ಆ.7: ರಾಷ್ಟ್ರ ವ್ಯಾಪಿ ಸಾರಿಗೆ ಮುಷ್ಕರ
ಉಡುಪಿ, ಜು.30: ಮೋಟಾರು ವಾಹನ (ತಿದ್ದುಪಡಿ) ಮಸೂದೆ-2017ನ್ನು ಹಿಂಪಡೆಯುವಂತೆ ಹಾಗೂ ಅಸಂಘಟಿತ ಸಾರಿಗೆ ಕಾರ್ಮಿಕರಿಗೆ ಸಾಮಾಜಿಕ ಸುರಕ್ಷಾ ಕಾಯ್ದೆಯನ್ನು ಜಾರಿಗೊಳಿಸುವಂತೆ ಒತ್ತಾಯಿಸಿ ರಸ್ತೆ ಸಾರಿಗೆ ರಂಗದಲ್ಲಿರುವ ಕಾರ್ಮಿಕರು ಹಾಗೂ ಮಾಲಕರ ಸಂಘಟನೆಗಳ ವೇದಿಕೆ ಆ.7ರಂದು ರಾಷ್ಟ್ರ ವ್ಯಾಪಿ ಮುಷ್ಕರಕ್ಕೆ ಕರೆ ನೀಡಿವೆ.
ದೇಶದ ಸಾರಿಗೆ ಉದ್ದಿಮೆ ಈಗ ಗಂಭೀರ ಬಿಕ್ಕಟ್ಟಿನಲ್ಲಿದೆ. ಇದರಲ್ಲಿ ತೊಡಗಿಸಿ ಕೊಂಡಿರುವ ಕೋಟ್ಯಾಂತರ ಮಂದಿ ಕಾರ್ಮಿಕರು, ಮಾಲಕರು ಕಂ ಚಾಲಕರು, ಸಣ್ಣ ಮಾಲಕರು ಸರಕಾರದಿಂದ ಯಾವುದೇ ಸೌಲಭ್ಯ ಹಾಗೂ ಸವಲತ್ತುಗಳಿಲ್ಲದೇ ಜನರಿಗೆ ಸೇವೆ ನೀಡುತಿದ್ದಾರೆ. ಆದರೆ ಇವರಿಗೆ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರಿಂದ ನಿರಂತರ ಕಿರುಕುಳ ತಪ್ಪಿಲ್ಲ. ಇಂತಹ ಸಂದರ್ಭದಲ್ಲಿ ಕೇಂದ್ರ ಸರಕಾರ ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ ತಂದು ಇದನ್ನೇ ನಂಬಿರುವ ಕೋಟ್ಯಾಂತರ ಮಂದಿಯನ್ನು ಸರ್ವನಾಶ ಮಾಡಿ, ಇಡೀ ಉದ್ದಿಮೆಯನ್ನು ದೇಶದ ಹಾಗೂ ವಿದೇಶೀ ಕಾರ್ಪೋರೇಟ್ ಕಂಪೆನಿ ಗಳಿಗೆ ಒಪ್ಪಿಸಲು ಹೊರಟಿದೆ ಎಂದು ವೇದಿಕೆ ಆರೋಪಿಸಿದೆ.
ದೇಶದ ಸಾರಿಗೆ ಉದ್ದಿಮೆಯನ್ನು ರಕ್ಷಿಸಲು ಹಾಗೂ ಕಾರ್ಮಿಕರ ಜೀವನಾಧಾ ರವನ್ನು ಉಳಿಸಲು ‘ಮೋಟಾರು ವಾಹನ (ತಿದ್ದುಪಡಿ) ಮಸೂದೆ-2017ನ್ನು ಕೇಂದ್ರ ಸರಕಾರ ಕೈಬಿಡಬೇಕೆಂದು ಒತ್ತಾಯಿಸಿ ಈ ಮುಷ್ಕರ ನಡೆಸಲು ಕೇಂದ್ರ ಕಾರ್ಮಿಕ ಸಂಘಟನೆಗಳು ನಿರ್ಧರಿಸಿವೆ ಎಂದು ಅದು ಹೇಳಿಕೆಯಲ್ಲಿ ತಿಳಿಸಿದೆ.