ಆ.1: ಅಲೋಶಿಯಸ್ ಕಾಲೇಜಿನಲ್ಲಿ ಪ್ರೊ.ಬಿ.ಎಸ್.ರಾಮನ್ ಗೌರವಾರ್ಥ ಶ್ರದ್ಧಾಂಜಲಿ ಸಭೆ
ಮಂಗಳೂರು, ಜು. 31: ಇತ್ತೀಚೆಗೆ ನಿಧನರಾದ ನಗರದ ಸಂತ ಅಲೋಶಿಯಸ್ ಕಾಲೇಜಿನ ವಿಶ್ರಾಂತ ಪ್ರಾಧ್ಯಾಪಕ, ಬರಹಗಾರ ಬಿ.ಎಸ್.ರಾಮನ್ ಅವರಿಗೆ ಸಾರ್ವಜನಿಕ ಶ್ರದ್ಧಾಂಜಲಿ ಅರ್ಪಿಸುವ ಹಿನ್ನೆಲೆಯಲ್ಲಿ ಆ. 1ರಂದು ಸಂಜೆ 5 ಗಂಟೆಗೆ ಸಂತ ಅಲೋಶಿಯಸ್ ಕಾಲೇಜಿನ ಎರಿಕ್ ಮಥಾಯಸ್ ಸಭಾಂಗಣದಲ್ಲಿ ಸಾರ್ವಜನಿಕ ಶ್ರದ್ಧಾಂಜಲಿ ಸಭೆಯನ್ನು ಆಯೋಜಿಸಲಾಗಿದೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ, ಪ್ರೊ.ರಾಮನ್ ಅವರ ಹಳೆ ವಿದ್ಯಾರ್ಥಿ ಸಿ.ಎ.ಚಂದ್ರಮೋಹನ ಕೆ ವೈ.,ಸಭೆಯಲ್ಲಿ ರಾಮನ್ ಅವರ ವಿದ್ಯಾರ್ಥಿಗಳು, ಅಭಿಮಾನಿಗಳು ಸೇರಿದಂತೆ ಹಲವಾರು ಮಂದಿ ಗಣ್ಯರು ಭಾಗವಹಿಸಲಿದ್ದಾರೆ. ರಾಮನ್ ಅವರ ಹೆಸರಿನಲ್ಲಿ ವಿದ್ಯಾನಿಧಿಯನ್ನು ಆರಂಭಿಸಿ ಆ ಮೂಲಕ ಬಡಮಕ್ಕಳಿಗೆ ನೆರವಾಗುವ ಚಿಂತನೆಯನ್ನು ಇಟ್ಟುಕೊಳ್ಳಲಾಗಿದ್ದು, ಸಭೆಯಲ್ಲಿ ಈ ಕುರಿತಂತೆ ಚರ್ಚಿಸಲಾಗುವುದು ಎಂದರು.
ಪ್ರೊ.ರಾಮನ್ರವರು 1960 ರಿಂದ 1995ರವರೆಗೆ 35 ವರ್ಷಗಳ ಕಾಲ ಸಂತ ಅಲೋಶಿಯಸ್ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಲ್ಲಿ ಫೊಫೆಸರ್ ಆಗಿ ಸೇವೆ ಸಲ್ಲಿಸಿದ್ದರು. ಅವರು ವಾಣಿಜ್ಯ, ವ್ಯವಹಾರ ಆಡಳಿತ ಸಂಬಂಧಿತ ವಿಷಯದಲ್ಲಿ ಸುಮಾರು 100ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಲೆಕ್ಕ ಶಾಸ್ತ್ರವನ್ನು ಬೋಧಿಸುವಲ್ಲಿ ಅವರು ತೋರಿದ ಬದ್ಧತೆ ದೊಡ್ಡ ಸಂಖ್ಯೆಯ ವಿದ್ಯಾರ್ಥಿ ಬಳಗವನ್ನು ಪ್ರೇರಿಪಿಸಿದೆ. ಅವರ ಹಲವಾರು ವಿದ್ಯಾರ್ಥಿಗಳು ಚಾರ್ಟರ್ಡ್ ಅಕೌಂಟೆಂಟ್ ಹಾಗೂ ಇನ್ನಿತರ ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಎಂದವರು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಹಳೆ ವಿದ್ಯಾರ್ಥಿ ಸಿ.ಎ.ವಿಜಯ ಕುಮಾರ್ ಶೆಟ್ಟಿ, ಅಭಿಮಾನಿ ಧನಂಜಯ ನಾಯಕ್ ಉಪಸ್ಥಿತರಿದ್ದರು.