ಆ.7ರಿಂದ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಬೀಡಿ ಕಾರ್ಮಿಕರಿಂದ ಅನಿರ್ಧಿಷ್ಟ ಮುಷ್ಕರ
ಉಡುಪಿ, ಜು.30: ಕನಿಷ್ಠ ಕೂಲಿ, ತುಟ್ಟಿಭತ್ಯೆ ಜಾರಿಗೆ ಹಾಗೂ ವಾರದಲ್ಲಿ ಆರು ದಿನಗಳ ಕೆಲಸಕ್ಕೆ ಒತ್ತಾಯಿಸಿ ಆ.7ರಿಂದ ಬೀಡಿ ಕಾರ್ಮಿಕರು ರಾಜ್ಯದಾದ್ಯಂತ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಿದ್ದಾರೆ ಎಂದು ಕರ್ನಾಟಕ ರಾಜ್ಯ ಬೀಡಿ ಕಾರ್ಮಿಕರ ಫೆಡರೇಷನ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.
ರಾಜ್ಯದಲ್ಲಿರುವ ಸುಮಾರು 10 ಲಕ್ಷ ಬೀಡಿ ಕಾರ್ಮಿಕರು ಸೇರಿದಂತೆ ಬೀಡಿ ಉದ್ಯಮದಲ್ಲಿ ದುಡಿಯುತ್ತಿರುವ ಇತರೆ ಕಾರ್ಮಿಕರ ಕನಿಷ್ಠ ವೇತನವನ್ನು ಕಳೆದ ಎ.1ರಿಂದ ಜಾರಿಗೆ ಬರುವಂತೆ ಪರಿಷ್ಕರಿಸಿ ರಾಜ್ಯ ಸರಕಾರ ಅಧಿಸೂಚನೆ ಹೊರಡಿಸಿದೆ. ಇದನ್ನು ಜಾರಿಗೊಳಿಸುವಂತೆ, ಎಲ್ಲಾ ಬೀಡಿ ಕಾರ್ಮಿಕರಿಗೆ ವಾರದಲ್ಲಿ ಆರು ದಿನದ ಕೆಲಸ ನೀಡಬೇಕು, ತಪ್ಪಿದಲ್ಲಿ ಗ್ಯಾರಂಟಿಡ್ ವೇತನ ನೀಡಬೇಕು. ಬೀಡಿ ಕಾರ್ಮಿಕರಿಗೆ ಬಿಪಿಎಲ್ ಕಾರ್ಡ್ ನೀಡಬೇಕು.
ಉಚಿತ ವಸತಿ ಯೋಜನೆ ರೂಪಿಸಿ ಮನೆ ನೀಡಬೇಕು ಇವೇ ಮೊದಲಾದ ಬೇಡಿಕೆ ಗಳನ್ನು ಈಡೇರಿಸುವಂತೆ ಒತ್ತಾಯಿಸಿ ಬೀಡಿ ಕಾರ್ಮಿಕರು ರಾಜ್ಯಾದ್ಯಂತ ಕಾರ್ಮಿಕ ಇಲಾಖೆಗಳ ಮುಂದೆ ಆ.7ರಿಂದ ಅನಿರ್ಧಿಷ್ಟಾವಧಿಗೆ ಧರಣಿ ಪ್ರತಿಭಟನೆ ನಡೆಸಲಿದ್ದಾರೆ ಎಂದು ಕರ್ನಾಟಕ ರಾಜ್ಯ ಬೀಡಿ ಕಾರ್ಮಿಕರ ಫೆಡರೇಷನ್(ಸಿಐಟಿಯು) ರಾಜ್ಯ ಸಮಿತಿ ತಿಳಿಸಿದೆ.