ನಾಳೆಯಿಂದ ಆಳಸಮುದ್ರ ಮೀನುಗಾರಿಕೆ ಆರಂಭ
ಪಶ್ಚಿಮ ಕರಾವಳಿಯಲ್ಲಿ ಮೀನುಗಾರಿಕೆಗೆ ಕ್ಷಣಗಣನೆ
ಮಂಗಳೂರು ನಗರದ ಬೆಂಗ್ರೆಯಲ್ಲಿ ಮೀನುಗಾರಿಕೆಗೆ ಬಲೆಯನ್ನು ಸಜ್ಜುಗೊಳಿಸುತ್ತಿರುವುದು.
# 2 ತಿಂಗಳ ಬಳಿಕ ಸಮುದ್ರಕ್ಕಿಳಿಯುವ ಕಡಲ ಮಕ್ಕಳು
ಮಂಗಳೂರು, ಜು.30: ಸಮುದ್ರದಲ್ಲಿ ಮೀನುಗಳ ಸಂರಕ್ಷಣೆ ನಿಟ್ಟಿನಲ್ಲಿ ಎರಡು ತಿಂಗಳಿನಿಂದ ಆಳ ಸಮುದ್ರ ಮೀನುಗಾರಿಕೆಗೆ ಹೇರಲಾಗಿದ್ದ ನಿಷೇಧ ಜು.31ಕ್ಕೆ ಕೊನೆಗೊಳ್ಳಲಿದೆ. ಅದರಂತೆ ಆ.1ರಿಂದ ಆಳಸಮುದ್ರ ಮೀನುಗಾರಿಕೆ ಮತ್ತೆ ಆರಂಭಗೊಳ್ಳಲಿದ್ದು, ಬೋಟ್ಗಳೊಂದಿಗೆ ಆಳ ಸಮುದ್ರಕ್ಕೆ ತೆರಳಲು ಮೀನುಗಾರರು ಸಜ್ಜಾಗಿದ್ದಾರೆ. ಮೀನುಗಳ ಸಂತಾನೋತ್ಪತ್ತಿ ಅವಧಿಯಲ್ಲಿ ಎರಡು ತಿಂಗಳು ಆಳ ಸಮುದ್ರಕ್ಕೆ ನಿಷೇಧ ಹೇರಲಾಗಿದ್ದರೂ ಕೂಡ ನಾಡದೋಣಿಗಳಿಂದ ಸಾಂಪ್ರದಾಯಿಕ ಮೀನುಗಾರಿಕೆಗೆ ಅವಕಾಶ ಕಲ್ಪಿಸಲಾಗಿತ್ತು. ಆದರೆ ಭಾರೀ ಚಂಡಮಾರುತ, ಸಮುದ್ರದ ಉಬ್ಬರ-ಇಳಿತದಿಂದಾಗಿ ಈ ಬಾರಿ ನಾಡದೋಣಿ ಮೀನುಗಾರಿಕೆಯು ಹೆಚ್ಚೇನೂ ಫಲ ಕೊಟ್ಟಿಲ್ಲ. ಈಗ ಮತ್ತೆ ಆಳ ಸಮುದ್ರ ಮೀನುಗಾರಿಕೆಯ ಮೇಲೆ ಮೀನುಗಾರರ ಚಿತ್ತ ಹರಿದಿದೆ. ಬುಧವಾರದಿಂದ ಆಳ ಸಮುದ್ರ ಮೀನುಗಾರಿಕೆಯ ವೈಭವ ಪಶ್ಚಿಮ ಕರಾವಳಿಯ ತೀರದಲ್ಲಿ ಮರುಕಳಿಸಲಿದೆ.
2017-18ರಲ್ಲಿ ಜಿಲ್ಲೆಯಲ್ಲಿ ನೋಂದಣಿಯಾದ 65 ಪರ್ಸಿನ್ ಹಾಗೂ 1,012 ಟ್ರಾಲ್ ಸಹಿತ ಒಟ್ಟು 1,077 ಯಾಂತ್ರೀಕೃತ ದೋಣಿಗಳಿವೆ. 1,376 ಇಂಜಿನ್ ಚಾಲಿತ ನಾಡದೋಣಿಗಳು ಹಾಗೂ 526 ಯಾಂತ್ರೀಕೃತವಲ್ಲದ ನಾಡದೋಣಿಗಳಿವೆ.
61 ದಿನಗಳ ನಿಷೇಧ: ಸಮುದ್ರದಲ್ಲಿ ಮಳೆಗಾಲ ಮೀನುಗಳ ಸಂತಾನೋತ್ಪತ್ತಿ ಕಾಲವಾದ ಹಿನ್ನೆಲೆಯಲ್ಲಿ ರಾಜ್ಯದ ಕರಾವಳಿಯಲ್ಲಿ ಸರಕಾರ 61 ದಿನಗಳ ಕಾಲ ಯಾಂತ್ರೀಕೃತ ಮೀನುಗಾರಿಕೆಗೆ ನಿಷೇಧ ಹೇರಿತ್ತು. ಮೇ ಅಂತ್ಯದಲ್ಲೇ ಭಾರೀ ಗಾಳಿ ಮಳೆ ಪ್ರಾರಂಭವಾಗಿದ್ದು, ಸಮುದ್ರವೂ ರೌದ್ರಾವತಾರ ತಾಳಿತ್ತು. ಈ ವೇಳೆ ಸಮುದ್ರದಲ್ಲಿ ಬೀಸುವ ಭಾರೀ ಬಿರುಗಾಳಿಗೆ ಮೀನುಗಾರಿಕೆಗೆ ತೆರಳುವ ಬೋಟ್ಗಳು ಅಪಾಯಕ್ಕೆ ಸಿಲುಕಿಕೊಂಡು ಪ್ರಾಣಾಪಾಯವಾಗುವ ಸಾಧ್ಯತೆ ಇರುತ್ತದೆ. ಅದರೊಂದಿಗೆ ಮೀನುಗಳ ಸಂತತಿ ವೃದ್ಧಿಸುವ ಕಾಲವೂ ಇದಾಗಿದ್ದು, ಜೂನ್-ಜುಲೈಯಲ್ಲಿ ಆಳ ಸಮುದ್ರ ಮೀನುಗಾರಿಕೆಯನ್ನು ಸರಕಾರ ನಿಷೇಧಿಸುತ್ತದೆ.
ಬೋಟು ನಿಲುಗಡೆ ಸಮಸ್ಯೆ: ಹಾರ್ಬರ್ ಮತ್ತು ಅಳಿವೆಬಾಗಿಲುಗಳಲ್ಲಿ ಬೋಟುಗಳನ್ನು ನಿಲ್ಲಿಸಲು ಸ್ಥಳಾವಕಾಶದ ಕೊರತೆಯಿದೆ. ಇತ್ತೀಚೆಗೆ ಬೋಟುಗಳ ಸಂಖ್ಯೆ ವಿಪರೀತ ಹೆಚ್ಚಿದೆ. ಮೀನುಗಾರ ಕಾರ್ಮಿಕರ ಕೊರತೆಯೂ ಇದೆ. ಸದ್ಯ ಸ್ಥಳಾವಕಾಶ ಸಮಸ್ಯೆ ಬಿಗಡಾ ಯಿಸಿದ್ದು, ಮೂರನೇ ಹಂತದ ಜೆಟ್ಟಿ ನಿರ್ಮಾಣವಾದಲ್ಲಿ ಅನುಕೂಲಕರವಾಗಲಿದೆ.
ವಿವಿಧ ಮೀನುಗಾರಿಕೆ ನಿಷೇಧ
ಸರಕಾರದ ಆದೇಶದಂತೆ ಬೆಳಕು ಮೀನುಗಾರಿಕೆ ಮತ್ತು ಬುಲ್ಟ್ರಾಲ್ ಮೀನುಗಾರಿಕೆ, ಅವೈಜ್ಞಾನಿಕವಾಗಿ ಪಚ್ಚಿಲೆಮೀನುಗಾರಿಕೆ, ಚೌರಿ ಮತ್ತು ಪ್ಲಾಸ್ಟಿಕ್ ಬಳಸಿ ಅನಧಿಕೃತವಾಗಿ ಕಪ್ಪೆಬೊಂಡಸನ್ನು ಹಿಡಿಯುವುದನ್ನು ನಿಷೇಧಿಸಲಾಗಿದೆ. ಇಂತಹ ನಿಷೇಧಿತ ಅವಧಿಯಲ್ಲಿ ಮೀನುಗಾರಿಕೆ ಮಾಡುವುದು ಕಂಡುಬಂದಲ್ಲಿ ಮೀನುಗಾರಿಕಾ ದೋಣಿಗಳ ಪರವಾನಿಗೆ ರದ್ದುಪಡಿಸಲಾಗುವುದು. ಅವರಿಗೆ ನೀಡುವ ಕರರಹಿತ ಡೀಸೆಲ್ ಸೌಲಭ್ಯವನ್ನು ಕೂಡಾ ನಿಲ್ಲಿಸಲಾಗುತ್ತದೆ. ಕರ್ನಾಟಕ ಕಡಲ ಮೀನುಗಾರಿಕೆ ನಿಯಂತ್ರಣ ಕಾಯ್ದೆ (1986)ಯಂತೆ ಸದ್ರಿ ದೋಣಿಗಳು ಹಿಡಿದ ಮೀನಿನ 5 ಪಟ್ಟು ದರದಲ್ಲಿ ದಂಡವನ್ನು ವಸೂಲು ಮಾಡಲಾಗುವುದು ಎಂದು ಮೀನುಗಾರಿಕೆ ಇಲಾಖೆಯ ಹಿರಿಯ ಅಧಿಕಾರಿಗಳು ಇತ್ತೀಚೆಗೆ ಹೊರಡಿಸಿದ ಆದೇಶದಲ್ಲಿ ಸ್ಪಷ್ಟಪಡಿಸಿದ್ದಾರೆ.
ಜೂ.1ರಿಂದ ಜು.31ರವರೆಗೆ ಮೀನುಗಳ ಸಂತಾನೋತ್ಪತ್ತಿಗಾಗಿ ಆಳಸಮುದ್ರ ಮೀನುಗಾರಿಕೆಗೆ ನಿಷೇಧ ಹೇರಲಾಗಿತ್ತು. ಆ.1ರಿಂದ ಮೀನುಗಾರಿಕೆ ಆರಂಭವಾಗಲಿದೆ. ಪಶ್ಚಿಮ ಕರಾವಳಿಯಾದ ಕರ್ನಾಟಕ, ಗುಜರಾತ್ ಭಾಗಗಲ್ಲಿ ಮೀನುಗಾರಿಕೆಗೆ ಕ್ಷಣಗಣನೆ ಶುರುವಾಗಲಿದೆ.
ಮಂಜುಳಾಶ್ರೀ,
ಸಹಾಯಕ ನಿರ್ದೇಶಕಿ, ಮೀನುಗಾರಿಕೆ ಇಲಾಖೆ
ಬೆಳಕು ಮೀನುಗಾರಿಕೆ ಮತ್ತು ಬುಲ್ಟ್ರಾಲ್ ಮೀನುಗಾರಿಕೆ ನಿಷೇಧಿಸಿರುವುದು ಸ್ವಾಗತಾರ್ಹ. ಆ.1ರಂದು ಮೀನುಗಾರಿಕೆ ಆರಂಭಿಸಲು ಸರಕಾರದ ಆದೇಶವಿದ್ದು, ಅಂದು ಟ್ರಾಲ್ ಬೋಟುಗಳು ಮೀನುಗಾರಿಕೆಗೆ ಅಣಿಯಾಗಲಿವೆ. ಆ.3ರಂದು ಉರ್ವ ಮಾರಿಯಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುತ್ತೇವೆ. ಸಮುದ್ರ ಪ್ರಕ್ಷುಬ್ಧವಿದ್ದರೆ ಆ.5ರಿಂದ ಪರ್ಸಿನ್ ಬೋಟುಗಳು ಮೀನುಗಾರಿಕೆಗೆ ತೆರಳಲಿವೆ.
ಮೋಹನ್ ಬೆಂಗ್ರೆ,
ಪರ್ಸಿನ್ ಮೀನುಗಾರರ ಸಂಘದ ಅಧ್ಯಕ್ಷ
ದೇಶದ ಮೀನುಗಾರಿಕೆಗೆ ಮಂಗಳೂರು ಬಹುದೊಡ್ಡ ಕೊಡುಗೆಯನ್ನು ನೀಡುತ್ತದೆ. ಆದರೆ, ಮೀನುಗಾರರು ಎದುರಿಸುವ ಅನೇಕ ಸಮಸ್ಯೆಗಳನ್ನು ಈಡೇರಿಸುವಲ್ಲಿ ಕೇಂದ್ರ-ರಾಜ್ಯದ ಎಲ್ಲ ಸರಕಾರಗಳು ವಿಫಲವಾಗಿವೆ. ಸಬ್ಸಿಡಿ ದರದಲ್ಲಿ ಸೀಮೆಎಣ್ಣೆ ಸಮರ್ಪಕವಾಗಿ ಪೂರೈಕೆ ಆಗುತ್ತಿಲ್ಲ. ಸಚಿವರು ಸ್ಥಳಕ್ಕೆ ಭೇಟಿ ನೀಡಿದಾಗಲೆಲ್ಲಾ ಮೀನುಗಾರರ ಸಂಘಟನೆಗಳು ಸಾಮೂಹಿಕವಾಗಿ ಹಲವು ಮನವಿಗಳನ್ನು ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ನಮ್ಮದು ಅರಣ್ಯರೋದನವಾಗಿದೆ.
ಅಲಿ ಹಸನ್,
ಅಧ್ಯಕ್ಷರು, ಗಿಲ್ನೆಟ್ ಬೋಟ್ಗಾರರ ಸಂಘ, ಮಂಗಳೂರು
ಮುಂಗಾರಿನ ಆರ್ಭಟ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದ್ದು, ಎರಡು ತಿಂಗಳ ಕಾಲ ವಿಶ್ರಾಂತಿ ಪಡೆದಿದ್ದ ಕಡಲ ಮಕ್ಕಳು ಈಗ ಆಳಸಮುದ್ರ ಮೀನುಗಾರಿಕೆಗೆ ಸಜ್ಜಾಗಿದ್ದಾರೆ. ಮೀನುಗಾರಿಕೆಗೆ ಅಗತ್ಯವಿರುವ ಉತ್ಕೃಷ್ಟ ಗುಣಮಟ್ಟದ ಬಲೆ, ಹಗ್ಗ, ಐಸ್ ಮತ್ತಿತರ ವಸ್ತುಗಳನ್ನು ಮೀನುಗಾರರು ಈಗಾಗಲೇ ತಯಾರಿ ಮಾಡಿಕೊಂಡಿದ್ದಾರೆ. ಮೀನುಗಾರಿಕೆಗೆ ನಿಷೇಧಿಸಿದ ಅವಧಿಯಲ್ಲಿ ಪರ್ಸಿನ್ ಮತ್ತು ಆಳ ಸಮುದ್ರ ಮೀನುಗಾರಿಕೆಯ ಬೋಟ್ಗಳು ಲಂಗರು ಹಾಕಿದ್ದವು.