಯಾಪ್ತಿಯಲ್ಲಿ ಪರಿಸರ ಜಾಗೃತಿ ಮೂಡಿಸಿರುವ ಈ ಮಹಿಳೆಯರು, ಎಲ್ಲೆಂದರಲ್ಲಿ ಎಸೆದ ಪ್ಲಾಸ್ಟಿಕ್ ಬಾಟಲಿಗಳನ್ನು ಸಂಗ್ರಹಿಸಿ ತೂಗುವ ಹೂ ಕುಂಡಗಳಾಗಿ ಮಾರ್ಪಡಿಸಿ ಅವುಗಳಲ್ಲಿ ಗಿಡಗಳನ್ನು ನೆಟ್ಟು ಬೆಳೆಸಿ ಮನೆಗಳ ಅಂದವನ್ನು ಹೆಚ್ಚಿಸುವ ಮೂಲಕ ಗ್ರಾಮದ ಮಹಿಳೆಯರಿಗೆ ಇದರಲ್ಲಿ ತರಬೇತಿಯನ್ನೂ ನೀಡಿದ್ದರು.
ಪರಿಸರ ಉಳಿಸಲು ಪ್ಲಾಸ್ಟಿಕ್ ತ್ಯಜಿಸಿ ಎಂಬ ಜಾಥಾವನ್ನು ನಡೆಸಿ, ಬೀದಿ ನಾಟಕಗಳ ಮೂಲಕ ಪ್ಲಾಸ್ಟಿಕ್ ವಿರುದ್ಧ ಜನಜಾಗೃತಿ ಗೊಳಿಸಿದ್ದಲ್ಲದೇ ಗ್ರಾಮದಲ್ಲಿ ಸಂಚರಿಸುವ ಬಸ್ಗಳಿಗೆ ಕಸದ ಬುಟ್ಟಿಗಳನ್ನು ನೀಡಿ ಸ್ವಚ್ಛತೆಗೆ ಒತ್ತು ನೀಡಲು ಮವಿ ಮಾಡಿದ್ದೇವೆ ಎಂದರು.
ಪರಿಸರ ಉಳಿಸಲು ಪ್ಲಾಸ್ಟಿಕ್ ತ್ಯಜಿಸಿ ಎಂಬ ಜಾಥಾವನ್ನು ನಡೆಸಿ, ಬೀದಿ ನಾಟಕಗಳ ಮೂಲಕ ಪ್ಲಾಸ್ಟಿಕ್ ವಿರುದ್ಧ ಜನಜಾಗೃತಿ ಗೊಳಿಸಿದ್ದಲ್ಲದೇ ಗ್ರಾಮದಲ್ಲಿ ಸಂಚರಿಸುವ ಬಸ್ಗಳಿಗೆ ಕಸದ ಬುಟ್ಟಿಗಳನ್ನು ನೀಡಿ ಸ್ವಚ್ಛತೆಗೆ ಒತ್ತು ನೀಡಲು ಮನವಿ ಮಾಡಿದ್ದೇವೆ ಎಂದರು. ಗ್ರಾಮದ ಪ್ರಮುಖ ಸ್ಥಳಗಳ ಆವರಣ ಗೋಡೆಗೆ ಪರಿಸರ ಜಾಗೃತಿ ಮೂಡಿಸುವ ಘೋಷವಾಕ್ಯಗಳನ್ನು ಬರೆದು ಜನರಿಗೆ ಸ್ವಚ್ಛತೆಯ ಮಹತ್ವ ತಿಳಿಸಲು ಪ್ರಯತ್ನಿಸಿದ್ದೇವೆ. ‘ಕಾಡು ಬೆಳೆಸಿ ನಾಡು ಉಳಿಸಿ’ ಎಂದು ನಾಗಬನಗಳಲ್ಲಿ, ಅಂಗಡಿಗಳಲ್ಲಿ ಎಸೆದ ಬೊಂಡಗಳಲ್ಲಿ ಮಣ್ಣು ತುಂಬಿಸಿ ವಿವಿಧ ಮರಗಳ ಬೀಜ ನೆಟ್ಟು ಮರ ಬೆಳೆಸಲು ಪ್ರೋತ್ಸಾಹಿಸಿದ್ದೇವೆ ಎಂದವರು ವಿವರಿಸಿದರು.
ಮನೆ ಮನೆಯ ತ್ಯಾಜ್ಯಗಳನ್ನು ಸಂಗ್ರಹಿಸಿ ಘನತ್ಯಾಜ್ಯ, ಹಸಿತ್ಯಾಜ್ಯಗಳಾಗಿ ವಿಂಗಡಿಸಿ, ಹಸಿ ತ್ಯಾಜ್ಯದಿಂದ ಕಂಪೋಸ್ಟ್ ಗೊಬ್ಬರ ತಯಾರಿಸುವ ಕುರಿತು 50ಕ್ಕೂ ಅಧಿಕ ಮಂದಿಗೆ ತರಬೇತಿ ನೀಡಿದ್ದೇವೆ. ಸಾವಯವ ಗೊಬ್ಬರದಿಂದ ತಾರಸಿ ಮೇಲೆ ತರಕಾರಿ ಬೆಳೆಯುವ ಮೂಲ ಜನರಿಗೂ ಪ್ರೋತ್ಸಾಹ ನೀಡಿದ್ದೇವೆ.
ಮನೆ ಮನೆಯ ತ್ಯಾಜ್ಯಗಳನ್ನು ಸಂಗ್ರಹಿಸಿ ಘನತ್ಯಾಜ್ಯ, ಹಸಿತ್ಯಾಜ್ಯಗಳಾಗಿ ವಿಂಗಡಿಸಿ, ಹಸಿ ತ್ಯಾಜ್ಯದಿಂದ ಕಂಪೋಸ್ಟ್ ಗೊಬ್ಬರ ತಯಾರಿಸುವ ಕುರಿತು 50ಕ್ಕೂ ಅಧಿಕ ಮಂದಿಗೆ ತರಬೇತಿ ನೀಡಿದ್ದೇವೆ. ಸಾವಯವ ಗೊಬ್ಬರದಿಂದ ತಾರಸಿ ಮೇಲೆ ತರಕಾರಿ ಬೆಳೆಯುವ ಮೂಲಕ ಜನರಿಗೂ ಪ್ರೋತ್ಸಾಹ ನೀಡಿದ್ದೇವೆ. ಹಳೆಯ ಜೀನ್ಸ್ ಪ್ಯಾಂಟ್, ಟೀ-ಶರ್ಟ್, ಚೂಡಿದಾರ್ನಿಂದ ಆಕರ್ಷಕ ಚೀಲ ತಯಾರಿಸುವ ಕಾರ್ಯಾಗಾರವನ್ನು ಏರ್ಪಡಿಸಿ 35ಕ್ಕೂ ಅಧಿಕ ಮಂದಿಗೆ ಈ ಬಗ್ಗೆ ತರಬೇತಿ ನೀಡಿದ್ದೇವೆ. ಶಾಲಾ ಮಕ್ಕಳಿಗೂ ಈ ಬಗ್ಗೆ ಹೇಳಿಕೊಡಲಾಗಿದೆ ಎಂದರು.
24ತಂಡಗಳ ನೊಂದಣಿ: ಗೋಷ್ಠಿಯಲ್ಲಿ ಉಪಸ್ಥಿತರಿದ್ದ ನೆಹರು ಯುವ ಕೇಂದ್ರದ ಜಿಲ್ಲಾ ಸಂಯೋಜಕ ವಿಲ್ಫ್ರೆಡ್ ಡಿಸೋಜ ಮಾತನಾಡಿ, ಕೇಂದ್ರದ ಸ್ವಚ್ಚ ಭಾರತ್ ಸಮ್ಮರ್ ಇಂಟರ್ನ್ಶಿಪ್ ಪ್ರೋಗ್ರಾಂನಲ್ಲಿ ಜಿಲ್ಲೆಯ 24 ಸಂಘಗಳು ಹಾಗೂ ಏಳು ಮಂದಿ ತಮ್ಮ ಹೆಸರು ನೊಂದಾಯಿಸಿಕೊಂಡಿದ್ದು, ಜು.31ರ ಬಳಿಕ ರಾಷ್ಟ್ರೀಯ ಮಟ್ಟದಲ್ಲಿ ಇವುಗಳ ಸಾಧನೆಗಳನ್ನು ಪರಿಶೀಲಿಸಿ ಜಿಲ್ಲಾ ಮಟ್ಟದ ಮೂರು ಬಹುಮಾನಗಳಿಗೆ ಆಯ್ಕೆ ನಡೆಯಲಿದೆ ಎಂದರು. ಮೊದಲ ಮೂರು ಸ್ಥಾನ ಪಡೆಯುವ ತಂಡಗಳಿಗೆ ಕ್ರಮವಾಗಿ 30ಸಾವಿರ, 20ಸಾವಿರ ಹಾಗೂ 10ಸಾವಿರ ರೂ.ನಗದು ಬಹುಮಾನವಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಮೃದ್ಧಿ ಮಹಿಳಾ ಮಂಡಳಿಯ ಸದಸ್ಯೆಯರಾದ ಅಭಿಯಾನ ತಂಡದ ಸಹನಾ ಕೆ.ಹೆಬ್ಬಾರ್, ಮಲ್ಲಿಕಾ ಹರೀಶ್, ಲತಾ ಡಿ.ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.