ಫರಂಗಿಪೇಟೆ: ಯುವಕನಿಗೆ ಹಲ್ಲೆ ಪ್ರಕರಣ: ನಾಲ್ವರು ಸೆರೆ
ಬಂಟ್ವಾಳ, ಜು. 29: ಫರಂಗಿಪೇಟೆಯಲ್ಲಿ ಯುವಕನೋರ್ವನಿಗೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳ ಗ್ರಾಮಾಂತರ ಪೊಲೀಸರು ನಾಲ್ವರನ್ನು ಸೋಮವಾರ ಬಂಧಿಸಿದ್ದಾರೆ.
ಫರಂಗಿಪೇಟೆ ನಿವಾಸಿ, ಆಟೊ ಚಾಲಕ ಉಮರ್ ಫಾರೂಕ್ (36), ಅಮ್ಮೆಮಾರ್ ನಿವಾಸಿಗಳಾದ ಅರ್ಫಾತ್ (28), ಮುಹಮ್ಮದ್ ಅಫ್ರಿದ್ (21) ಹಾಗೂ ಮುಹಮ್ಮದ್ ಇಕ್ಬಾಲ್ (32) ಬಂಧಿತರು. ಎಲ್ಲರೂ ಸ್ಥಳೀಯರೇ ಆಗಿದ್ದು, ಉಳಿದ ಆರೋಪಿಗಳನ್ನೂ ಶೀಘ್ರ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ಹಿನ್ನೆಲೆ: ಫರಂಗಿಪೇಟೆಯಲ್ಲಿ ರವಿವಾರ ಮಧ್ಯಾಹ್ನ ಸುಮಾರು 3 ಗಂಟೆಯ ಹೊತ್ತಿಗೆ ಉಡುಪಿ ಕೋಟದ ನಿವಾಸಿಯಾದ ಸುರೇಶ ಎಂಬಾತ ತಮ್ಮ ಕಾರಿನಲ್ಲಿ ಕೆಲಸ ನಿಮಿತ್ತ ಬಂಟ್ವಾಳದಿಂದ ಮಂಗಳೂರಿಗೆ ತೆರಳುತ್ತಿದ್ದ ಸಂದರ್ಭ, ತಮಗೆ ಪರಿಚಯದ ಮಹಿಳೆಯೊಬ್ಬರನ್ನು ನೋಡಿ ಕಾರು ನಿಲ್ಲಿಸಿ ಮಾತನಾಡಿದ್ದ. ಈ ಬಗ್ಗೆ ಆಕ್ಷೇಪ ವ್ಯಕ್ತ ಪಡಿಸಿ ಸುಮಾರು 8 ರಿಂದ 10 ಮಂದಿಯ ಗುಂಪೊಂದು ಕಾರನ್ನು ಅಡ್ಡಗಟ್ಟಿ ಸುರೇಶ್ಗೆ ಹಲ್ಲೆ ನಡೆಸಿತ್ತು. ಈ ಸಂಬಂಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.