ಕಟ್ಟಡ ನಿರ್ಮಾಣ ಸಂದರ್ಭ ಪುರಸಭೆಯ ನಿಯಮಗಳನ್ನು ಪಾಲಿಸಿ: ರಾಯಪ್ಪ
ಕಾಪು, ಜು. 30 : ಕಾಪು ಪುರಸಭಾ ವ್ಯಾಪ್ತಿಯಲ್ಲಿರುವ ಕೆಲವೊಂದು ಕಟ್ಟಡ ನಿರ್ಮಾಣ ಸಂದರ್ಭಗಳಲ್ಲಿ ಪುರಸಭೆಯ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸ ಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ರಾಯಪ್ಪ ಹೇಳಿದರು.
ಪುರಸಭಾ ಸಭಾಂಗಣದಲ್ಲಿ ಸೋಮವಾರ ನಡೆದ ಕಾಪು ಪುರಸಭೆಯ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಕೆಲವೊಂದು ಕಟ್ಟಡಗಳು ನಿಯಮ ಮೀರಿ ನಿರ್ಮಾಣ ಮಾಡಲಾಗುತ್ತಿದೆ. ಕಟ್ಟಡ ನಿರ್ಮಾಣ ಸಂದರ್ಭಗಳಲ್ಲಿ ತ್ಯಾಜ್ಯ ನೀರನ್ನು ಹೊರಗೆ ಬಿಡದೆ ಸಂಸ್ಕರಣಾ ಘಟಕ ನಿರ್ಮಾಣ ಮಾಡಬೇಕು. ಕಟ್ಟಡ ನಿರ್ಮಾಣದ ವೇಳೆ ನಿಯಮಗಳನ್ನು ಪಾಲಿಸುವ ಮೂಲಕ ಎಲ್ಲರೂ ಸಹಕಾರ ನೀಡಬೇಕು ಹೇಳಿದರು.
ಕೈಪುಂಜಾಲು ಬಳಿ ಎಡಿಬಿ ಬ್ರೇಕ್ ವಾಟರ್ ಕಾಮಗಾರಿಯಿಂದ ಈ ಬಾರಿ ಕಡಲು ಕೊರೆತ ಉಂಟಾಗಿದೆ. ಈ ಭಾಗದಲ್ಲಿ ಸಂಪೂರ್ಣ ತಡೆಗೋಡೆ ನಿರ್ಮಾಣ ಮಾಡುವ ಬಗ್ಗೆ ನಿರ್ಣಯ ಕೈಗೊಳ್ಳಬೇಕು. ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ್ಗೆ ಈ ಬಗ್ಗೆ ವರದಿ ಸಲ್ಲಿಸಬೇಕು ಎಂದು ಸದಸ್ಯ ಕಿರಣ್ ಆಳ್ವ ಆಗ್ರಹಿಸಿದರು. ಇದಕ್ಕುತ್ತರಿಸಿದ ಮುಖ್ಯಾಧಿಕಾರಿ, ಕಡಲು ಕೊರೆತ ತಡೆಗೋಡೆ ನಿರ್ಮಾಣ ಬಂದರು ಇಲಾಖೆ ಜವಾಬ್ದಾರಿ ಎಂದರು.
ಕಾಪು ಪುರಸಭೆಯ 6 ವಾರ್ಡ್ಗಳು ಕರಾವಳಿ ನಿಯಂತ್ರಣ ವಲಯದಡಿ ಬರುವುದರಿಂದ ಯಾವುದೇ ಅಭಿವೃದ್ಧಿ ಕಾಮಗಾರಿಗಳು ಮಾಡಲು ತೊಡ ಕಾಗುತ್ತಿದೆ. ಕಳೆದ ವರ್ಷ ನನ್ನ ವಾರ್ಡ್ಗೆ ಯಾವುದೇ ಅನುದಾನ ಲಭ್ಯವಾಗಿಲ್ಲ ಎಂದು ಆಳ್ವ ದೂರಿದರು.
ಆಗ್ರಹ: ಕಾಪು ಪುರಸಭೆ ವ್ಯಾಪ್ತಿಯಲ್ಲಿ ನೆರೆ ಹಾವಳಿಯಿಂದ ನೂರಾರು ಎಕರೆ ಭತ್ತದ ಬೆಳೆ ಹಾನಿಯಾಗಿದೆ. ಸರಕಾರದ ಬೆಳೆ ವಿಮೆ ಮತ್ತಿತರ ಯೋಜನೆಗಳ ಬಗ್ಗೆ ಜನರಿಗೆ ಇನ್ನೂ ಮಾಹಿತಿ ಇಲ್ಲ. ಕೃಷಿ ಭೂಮಿ, ಹಡಿಲು ಭೂಮಿ ಬಗ್ಗೆ ನಿಖರವಾದ ಮಾಹಿತಿ ಇಲ್ಲ. ಈ ಬಗ್ಗೆ ಅಧಿಕಾರಿಗಳಿಂದ ಸಮಗ್ರ ಲಿಖಿತ ಮಾಹಿತಿ ಪಡೆಯಬೇಕು ಎಂದು ವಿರೋಧ ಪಕ್ಷದ ನಾಯಕ ಅರುಣ್ ಶೆಟ್ಟಿ ಪಾದೂರು ಆಗ್ರಹಿಸಿದರು.
ಇಲಾಖೆಗಳ ಸಭೆ: ಕಾಪು ಪುರಸಭಾ ವ್ಯಾಪ್ತಿಯಲ್ಲಿ ಮಳೆಹಾನಿಯಿಂದ ಸಂಭವಿಸಿದ ಹಾನಿ ಬಗ್ಗೆ ಸಂಬಂಧಿಸಿದ ಇಲಾಖೆಗಳನ್ನು ಕರೆದು ದಿನಾಂಕ ಗೊತ್ತುಪಡಿಸಿ ಸಭೆ ನಡೆಸಲಾಗುವುದು. ಸಭೆಯಲ್ಲಿ ಕಂದಾಯ, ಕೃಷಿ, ಮೆಸ್ಕಾಂ ಮತ್ತಿತರ ಇಲಾಖೆ ಅಧಿಕಾರಿಗಳ ಸಭೆ ನಡೆಸಿ ಸಮಗ್ರ ವರದಿ ಪಡೆದು ಅರ್ಹರಿಗೆ ಪರಿಹಾರಧನ ವಿತರಿಸಲು ಕ್ರಮಕೈಗೊಳ್ಳಲಾಗುವುದು ಎಂದರು.
ಬೀದಿ ನಾಯಿಗಳ ಹಾವಳಿ: ಬೀದಿ ನಾಯಿಗಳ ಹಾವಳಿ ಬಗ್ಗೆ ಕಳೆದ ಒಂದು ವರ್ಷದ ಹಿಂದೆ ಕೌನ್ಸಿಲ್ ಗಮನಕ್ಕೆ ತರಲಾಗಿದೆ. ಯಾವುದೇ ಕ್ರಮ ಕೈಗೊಂಡಿಲ್ಲ. ಇದೀಗ ಬೀದಿ ನಾಯಿಗಳ ಸಂಖ್ಯೆ ಕಳೆದ ಬಾರಿಗಿಂತ ಶೇ.30ರಷ್ಷು ಹೆಚ್ಚಳವಾಗಿದೆ ಎಂದು ಸದಸ್ಯ ಲಕ್ಷ್ಮೀಶ ತಂತ್ರಿ ಗಮನ ಸೆಳೆದರು.
ಇದಕ್ಕೆ ಉತ್ತರಿಸಿದ ರಾಯಪ್ಪ, ಬೀದಿ ನಾಯಿಗಳ ಸಂತಾನ ಹರಣ ಶಸ್ತ್ರಚಿಕತ್ಸೆಗೆ 5 ಲಕ್ಷ ರೂಪಾಯಿ ತೆಗೆದಿರಿಸಲಾಗಿದೆ. ಅಂಗನವಾಡಿಗಳಿಗೆ ಸ್ವಂತ ಕಟ್ಟಡ ನಿರ್ಮಾಣಕ್ಕೆ ರೂ 15 ಲಕ್ಷ ಅನುದಾನ ಸರಕಾರದಿಂದ ಲಭ್ಯವಾಗಲಿದ್ದು, ಸೂಕ್ತ ಜಮೀನಿನ್ನು ಗುರುತಿಸಿ ನೀಡಿ ಎಂದು ಸಲಹೆ ನೀಡಿದರು. ಗ್ರಾಮ ಪಂಚಾಯ್ತಿ ಅವಧಿಯಲ್ಲಿ ನಿರ್ಮಾಣವಾದ ಕಟ್ಟಡದ ಬಗ್ಗೆ ಬ್ಯಾಂಕ್ ಸಾಲಕ್ಕೆ ಸಮಸ್ಯೆಯಾಗುತ್ತಿರುವ ಬಗ್ಗೆ ಅಮೀರ್ ಅವರು ಪ್ರಸ್ತಾವಿಸಿದರು.
ಪುರಸಭೆ ಅಧ್ಯಕ್ಷೆ ಮಾಲಿನಿ, ಉಪಾಧ್ಯಕ್ಷ ಕೆ.ಎಚ್.ಉಸ್ಮಾನ್, ಸ್ಥಾಯೀ ಸಮಿತಿ ಅಧ್ಯಕ್ಷೆ ಶಾಂತಲತಾ ಶೆಟ್ಟಿ ಇದ್ದರು.