ಪೊಲೀಸರ ಕೈಸೇರಿದ ಶಿರೂರು ಸ್ವಾಮೀಜಿಯ ಮರಣೋತ್ತರ ವರದಿ
ಸಾವಿನ ಕಾರಣ ತಿಳಿಯಲು ಎಫ್ಎಸ್ಎಲ್ ವರದಿಯ ನಿರೀಕ್ಷೆ
ಉಡುಪಿ, ಜು.30: ಶಿರೂರು ಮಠಾಧೀಶ ಶ್ರೀಲಕ್ಷ್ಮೀವರ ತೀರ್ಥ ಸ್ವಾಮೀಜಿ ಸಾವಿನ ಪ್ರಕರಣಕ್ಕೆ ಸಂಬಂಧಿಸಿದ ಮರಣೋತ್ತರ ಪರೀಕ್ಷೆಯ ವರದಿಯು ಇಂದು ಪೊಲೀಸರ ಕೈ ಸೇರಿದೆ. ಆದರೆ ಇದರಲ್ಲಿ ಸಾವಿನ ಕಾರಣದ ಅಭಿಪ್ರಾಯವನ್ನು ಬಾಕಿ ಇರಿಸಿ, ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಯ (ಎಫ್ಎಸ್ಎಲ್) ನಿರೀಕ್ಷೆಯ ಬಗ್ಗೆ ಉಲ್ಲೇಖಿಸಲಾಗಿದೆ.
ಶಿರೂರು ಸ್ವಾಮೀಜಿಯ ಮರಣೋತ್ತರ ಪರೀಕ್ಷೆಯನ್ನು ನಡೆಸಿದ ಮಣಿಪಾಲ ಕೆಎಂಸಿ ಆಸ್ಪತ್ರೆಯ ತಜ್ಞ ವೈದ್ಯರ ತಂಡವು ಎಂಟು ಪುಟಗಳ ವರದಿಯನ್ನು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ್ ನಿಂಬರ್ಗಿ ಅವರಿಗೆ ಸಲ್ಲಿಸಿದ್ದು, ಇದರಲ್ಲಿ ಸ್ವಾಮೀಜಿಯ ಲೀವರ್, ಕಿಡ್ನಿ, ರಕ್ತಸ್ರಾವ ಸೇರಿದಂತೆ ವಿವಿಧ ಅಂಗಾಂಗಗಳ ಕುರಿತು ಪರೀಕ್ಷಿಸಿದ ಸಮಗ್ರ ವಿವರ ತಿಳಿಸಲಾಗಿದೆ.
ಆದರೆ ವರದಿಯಲ್ಲಿ ಸಾವಿನ ಕಾರಣದ ಅಭಿಪ್ರಾಯವನ್ನು ಬಾಕಿ ಇರಿಸಲಾಗಿದ್ದು, ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಗೆ ಕಾಯಲಾಗುತ್ತಿದೆ. ಈ ವರದಿ ಬಂದ ಬಳಿಕ ಎರಡು ವರದಿಯನ್ನು ತಾಳೆ ಮಾಡಿ ವೈದ್ಯರು ಸಾವಿಗೆ ಕಾರಣವನ್ನು ತಿಳಿಸಲಿದ್ದಾರೆ ಎಂದು ಮೂಲಗಳು ಹೇಳಿವೆ. ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ವಿಷದ ಅಂಶಗಳ ಬಗ್ಗೆ ವೈದ್ಯರು ಯಾವುದೇ ಉಲ್ಲೇಖ ಮಾಡಿಲ್ಲ ಎಂದು ತಿಳಿದುಬಂದಿದೆ.
ವರದಿ ಪೊಲೀಸರ ಕೈಸೇರಿರುವ ಹಿನ್ನೆಲೆಯಲ್ಲಿ ಪ್ರಕರಣದ ತನಿಖಾ ತಂಡ ಸಭೆ ನಡೆಸಿ ಈ ಕುರಿತು ಚರ್ಚಿಸಿದೆ ಎನ್ನಲಾಗಿದೆ. ವಿಧಿ ವಿಜ್ಞಾನ ಪ್ರಯೋ ಗಾಲಯದ ವರದಿ ಬರಲು ಇನ್ನು ಕೂಡ ಒಂದು ತಿಂಗಳು ಬೇಕಾಗುತ್ತದೆ. ಆದರೂ ಪೊಲೀಸರು ಈ ವರದಿಗೆ ಕಾಯದೆ ಪ್ರಕರಣದ ವಿಚಾರಣೆಯನ್ನು ಮುಂದುವರೆಸಿದ್ದಾರೆ. ಈ ಸಂಬಂಧ ಶಿರೂರು ಸ್ವಾಮೀಜಿಯ ಆಪ್ತೆಯಾಗಿದ್ದ ಮಹಿಳೆಯನ್ನು ಮತ್ತೆ ವಿಚಾರಣೆಗೆ ಒಳಪಡಿಸಿರುವುದಾಗಿ ಮೂಲಗಳು ತಿಳಿಸಿವೆ.
ಅನಾರೋಗ್ಯದಿಂದ ಜು.17ರಂದು ಬೆಳಗ್ಗೆ 11ಗಂಟೆಗೆ ಉಡುಪಿಯ ಗಾಂಧಿ ಆಸ್ಪತ್ರೆಗೆ ದಾಖಲಾಗಿದ್ದ ಶಿರೂರು ಸ್ವಾಮೀಜಿ, ಹೆಚ್ಚಿನ ಚಿಕಿತ್ಸೆಗಾಗಿ ಜು.18 ರಂದು ಬೆಳಗಿನ ಜಾವ 1.05ರ ಸುಮಾರಿಗೆ ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದರು. ಜು.19ರಂದು ಬೆಳಗ್ಗೆ 8:30ರ ಸುಮಾರಿಗೆ ಶಿರೂರು ಸ್ವಾಮೀಜಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದರು.
ದೇಹದೊಳಗಿನ ತೀವ್ರ ರಕ್ತಸ್ರಾವದಿಂದ ಸ್ವಾಮೀಜಿ ಮೃತಪಟ್ಟಿದ್ದು, ಆಸ್ಪತ್ರೆಯ ವೈದ್ಯಕೀಯ ವರದಿ ಪ್ರಕಾರ ಅವರ ಸಾವಿಗೆ ವಿಷ ಪ್ರಾಶನವೇ ಕಾರಣ ಎಂಬ ಶಂಕೆ ವ್ಯಕ್ತವಾಗಿದೆ ಎಂದು ಅಂದು ವೈದ್ಯರು ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಸ್ವಾಮೀಜಿಯ ಸಹೋದರ ಲಾತವ್ಯ ಆಚಾರ್ಯ ಸ್ವಾಮೀಜಿಯ ಸಾವಿನ ಬಗ್ಗೆ ಸಂಶಯ ಇರುವುದಾಗಿ ಹಿರಿಯಡ್ಕ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣದ ತನಿಖಾಧಿಕಾರಿಯಾಗಿರುವ ಕಾರ್ಕಳ ಡಿವೈಎಸ್ಪಿ ಬೆಳ್ಳಿಯಪ್ಪ ನೇತೃತ್ವ ದಲ್ಲಿ ತನಿಖೆ ಮುಂದುವರೆದಿದೆ.