ರಾಮಚಂದ್ರಾಪುರ ಮಠ ಅವಹೇಳನ ಪ್ರಕರಣ: ವಿಚಾರವಾದಿ ಪಾರ್ವತೇಶ್ಗೆ ಜಾಮೀನು
ಪುತ್ತೂರು, ಜು. 30: ಹೊಸ ನಗರ ರಾಮಚಂದ್ರಪುರ ಮಠದ ವಿರುದ್ಧ ಅವಹೇಳನಕಾರಿ ಲೇಖನ ಬರೆದ ಪ್ರಕರಣಕ್ಕೆ ಸಂಬಂಧಿಸಿ ಆರೋಪ ಎದುರಿಸುತ್ತಿದ್ದ ಖ್ಯಾತ ವಿಚಾರವಾದಿ-ಬರಹಗಾರ ಬಿಳಿದಲೆ ಈಶ ಪ್ರಖ್ಯಾತಿಯ ಪಾರ್ವತೇಶ್ ಅವರಿಗೆ ಪುತ್ತೂರು ನ್ಯಾಯಾಲಯ ಶನಿವಾರ ಜಾಮೀನು ನೀಡಿದೆ.
ಗೌರಿ ಲಂಕೇಶ್ ಪತ್ರಿಕೆಯಲ್ಲಿ 2015ರಲ್ಲಿ ರಾಮಚಂದ್ರ ಮಠದ ವಿರುದ್ಧ ಅವಹೇಳನಕಾರಿ ಲೇಖನವನ್ನು ಪ್ರಕಟಿಸಲಾಗಿದೆ ಎಂದಿ ಆರೋಪಿಸಿ ಪತ್ರಕರ್ತೆ ಗೌರಿ ಲಂಕೇಶ್ ಹಾಗೂ ಹಿರಿಯ ಪತ್ರಕರ್ತರಾದ ವಿಚಾರವಾದಿ ಬಿಳಿದಲೆ ಈಶ ಖ್ಯಾತಿಯ ಪಾರ್ವತೇಶ್ ವಿರುದ್ಧ ಕೇಶವ ಕೃಷ್ಣ ಎಂಬವರು ಪುತ್ತೂರಿನ ಹಿರಿಯ ನ್ಯಾಯಾಲಯದಲ್ಲಿ ಖಾಸಗಿ ದಾವೆ ಹೂಡಿದ್ದರು. ಕೇಶವ ಕೃಷ್ಣ ಅವರ ಖಾಸಗಿ ದೂರಿನ ಮೇರೆಗೆ ನ್ಯಾಯಾಲಯಕ್ಕೆ ಈ ಅವಹೇಳನಕಾರಿ ಲೇಖನದ ವಿರುದ್ಧ ದಾವೆ ಹೂಡಿದ್ದರ ಈ ಖಾಸಗಿ ದೂರಿನ ಬಗ್ಗೆ ವಿಚಾರಣೆ ಕೈಗೆತ್ತಿಕೊಂಡಿದ್ದ ನ್ಯಾಯಾಲಯ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಕ್ರಮ ಕೈ ಗೊಳ್ಳುವಂತೆ ಪುತ್ತೂರು ನಗರ ಪೊಲೀಸರಿಗೆ ಆದೇಶಿಸಿತ್ತು.
ಪ್ರಕರಣದ ಬಗ್ಗೆ ಪೋಲಿಸರು ತನಿಖೆ ನಡೆಸಿ ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಸಿದ್ದರು. ಇದನ್ನು ಪ್ರಶ್ನಿಸಿ ಪಿರ್ಯಾದಿದಾರ ಮೇಲ್ಮನವಿ ಸಲ್ಲಿಸಿದ್ದರು. ಅವರ ಮನವಿಯನ್ನು ಪುರಸ್ಕರಿಸಿ ಸಂಜ್ಞೇಯ ಅಪರಾಧ ಎಂದು ಘೋಷಿಸಿದ ಪುತ್ತೂರಿನ ಪ್ರಧಾನ ಹಿರಿಯ ನ್ಯಾಯಾಲಯ ಆರೋಪಿಗಳ ವಿರುದ್ದ ಐ.ಪಿ.ಸಿ ಸೆಕ್ಸನ್ 295(ಎ),153,505 ಪ್ರಕರಣ ದಾಖಲಿಸಿ ಸಮನ್ಸ್ ಜಾರಿ ಮಾಡಿತ್ತು.
ಈ ಮೊದಲೇ ಪತ್ರಕರ್ತೆ ಗೌರಿ ಲಂಕೇಶ್ ನ್ಯಾಯಾಲಯ ಮುಂದೆ ಶರಣಾಗಿ ಜಾಮೀನು ಪಡೆದಿದ್ದರು, ಆದರೆ ವಿಚಾರವಾದಿ ಪಾರ್ವತೇಶ್ ಜಾಮೀನು ಪಡೆದಿರಲಿಲ್ಲ. ಅವರಿಗೆ ಸಮನ್ಸ್ ಜಾರಿಯಲ್ಲಿತ್ತು. ಶನಿವಾರ ಅವರು ಪುತ್ತೂರಿನ ನ್ಯಾಯಾಲಯಕ್ಕೆ ಹಾಜರಾಗಿ ವಕೀಲರಾದ ಅಶ್ರಫ್ ಕೆ ಅಗ್ನಾಡಿ, ಅಬ್ದುಲ್ ಮಜೀದ್ ಖಾನ್ ಹಾಗೂ ಮುಸ್ತಫಾ ಕಡಬ ಅವರ ಮೂಲಕ ಜಾಮೀನು ಅರ್ಜಿ ಸಲ್ಲಿಸಿದ್ದರು. ಈ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಅವರಿಗೆ ಜಾಮೀನು ನೀಡಿದೆ.