ಅಡಿಕೆ ಬೆಳೆಯಲ್ಲಿ ಕೊಳೆರೋಗ ನಿರ್ವಹಣಾ ಕ್ರಮ
ಉಡುಪಿ, ಜು.31: ಅಡಿಕೆ ಕರಾವಳಿ ಪ್ರದೇಶದ ಮುಖ್ಯ ವಾಣಿಜ್ಯ ಬೆಳೆಯಾ ಗಿದ್ದು, ಕೃಷಿಕರಿಗೆ ಆರ್ಥಿಕ ಮತ್ತು ಸಾಮಾಜಿಕ ಸುಭದ್ರತೆ ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಈ ವಾಣಿಜ್ಯ ಬೆಳೆಯನ್ನು ಬಹಳ ವರ್ಷಗಳಿಂದ ಬೆಳೆಯುತ್ತಿದ್ದರೂ ಕೆಲವೊಂದು ಋತುಮಾನಕ್ಕೆ ಅನುಗುಣವಾಗಿ ಬರುವ ಕೀಟ ಮತ್ತು ರೋಗಗಳ ಸಮಸ್ಯೆ ಗಳಿಂದ ಅಡಿಕೆ ಬೆಳೆಯ ಇಳುವರಿಯಲ್ಲಿ ತೀವ್ರ ಕುಸಿತ ಉಂಟಾಗುತ್ತದೆ.
ಪ್ರಸ್ತುತ ಜಿಲ್ಲೆಯಲ್ಲಿ ಹೆಚ್ಚಿನ ಮಳೆಯಾಗುತಿದ್ದು, ಇಂಥ ಪರಿಸ್ಥಿತಿಯಲ್ಲಿ ಅಡಿಕೆ ಯ ರೋಗಗಳಲ್ಲಿ ಹೆಚ್ಚಿನ ಹಾನಿ ಉಂಟು ಮಾಡುವ ಕೊಳೆರೋಗ ಬರಲು ಸಾಕಷ್ಟು ಅನುಕೂಲಕರ ವಾತಾವರಣವಿರುವುದರಿಂದ ಬೆಳೆಗಾರರು ಕೆಳಕಂಡ ಕೆಲವು ಎಚ್ಚರಿಕೆ ಕ್ರಮಗಳನ್ನು ವಹಿಸಲು ಸೂಚಿಸಲಾಗಿದೆ. ತೋಟದಲ್ಲಿ ಕೊಳೆ ರೋಗ ಹರಡದಂತೆ ಹಾಗೂ ರೋಗ ಉಲ್ಬಣವಾಗದಂತೆ ವಹಿಸಬೇಕಾದ ಎಚ್ಚರಿಕೆ ಕ್ರಮಗಳಿವು.
*ಕೆಳಗೆ ಬಿದ್ದಿರುವ ರೋಗಪೀಡಿತ ಕಾಯಿ ಹಾಗೂ ಒಣಗಿದ ಸಿಂಗಾರ ಗೊನೆಗಳನ್ನು ಆರಿಸಿ ಸುಡಬೇಕು ಅಥವಾ ಗುಂಡಿಗಳಲ್ಲಿ ಹಾಕಿ ಮಣ್ಣಿನಿಂದ ಮುಚ್ಚಬೇಕು. ತೋಟಗಳಲ್ಲಿ ಹೆಚ್ಚು ನೀರು ನಿಲ್ಲದಂತೆ ಬಸಿಗಾಲುವೆ ತೆಗೆದು ನೀರು ಹರಿದು ಹೋಗಲು ವ್ಯವಸ್ಥೆ ಮಾಡಬೇಕು. ಗಾಳಿಯಾಡುವಂತೆ ಮಾಡಲು ಅಂತರ ಬೆಳೆಗಳ ಅಥವಾ ಕಾಡು ಮರ ಗಳ ಹೆಚ್ಚುವರಿ ರೆಂಬೆಗಳನ್ನು ಕತ್ತರಿಸಿ ತೆಗೆಯಬೇಕು.
*ಮುಂಜಾಗೃತ ಕ್ರಮವಾಗಿ 2ನೇ ಸಿಂಪರಣೆಯನ್ನು (ಮೊದಲನೆ ಸಿಂಪರಣೆ ಮಾಡಿ 30 ದಿನಗಳ ನಂತರ) ಅಡಿಕೆ ಗೊನೆಯಲ್ಲಿ ಅಡಿಕೆ ಗೊನೆಗಳಿಗೆ, ಎಲೆತೊಟ್ಟು, ಹೊಡೆ ಭಾಗ ಮತ್ತು ಸುಳಿ ಭಾಗಗಳು ಚೆನ್ನಾಗಿ ನೆನೆಯುವಂತೆ ಶೇ.1ರ ಬೋರ್ಡೋ ದ್ರಾವಣವನ್ನು ಅಥವಾ ಶೇ.0.2ರ ಮೆಟಕಾಕ್ಸಿಲ್ ಎಂ.ಝಡ್ (2 ಗ್ರಾಂನ್ನು 1ಲೀ ನೀರಿನಲ್ಲಿ ಕರಗಿಸಿ) ಅಥವಾ ಶೇ.0.3ರ ತಾಮ್ರದ ಆಕ್ಸಿಕ್ಲೋರೈಡ್ (3 ಗ್ರಾಂ 1 ಲೀ. ನೀರಿನಲ್ಲಿ ಕರಗಿಸಿ) ಸೂಕ್ತ ಅಂಟಿನೊಂದಿಗೆ (ರಾಳ) ಬೆರೆಸಿ ಸಿಂಪರಣೆ ಮಾಡಿದರೆ ಮುಂದೆ ಬರುವ ಕೊಳೆ ರೋಗವನ್ನು ಸಾಕಷ್ಟು ಪ್ರಮಾಣದಲ್ಲಿ ತಡೆಗಟ್ಟಬಹುದು. ಮಳೆಗಾಲ ಮುಂದುವರಿದರೆ 3ನೇ ಸಿಂಪರಣೆ ಅಗತ್ಯ.
*ಬಿಸಿಲು ಕಾಣಿಸಿಕೊಂಡಾಗ ಕಾಯಿಗಳು ಪೂರ್ತಿಯಾಗಿ ನೆನೆಯುವಂತೆ ಸಿಂಪರಣೆ ಮಾಡಬೇಕು. ಮಳೆ ತೀವ್ರವಾದಲ್ಲಿ ಸುಳಿ ಕೊಳೆರೋಗ ಕಾಣಿಸಿ ಕೊಳ್ಳುವ ಸಾಧ್ಯತೆ ಅಧಿಕವಾಗಿರುತ್ತದೆ. ಹಾನಿಯಾಗಿರುವ ಭಾಗವನ್ನು ಕತ್ತರಿಸಿ ತೆಗೆದು ಆ ಜಾಗಕ್ಕೆ ಶೇ.10ರ ಬೋರ್ಡೋ ಪೇಸ್ಟನ್ನು ಬಳಿಯಬೇಕು. ಹೊಸ ಚಿಗುರು ಕಾಣಿಸುವವರೆಗೂ ಹಾನಿಯಾದ ಭಾಗವನ್ನು ಮುಚ್ಚಿಡಬೇಕು.
*ಶಿಲೀಂದ್ರನಾಶಕ ಸಿಂಪರಣೆ ಮಾಡುವಾಗ ಬೇರುಗಳ ಬುಡದಲ್ಲಿ ಪ್ರತಿ ಮರಕ್ಕೆ 1.5-2 ಲೀಟರ್ನಂತೆ ಶೇ.1ರ ಬೋರ್ಡೋ ದ್ರಾವಣವನ್ನು ಮರದ ಬುಡದ ಸುತ್ತ ಸಿಂಪಡಿಸಬೇಕು. ಇದರಿಂದ ಬುಡದಲ್ಲಿರುವ ಶಿಲೀಂದ್ರವನ್ನು ಹಾಗೂ ಶಿಲೀಂದ್ರದ ಬೆಳವಣಿಗೆಯನ್ನು ನಿಯಂತ್ರಿಸಬಹುದು.
*ಆಡಿಕೆಯಲ್ಲಿ ಅಂತರ ಬೆಳೆಯಾಗಿ ಕಾಳುಮೆಣಸು ಇದ್ದಲ್ಲಿ ಕಾಳುಮೆಣಸು ಕೊಳೆರೋಗದ ನಿಯಂತ್ರಣಕ್ಕೆ ಬಳ್ಳಿಗಳ ಎಲ್ಲಾ ಎಲೆಗಳಿಗೂ ತಾಗುವಂತೆ ಶೇ.1 ರ ಬೋರ್ಡೋ ಸಿಂಪರಣೆ ಮಾಡಬೇಕು ಮತ್ತು ಪ್ರತಿ ಕಾಳುಮೆಣಸಿನ ಬುಡಕ್ಕೆ 2ಲೀ.ನಷ್ಟು ಬೋರ್ಡೋ ದ್ರಾವಣವನ್ನು ಸುರಿುಬೇಕು.
*ಆಡಿಕೆಯಲ್ಲಿ ಅಂತರ ಬೆಳೆಯಾಗಿ ಕಾಳುಮೆಣಸು ಇದ್ದಲ್ಲಿ ಕಾಳುಮೆಣಸು ಕೊಳೆರೋಗದ ನಿಯಂತ್ರಣಕ್ಕೆ ಬಳ್ಳಿಗಳ ಎಲ್ಲಾ ಎಲೆಗಳಿಗೂ ತಾಗುವಂತೆ ಶೇ.1 ರ ಬೋರ್ಡೋ ಸಿಂಪರಣೆ ಮಾಡಬೇಕು ಮತ್ತು ಪ್ರತಿ ಕಾಳುಮೆಣಸಿನ ಬುಡಕ್ಕೆ 2ಲೀ.ನಷ್ಟು ಬೋರ್ಡೋ ದ್ರಾವಣವನ್ನು ಸುರಿಯಬೇಕು. *ಶೇ.1ರ ಬೋರ್ಡೋ ದ್ರಾವಣ ಕೊಳೆರೋಗದ ಹತೋಟಿಯಲ್ಲಿ ಉತ್ತಮ ವಾದ ಶಿಲೀಂದ್ರ ನಾಶಕವಾಗಿದ್ದು ರೈತರು ವೈಜ್ಞಾನಿಕವಾಗಿ ತಯಾರಿಸಿ ಸಿಂಪಡಿಸಿ ದರೆ ಕೊಳೆರೋಗವನ್ನು ಪರಿಣಾಮಕಾರಿಯಾಗಿ ಹತೋಟಿಗೆ ತರಬಹುದು.
*ಅಧಿಕ ಮಳೆ ಪ್ರಾರಂಭದ ಪೂರ್ವದಲ್ಲಿ ಅಡಿಕೆ ಗೊಂಚಲುಗಳನ್ನು ಪಾಲಿಥೀನ್ ಕವರ್ನಿಂದ ಮುಚ್ಚಬೇಕು. ಕೊಳೆ ರೋಗ ನಿರ್ವಹಣೆಗೆ ರೈತರು ಖರೀದಿಸುವ ಮೈಲುತುತ್ತು, ಸುಣ್ಣಕ್ಕೆ ತೋಟಗಾರಿಕೆ ಇಲಾಖೆಯಿಂದ ಸಹಾಯಧನವನ್ನು ವಿತರಿಸಲಾಗುತ್ತದೆ ಎಂದು ೋಟಗಾರಿಕಾ ಇಲಾಖೆ ಪ್ರಕಟಣೆ ತಿಳಿಸಿದೆ.