ಎಡಪದವು: ಐಡಿಯಲ್ ಆಂಗ್ಲಮಾಧ್ಯಮ ಶಾಲೆಯಲ್ಲಿ ಶಿಕ್ಷಕ - ರಕ್ಷಕ ಸಂಘದ ಸಭೆ
ಮಂಗಳೂರು, ಜು. 31: ಐಡಿಯಲ್ ಆಂಗ್ಲ ಮಾಧ್ಯಮ ಶಾಲೆ ಎಡಪದವು ಇಲ್ಲಿಯ ಶಿಕ್ಷಕ-ರಕ್ಷಕ ಸಂಘದ ಮಹಾಸಭೆಯು ಶಾಲಾ ಭವನದಲ್ಲಿ ಇತ್ತೀಚೆಗೆ ನಡೆಯಿತು.
ಸಭೆಯ ಆರಂಭದಲ್ಲಿ ಇತ್ತೀಚೆಗೆ ನಿಧನರಾದ ಮಾಜಿ ಉನ್ನತ ಶಿಕ್ಷಣ ಸಚಿವ ಬಿ. ಎ.ಮೊಹಿದೀನ್ ನಿಧನಕ್ಕೆ ಮೌನ ಪ್ರಾರ್ಥನೆ ಸಲ್ಲಿಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ಶಾಲಾ ಸಂಚಾಲಕರಾದ ವೈ. ಮುಹಮ್ಮದ್ ಬ್ಯಾರಿ ವಹಿಸಿದ್ದರು. ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಐಡಿಯಲ್ ಶಾಲೆಯು ಕಳೆದ 20 ವರ್ಷಗಳಿಂದ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿದೆ. ಹಲವಾರು ವರ್ಷಗಳಿಂದ ನಮ್ಮ ಶಾಲೆ ಅತ್ಯುತ್ತಮ ಫಲಿತಾಂಶ ಪಡೆಯುತ್ತಿರುವುದು ಸಂತಸದ ವಿಚಾರ. ಈ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ಎಂ.ಕಾಂ. ಎಂ.ಬಿ.ಬಿ.ಎಸ್., ಬಿ.ಡಿ.ಎಸ್. ,ಎಲ್.ಎಲ್.ಬಿ., ಸಿ.ಎ. ಮುಂತಾದ ಉನ್ನತ ವ್ಯಾಸಂಗ ಪಡೆದು ದೇಶ ವಿದೇಶಗಳಲ್ಲಿ ಉದ್ಯೋಗ ಹೊಂದಿ ಶಾಲೆಯ ಕೀರ್ತಿ ಪತಾಕೆಯನ್ನು ಎತ್ತರಕ್ಕೆ ಹಾರಿಸಿದ್ದಾರೆ ಎಂದರು.
ಅನೇಕ ಬಡ ಪ್ರತಿಭಾವಂತ ವಿದ್ಯಾರ್ಥಿಗಳು ಆರ್ಥಿಕ ಅಡಚಣೆಯಿಂದ ಶಿಕ್ಷಣದಿಂದ ವಿಮುಖರಾದಾಗ ನಮ್ಮ ಶಾಲೆಯು ಉಚಿತ ವಿದ್ಯಾಭ್ಯಾಸವನ್ನು ನೀಡಿ, ಅವರನ್ನು ಸಮಾಜದ ಉತ್ತಮ ನಾಗರಿಕನನ್ನಾಗಿ ಮಾಡಿದೆ ಹಾಗೂ ಎಲ್ಲಾ ಧರ್ಮಗಳ ಅನಾಥ ಮಕ್ಕಳಿಗೆ ಉಚಿತ ವಿಧ್ಯಾಭ್ಯಾಸ ನೀಡಲಾಗಿದೆ. ಪ್ರಸ್ತುತ ಶಾಲೆಯಲ್ಲಿ ಪಠ್ಯದ ಜೊತೆಗೆ ಧಾರ್ಮಿಕ, ಮಾನವೀಯ ಮೌಲ್ಯಗಳನ್ನು ಕಲಿಸಲಾಗುತ್ತಿದೆ. ಪ್ರತಿಯೊಂದು ಧರ್ಮದ ವಿದ್ಯಾರ್ಥಿಗಳಿಗೆ ಆಯಾಯ ಧರ್ಮದ ಶಿಕ್ಷಣವನ್ನು ನೀಡುತ್ತಿದ್ದೇವೆ. ಮುಸ್ಲಿಂ ವಿದ್ಯಾರ್ಥಿ ಗಳಿಗೆ ಪರಿಪೂರ್ಣವಾದ ಕುರ್ ಅನ್ ಶಿಕ್ಷಣ , ಹಿಂದೂ ವಿದ್ಯಾರ್ಥಿಗಳಿಗೆ ಉಪನಿಷತ್ತು, ರಾಮಾಯಣ, ಮಹಾಭಾರತ, ಭಗವದ್ಗೀತೆ ಹಾಗೂ ಕ್ರೈಸ್ತ ವಿದ್ಯಾರ್ಥಿಗಳಿಗೆ ಬೈಬಲ್ ಅಧ್ಯಯನ ನೀಡುತ್ತಿದ್ದೇವೆ. ವಿಧ್ಯಾರ್ಥಿಗಳು ತಮಗೆ ಕಲಿಸಿದ ಶಿಕ್ಷಕ-ಶಿಕ್ಷಕಿಯರೊಂದಿಗೆ ಗೌರವಯುತವಾಗಿ ನಡೆಯಲು ಹೆತ್ತವರು ಕೂಡಾ ಶಿಕ್ಷಕರ ಬಗ್ಗೆ ಧನಾತ್ಮಕ ಅಭಿಪ್ರಾಯ ವ್ಯಕ್ತಪಡಿಸುವುದು ಅಗತ್ಯ ಎಂದು ಹೇಳಿದರು.
ದ.ಕ. ಹಾಗೂ ಉಡುಪಿ ಜಿಲ್ಲೆಯ ಆಂಗ್ಲ ಮಾಧ್ಯಮ ಶಾಲೆಗಳ ಒಕ್ಕೂಟದ ಅಧ್ಯಕ್ಷನಾಗಿ 200ಕ್ಕೂ ಅಧಿಕ ಶಾಲೆಗಳಿಗೆ ಭೇಟಿ ನೀಡಿದ್ದೇನೆ. ಆಂಗ್ಲ ಮಾಧ್ಯಮ ಶಾಲೆಯ ನಿರ್ವಹಣೆಯನ್ನು ಮಾಡಲು ಸರಕಾರದ ಅನುದಾನವನ್ನು ಪಡೆಯಲು ಶೀಘ್ರದಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದೇನೆ ಎಂದರು.
ಶಾಲಾ ಮುಖ್ಯೋಪಾಧ್ಯಾಯಿನಿ ನಂದಾ ಗಡಿಯಾರ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಮಕ್ಕಳ ವಿಧ್ಯಾಭ್ಯಾಸದ ಜೊತೆಗೆ ಅವರ ಚಲನವಲನದ ಬಗ್ಗೆ ಹೆತ್ತವರು ಸೂಕ್ಷ್ಮವಾಗಿ ಗಮನಿಸುವುದು ಅವಶ್ಯಕ. ಮಕ್ಕಳ ವ್ಯಕ್ತಿತ್ವ ವಿಕಸನದಲ್ಲಿ ಶಿಕ್ಷಕರ ಜೊತೆ ಹೆತ್ತವರು ಕೂಡ ಪ್ರಯತ್ನಿಸುವುದು ಅಗತ್ಯ ಎಂದರು.
ಸಭೆಯಲ್ಲಿ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷೆ ಶ್ರೀ ವಿದ್ಯಾ, ಶಾಲಾ ಮೆನೇಜರ್ ಫ್ಲೋಸ್ಸಿ ತಾವ್ರೊ ಉಪಸ್ಥಿತರಿದ್ದರು. ಸಹ ಮುಖ್ಯೋಪಾಧ್ಯಾಯರಾದ ಫೆಲಿಕ್ಸ್ ಸಿಕ್ವೇರಾ, ಸಹಶಿಕ್ಷಕಿ ಪಲ್ಲವಿ ಕಾರ್ಯಕ್ರಮ ನಿರೂಪಿಸಿದರು.