ಹೆಸರು ದುರ್ಬಳಕೆ: ಆಡಳಿತಾಧಿಕಾರಿಯನ್ನು ತರಾಟೆ ತೆಗೆದುಕೊಂಡ ಶಾಸಕ ರಾಜೇಶ್ ನಾಯ್ಕ
ಅಕ್ಷರ ಭಾರತಿ ವಿದ್ಯಾಲಯದಲ್ಲಿ ಪರಿಶೀಲನಾ ಸಭೆ
ಬಂಟ್ವಾಳ, ಜು. 30: ಬಂಟ್ವಾಳ ತಾಲೂಕು ಚೆನ್ನೈತ್ತೋಡಿ ಗ್ರಾಪಂ ವ್ಯಾಪ್ತಿಯ ಅಜ್ಜಿಬೆಟ್ಟು ಗ್ರಾಮದ ಆಲದಪದವು ಅಕ್ಷರ ಭಾರತಿ ವಿದ್ಯಾಲಯದಲ್ಲಿ ಜು. 28ರಂದು ವಿದ್ಯಾರ್ಥಿಗಳ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳ ನಡೆದು ವಿದ್ಯಾರ್ಥಿಯೋರ್ವ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಪ್ರಕರಣದ ಕುರಿತು ಶಾಸಕ ರಾಜೇಶ್ ನಾಕ್ ಉಳಿಪ್ಪಾಡಿ ಅವರು ಶಾಲೆಗೆ ಸೋಮವಾರ ಭೇಟಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಹೆತ್ತವರು, ಶಿಕ್ಷಣ ಇಲಾಖೆ, ಪೋಲಿಸ್ ಇಲಾಖೆ ಹಾಗೂ ಶಾಲಾ ಆಡಳಿತ ಮಂಡಳಿಯೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಠಿಯಿಂದ ಶಾಲೆಗಳು ಅಗತ್ಯ ಎಚ್ಚರಿಕೆಗಳನ್ನು ಅಳವಡಿಸಿಕೊಳ್ಳಬೇಕು. ಶಾಲೆಯಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿಕೊಳ್ಳಬೇಕು. ಈ ಬಗ್ಗೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳದಿದ್ದಲ್ಲಿ ಅಂತಹ ಶಾಲೆಯ ಮೇಲೆ ಇಲಾಖಾ ಕ್ರಮಕೈಗೊಳ್ಳಲು ಕ್ಷೇತ್ರ ಶಿಕ್ಷಣಾಧಿಕಾರಿ ಅವರಿಗೆ ಸೂಚಿಸಿದರು.
ಘಟನೆಯ ಸಂಪೂರ್ಣ ಮಾಹಿತಿಯನ್ನು ಈಗಾಗಲೇ ಪಡೆದುಕೊಂಡಿದ್ದು, ವಿದ್ಯಾರ್ಥಿಯ ಆರೋಗ್ಯ ವಿಚಾರಣೆ ನಡೆಸಲಾಗಿದೆ. ಸದ್ಯ ವಿದ್ಯಾರ್ಥಿ ಅಪಾಯದಿಂದ ಪಾರಾಗಿದ್ದಾನೆ ಎಂದ ಅವರು ಅಗತ್ಯವಿದ್ದಲ್ಲಿ ವಿದ್ಯಾರ್ಥಿಯ ಚಿಕಿತ್ಸೆಯ ಖರ್ಚು ವೆಚ್ಚ ಭರಿಸಲಾಗುವುದು ಎಂದು ವಿದ್ಯಾರ್ಥಿಯ ಹೆತ್ತವರಲ್ಲಿ ತಿಳಿಸಿದರು.
ವಿದ್ಯಾರ್ಥಿಗಳ ನಡುವೆ ಘರ್ಷಣೆಯಾಗದಂತೆ ವಿದ್ಯಾರ್ಥಿಗಳನ್ನು ಸಮಾಲೋಚಿಸಿ ಅವರಿಗೆ ಸೂಕ್ತ ಮಾರ್ಗದರ್ಶನ ನೀಡುವಂತೆ ಶಿಕ್ಷಕರಿಗೆ ಹಾಗೂ ಹೆತ್ತವರಿಗೆ ಸೂಚಿಸಿದ ಅವರು ಶಾಲೆಯಲ್ಲಿ ಮಕ್ಕಳ ಸುರಕ್ಷ ಸಮಿತಿ ರಚಿಸಿ ಕ್ರಮಗಳನ್ನು ಅನುಷ್ಠಾನಗೊಳಿಸಬೇಕು ಎಂದು ಹೇಳಿದರು.
ಜಿಪಂ ಸದಸ್ಯ ಎಂ. ತುಂಗಪ್ಪ ಬಂಗೇರ, ಪುಂಜಾಲಕಟ್ಟೆ ಠಾಣಾಧಿಕಾರಿ ಸತೀಶ್ ಬಲ್ಲಾಳ್, ಕ್ಷೇತ್ರ ಶಿಕ್ಷಣಾಧಿಕಾರಿ ಶಿವಪ್ರಕಾಶ್ ಎನ್., ಜನತಾ ಬಜಾರ್ ನಿರ್ದೇಶಕ ಪುರುಷೋತ್ತಮ ಶೆಟ್ಟಿ ವಾಮದಪದವು, ಹೆತ್ತವರಾದ ಲಿಂಗಪ್ಪ ಪೂಜಾರಿ, ಯೋಗೀಶ್ ಆಚಾರ್ಯ, ರಾಜೇಂದ್ರ ಸಾಲ್ಯಾನ್, ಶಾಲಾ ಸಂಚಾಲಕ ಮೋಹನ್ ರೈ, ಟ್ರಸ್ಟ್ ಕಾರ್ಯದರ್ಶಿ ಭಾರತಿ ಎಸ್.ರೈ., ಶಿಕ್ಷಕ ವೃಂದ, ಶಿಕ್ಷಕ-ರಕ್ಷಕ ಸಂಘದ ಸದಸ್ಯರು ಉಪಸ್ಥಿತರಿದ್ದರು.
ಜು.28ರಂದು ಮಧ್ಯಾಹ್ನ ಶಾಲೆ ಬಿಡುವ ಹೊತ್ತಿಗೆ ಒಂದೆ ತರಗತಿಗೆ ಸೇರಿದ ವಿದ್ಯಾರ್ಥಿಗಳ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳ ನಡೆದು ವಿದ್ಯಾರ್ಥಿಯೊಬ್ಬನಿಗೆ ಹಲ್ಲೆಯಾಗಿತ್ತು. ಗಂಭೀರ ಗಾಯಗೊಂಡ ಆತನನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗಿತ್ತು. ಇದೀಗ ಹೆತ್ತವರೊಂದಿಗೆ ಸಮಾಲೋಚಿಸಿ ಮಾತುಕತೆಯಲ್ಲಿ ಪರಿಹರಿಸಲಾಗಿದೆ ಎಂದು ತಿಳಿದು ಬಂದಿದೆ.
ಶಾಸಕರ ಹೆಸರು ದುರ್ಬಳಕೆ
ಘಟನೆ ನಡೆದ ಬಳಿಕ ಶಾಲಾ ಆಡಳಿತಾಧಿಕಾರಿ ಆಸ್ಪತ್ರೆಯಲ್ಲಿ ಹಾಗೂ ಪೊಲೀಸರಲ್ಲಿ ಪ್ರಕರಣದ ಬಗ್ಗೆ ಕೇಸು ದಾಖಲಿಸ ಬಾರದೆಂದು ಶಾಸಕರ ಹೆಸರು ಉಲ್ಲೇಖಿಸಿದ್ದು, ಈ ಬಗ್ಗೆ ಮಾಹಿತಿ ಪಡೆದ ಶಾಸಕರು, ಆಡಳಿತಾಧಿಕಾರಿಯನ್ನು ಸಭೆಯಲ್ಲಿ ತರಾಟೆಗೆ ತೆಗೆದುಕೊಂಡರು. ತನ್ನ ಹೆಸರಿನ ದುರ್ಬಳಕೆ ಬಗ್ಗೆ ಎಚ್ಚರಿಕೆ ನೀಡಿದರು. ಘಟನೆ ನಡೆದ ಬಳಿಕ ಶಿಕ್ಷಣ, ಪೊಲೀಸ್ ಇಲಾಖೆ ಮತ್ತು ತನಗೆ ಮಾಹಿತಿ ನೀಡದಿರುವ ಬಗ್ಗೆ ಶಾಲಾ ಆಡಳಿತವನ್ನು ತರಾಟೆಗೆ ತೆಗೆದು ಕೊಂಡ ಪ್ರಸಂಗವೂ ನಡೆಯಿತು.