ಪಡಿತರ ಚೀಟಿ: ಅವೈಜ್ಞಾನಿಕ ನಿಯಮಗಳನ್ನು ರದ್ದುಪಡಿಸುವಂತೆ ಒತ್ತಾಯಿಸಿ ಮನವಿ
ಬಂಟ್ವಾಳ, ಜು. 30: ಪಡಿತರ ಚೀಟಿ ವ್ಯವಸ್ಥೆಯಲ್ಲಿ ಅವೈಜ್ಞಾನಿಕ ನಿಯಮಗಳನ್ನು ರದ್ದುಪಡಿಸುವಂತೆ ಬಂಟ್ವಾಳ ತಾಪಂ ಸದಸ್ಯ ಪ್ರಭಾಕರ್ ಅವರು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಉ ಆಯುಕ್ತರಿಗೆ ಮನವಿ ಮೂಲಕ ಒತ್ತಾಯಿಸಿದ್ದಾರೆ.
ಹೊಸ ಪಡಿತರ ಚೀಟಿ ಮತ್ತು ಪಡಿತರ ಚೀಟಿಗೆ ಹೆಸರು ಸೇರ್ಪಡೆ, ತಿದ್ದುಪಡಿಗೆ ಆದಾಯ ಪ್ರಮಾಣ ಪತ್ರ ಕಡ್ಡಾಯ ಎಂದು ಅವಕಾಶ ಕಲ್ಪಿಸಿರುವುದು ಹಲವು ಕುಟುಂಬಗಳಿಗೆ ಕಷ್ಟಕರವಾಗಿದೆ. ಅಂದರೆ ಪಡಿತರ ಚೀಟಿಯಲ್ಲಿ ಹೆಸರು ಸೇರ್ಪಡೆ ಮಾಡಲಿರುವ ಸಣ್ಣ ಮಗುವಿನಿಂದ ಹಿಡಿದು ವಯಸ್ಕರವರೆಗೆ ಆದಾಯ ಪ್ರಮಾಣ ಪತ್ರ ಕೇಳಲಾಗಿರುತ್ತದೆ. ಒಂದು ಕುಟುಂಬದಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಆದಾಯ ಪ್ರಮಾಣ ಪತ್ರ ಪಡೆಯುವುದು ಸರಿಯಾಗಿದೆ. ಆದರೆ ಒಂದು ವರ್ಷದ ಮಗುವಿನಿಂದ ಹಿಡಿದು 18 ವರ್ಷದವರೆಗಿನ ಶಾಲಾ ಕಾಲೇಜು ಮಕ್ಕಳ ಹೆಸರು ಸೇರ್ಪಡೆಗೆ ಸಹ ಆದಾಯ ಪ್ರಮಾಣ ಪತ್ರ ಕೇಳುವುದು ಸರಿಯಲ್ಲ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಆದಾಯವಿಲ್ಲದ ಮಕ್ಕಳಿಗೆ ಕುಟುಂಬದ ಯಜಮಾನನ ಆದಾಯವೇ ಅಂತಿಮವಾಗಿರುತ್ತದೆ. ವಿಳಾಸದಲ್ಲಿ ಮಾತ್ರ ಅದಕ್ಕೆ ಬೇಕಾದ ಪೂರಕ ಅವಕಾಶ ಕಲ್ಪಿಸದೆ ಇರುವುದು ಅವೈಜ್ಞಾನಿಕವಾಗಿದೆ. ಆದುದುರಿಂದ ಹೊಸ ಪಡಿತರ ಚೀಟಿ ಮತ್ತು ಸೇರ್ಪಡೆ, ತಿದ್ದುಪಡಿ ಸಂದರ್ಭ 18 ವರ್ಷದೊಳಗಿನವರಿಗೆ ಆದಾಯ ಪ್ರಮಾಣ ಪತ್ರ ಹಾಜರುಪಡಿಸುವಿಕೆಯನ್ನು ಕೈಬಿಟ್ಟು ಒಂದೇ ಆದಾಯ ಪ್ರಮಾಣ ಪತ್ರದಲ್ಲಿ ಸೇರ್ಪಡೆ, ತಿದ್ದುಪಡಿಗೆ ಅವಕಾಶ ಕಲ್ಪಿಸಲು ಸಂಬಂಧಿಸಿದವರಿಗೆ ನಿರ್ದೇಶನ ನೀಡುವಂತೆ ಪ್ರಭಾಕರ ಪ್ರಭು ಅವರು ಮನವಿ ಮೂಲಕ ಒತ್ತಾಯಿಸಿದ್ದಾರೆ.