ಆ.12ರಂದು ‘ನಿಟ್ಟೆ ಕ್ರಾಸ್ ಕಂಟ್ರಿ-2018’
ಉಡುಪಿ, ಜು.31: ಉಡುಪಿ ಜಿಲ್ಲಾ ಅಮೆಚೂರ್ ಅಥ್ಲೆಟಿಕ್ ಸಂಸ್ಥೆ ಹಾಗೂ ನಿಟ್ಟೆಯ ವಿದ್ಯಾಸಂಸ್ಥೆಯ ಜಂಟಿ ಆಶ್ರಯದಲ್ಲಿ ನಿಟ್ಟೆ ಕ್ರಾಸ್ ಕಂಟ್ರಿಯನ್ನು ಆ.12 ರಂದು ಬೆಳಗ್ಗೆ 6.30ಕ್ಕೆ ನಿಟ್ಟೆ ವಿದ್ಯಾ ಸಂಸ್ಥೆಯ ಆವರಣದಲ್ಲಿ ಏರ್ಪಡಿಸಲಾಗಿದೆ.
ಈ ಸ್ಪರ್ಧೆಯಲ್ಲಿ ಉಡುಪಿ ಜಿಲ್ಲೆಯ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಮಾತ್ರ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ಎಲ್ಲ ವಿಭಾಗದಲ್ಲಿಯೂ ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು ಎಂದು ಅಸೋಸಿಯೇಶನ್ ಅಧ್ಯಕ್ಷ ಅಶೋಕ್ ಅಡ್ಯಂತಾಯ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
14ವರ್ಷದೊಳಗಿನ ಬಾಲಕ ಬಾಲಕಿಯರಿಗೆ ಎರಡು ಕಿ.ಮೀ., 18ವರ್ಷ ದೊಳಗಿನ ಬಾಲಕ ಬಾಲಕರಿಗೆ ಮೂರು ಕಿ.ಮೀ., 18 ವರ್ಷ ಮೇಲ್ಪಟ್ಟ ವಯೋಮಾನದ ಪುರುಷರಿಗೆ ಎಂಟು ಕಿ.ಮೀ. ಹಾಗೂ ಮಹಿಳೆಯರಿಗೆ 6 ಕಿ.ಮೀ. ಓಟದ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಸ್ಪರ್ಧೆಯಲ್ಲಿ ಸುಮಾರು ಒಂದು ಸಾವಿರ ಸ್ಪರ್ಧಾಳುಗಳು ಭಾಗವಹಿಸುವ ನಿರೀಕ್ಷೆ ಹೊಂದಲಾಗಿದೆ.
ಜನ್ಮ ದಿನಾಂಕ ಪರಿಶೀಲನೆಗೆ ಆಧಾರ್ ಕಾರ್ಡ್ ಅಥವಾ ಜನನ ಪ್ರಮಾಣ ಪತ್ರವನ್ನು ವ್ಯಾಸಂಗ ಮಾಡುತ್ತಿರುವ ಮುಖ್ಯೋಪಾಧ್ಯಾಯರು ಅಥವಾ ಪ್ರಾಂಶುಪಾಲರಿಂದ ಧೃಢೀಕರಿಸಿ ತರಬೇಕು. ಪ್ರತಿ ವಿಭಾಗದಲ್ಲಿ 25ಕ್ಕಿಂತ ಹೆಚ್ಚು ಸ್ಪರ್ಧಿಗಳಿದ್ದಲ್ಲಿ 10ಸ್ಥಾನಗಳವರೆಗೆ ಪಡೆಯುವ ಸ್ಪರ್ಧಿಗಳಿಗೆ ನಗದು ಬಹುಮಾನ ನೀಡಲಾಗುವುದು.
ಆ.11ರಂದು ಆಗಮಿಸುವ ತಂಡಗಳಿಗೆ ವಸತಿ ಹಾಗೂ ಊಟದ ವ್ಯವಸ್ಥೆ ಯನ್ನು ಉಚಿತವಾಗಿ ಮಾಡಲಾಗುವುದು. ಗ್ರಾಮೀಣ ಪ್ರದೇಶದ ವಿದ್ಯಾರ್ಥಿ ಗಳಿಗೆ ಅನುಕೂಲವಾ ಗುವಂತೆ ಬಸ್ ವ್ಯವಸ್ಥೆ ಮಾಡಲಾಗಿದೆ. ಹೆಚ್ಚಿನ ವಿವರ ಗಳಿಗೆ ದೂರವಾಣಿ ಸಂಖ್ಯೆ: 9964319830(ಗಣೇಶ್ ಪೂಜಾರಿ) ಹಾಗೂ 9900410776(ಡಾ.ದೀಪಕ್ ಬಾಯರಿ)ನ್ನು ಸಂಪರ್ಕಿಸುವಂತೆ ಕೋರ ಲಾಗಿದೆ. ಹೆಸರು ನೊಂದಾಯಿಸಲು ಆ.8 ಕೊನೆಯ ದಿನವಾಗಿದೆ.
ಸುದ್ದಿಗೋಷ್ಠಿಯಲ್ಲಿ ಅಸೋಸಿಯೇಶನ್ ಕಾರ್ಯಾಧ್ಯಕ್ಷ ರಘುರಾಮ ನಾಯಕ್, ಕಾರ್ಯದರ್ಶಿ ದಿನೇಶ್ ಕೋಟ್ಯಾನ್, ಖಜಾಂಚಿ ಡಾ.ದೀಪಕ್ ಬಾಯರಿ, ನಿಟ್ಟೆ ತಾಂತ್ರಿಕ ವಿದ್ಯಾಲಯದ ದೈಹಿಕ ಶಿಕ್ಷಣ ನಿರ್ದೇಶಕ ಗಣೇಶ್ ಪೂಜಾರಿ ಉಪಸ್ಥಿತರಿದ್ದರು.