ಸ್ವಚ್ಛತೆಗಾಗಿ ದೇಶದ 13 ಪ್ರಮುಖ ಬಂದರುಗಳ ಪೈಕಿ ಎನ್ಎಂಪಿಟಿಗೆ ಪ್ರಥಮ ಸ್ಥಾನ
'2017-18ನೆ ಸಾಲಿಗೆ 190.55ಕೋಟಿ ನಿವ್ವಳ ಲಾಭಗಳಿಕೆ'
ಮಂಗಳೂರು, ಜು. 31: ನವಮಂಗಳೂರು ಬಂದರು ಮಂಡಳಿಯಿಂದ 2017-18ನೆ ಸಾಲಿನಲ್ಲಿ 124 .81 ಕೋಟಿ ರೂ ತೆರಿಗೆ ಪಾವತಿಸಿ, 190 .55 ಕೋಟಿ ರೂ. ನಿವ್ವಳ ಲಾಭಗಳಿಸಿದೆ ಎಂದು ಅಧ್ಯಕ್ಷ ಎಂ.ಟಿ. ಕೃಷ್ಣ ಬಾಬು ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ನವ ಮಂಗಳೂರು ಬಂದರು ಮಂಡಳಿಯಿಂದ 2017-18ನೆ ಸಾಲಿನಲ್ಲಿ 42.06 ಮಿಲಿಯನ್ ಮೆಟ್ರಿಕ್ ಟನ್ ಸರಕು ನಿರ್ವಹಣೆ ಮಾಡಲಾಗಿದ್ದು, 2016-17ನೆ ಸಾಲಿಗಿಂತ 5.28 ಶೇಕಡಾ ಹೆಚ್ಚುವರಿ ಸರಕು ನಿರ್ವಹಣೆ ಮಾಡಲಾಗಿದೆ ಎಂ.ಟಿ. ಕೃಷ್ಣ ಬಾಬು ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಸ್ವಚ್ಛತೆಯಲ್ಲಿ ಪ್ರಥಮ ಸ್ಥಾನ:-
ನವಮಂಗಳೂರು ಬಂದರು ಮಂಡಳಿಗೆ ಸ್ವಚ್ಛ ಭಾರತದ ಅಭಿಯಾನದಡಿ ದೇಶದ 13 ಪ್ರಮುಖ ಬಂದರುಗಳಲ್ಲಿ ಪ್ರಥಮ ಸ್ಥಾನ ದೊರೆತಿದೆ. ಬಂದರು ಮಂಡಳಿಯ ವ್ಯಾಪ್ತಿಯಲ್ಲಿ ಅಳವಡಿಸಲಾದ ಸೋಲಾರ್ ವಿದ್ಯುತ್ ಉತ್ಪಾದನೆಯ ಯೋಜನೆಯಿಂದ 840 ಕಿ.ವ್ಯಾ ವಿದ್ಯುತ್ ಉತ್ಫಾದನೆಯಾಗುತ್ತಿದ್ದು, ಇದರೊಂದಿಗೆ ಮಂಡಳಿಯ ವಿದ್ಯುತ್ ಬೇಡಿಕೆಯ ಶೇ. 95 ಭಾಗ ಸೋಲಾರ್ ವಿದ್ಯುತ್ನಿಂದ ಪೂರೈಕೆಯಾಗುತ್ತಿದೆ. ಸ್ವಚ್ಛ ಭಾರತ ಅಭಿಯಾನದ ಯೋಜನೆಯಡಿ ಈ ಯೋಜನೆಯನ್ನು ಪರಿಗಣಿಸಲಾಗಿದೆ ಎಂದು ಕೃಷ್ಣ ಬಾಬು ತಿಳಿಸಿದರು.
2017-18ನೆ ಸಾಲಿನಲ್ಲಿ 22 ಹಡುಗುಗಳ ಮೂಲಕ 24,258 ಪ್ರಯಾಣಿಕರು ಭೇಟಿ ನೀಡಿದ್ದಾರೆ. 2016-17 ನೆ ಸಾಲಿನಲ್ಲಿ 28 ಹಡಗುಗಳ ಮೂಲಕ 30,246 ಪ್ರಯಾಣಿಕರು ಭೇಟಿ ನೀಡಿದ್ದರು. ಈ ವರ್ಷಕ್ಕೆ ಹೋಲಿಸಿದಾಗ ಹಿಂದಿನ ವರ್ಷ ಹೆಚ್ಚು ಹಡಗುಗಳು ಮತ್ತು ಪ್ರಯಾಣಿಕರು ಭೇಟಿ ನೀಡಿದ್ದರು ಎಂದು ಎಂ.ಟಿ.ಕೃಷ್ಣ ಬಾಬು ತಿಳಿಸಿದ್ದಾರೆ.
ನವ ಮಂಗಳೂರು ಬಂದರು ಮಂಡಳಿಯಿಂದ 2017-18ನೆ ಸಾಲಿನಲ್ಲಿ 23.719 ಲಕ್ಷ ಟನ್ ಕಬ್ಬಿಣದ ಉಂಡೆಗಳನ್ನು, 23.999 ಲಕ್ಷ ಟನ್ ಸಂಸ್ಕರಿಸಿದ ಕಬ್ಬಿಣದ ಅದಿರು, 41.717 ಲಕ್ಷ ಟನ್ ಇದ್ದಿಲು ಸರಕುಗಳನ್ನು, ಕಂಟೈನರ್ ಮೂಲಕ 17.434 ಲಕ್ಷ ಟನ್ 22.09 ಲಕ್ಷ ಟನ್ ಎಲ್ಪಿಜಿ ನಿರ್ವಹಣೆ ಮಾಡಲಾಗಿದೆ. ಉಡುಪಿ ಪವರ್ ಪ್ಲಾಂಟ್ ಮೂಲಕ ಮಾಡಲಾಗುತ್ತಿದ್ದ ಕಲ್ಲಿದ್ದಲು, ಎಂಆರ್ಪಿಎಲ್ ಗೆ ಸರಬರಾಜಾಗುತ್ತಿದ್ದ ಕಚ್ಚಾ ತೈಲ ಪೂರೈಕೆಯಲ್ಲಿ 2016-17ನೆ ಸಾಲಿಗೆ ಹೋಲಿಸಿದಾಗ 2017-18ನೆ ಸಾಲಿನಲ್ಲಿ ಇಳಿಕೆಯಾಗಿದೆ. ಸಮಗ್ರವಾಗಿ ಸರಕು ಸಾಗಾಟದಲ್ಲಿ ಪ್ರಗತಿ ಸಾಧಿಸಲಾಗಿದೆ ಎಂದು ಎಂ.ಟಿ.ಕೃಷ್ಣ ಬಾಬು ಹೇಳಿದರು.
ಮಲೇಶ್ಯಾದಿಂದ ಮರಳು:-
ಜಿಲ್ಲೆಯಲ್ಲಿ ಮರಳುಗಾರಿಕೆಯನ್ನು ಕಡಿತಗೊಳಿಸುವ ನಿಟ್ಟಿನಲ್ಲಿ ವಿದೇಶದಿಂದ ಮರಳು ಆಮದು ಮಾಡಲು ಕೈಗೊಂಡ ತೀರ್ಮಾನದಂತೆ ನವ ಮಂಗಳೂರು ಬಂದರಿನ ಮೂಲಕ ಮಲೇಶ್ಯಾದಿಂದ 2017-18ನೆ ಸಾಲಿನಲ್ಲಿ 1 ಲಕ್ಷ 50 ಸಾವಿರ ಟನ್ ಮರಳು ಆಮದು ಮಾಡಿಕೊಳ್ಳಲಾಗಿದೆ ಎಂದು ಕೃಷ್ಣ ಬಾಬು ತಿಳಿಸಿದ್ದಾರೆ.
ಎರಡು ಯಾಂತ್ರೀಕೃತ ಭರ್ತ್ ನಿರ್ಮಾಣ ಯೋಜನೆ 2019ರಲ್ಲಿ ಪೂರ್ಣ:-
ಎರಡು ಯಾಂತ್ರೀಕೃತ ಭರ್ತ್ ನಿರ್ಮಾಣ ಯೋಜನೆ 2019ರಲ್ಲಿ ಪೂರ್ಣಗೊಳ್ಳಲಿದೆ. ಹಾಲಿ ಭರ್ತ್ ಸಂಖ್ಯೆ 16 ಸಾರ್ವಜನಿಕ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಯೋಜನೆ ಪ್ರಗತಿಯಲ್ಲಿದೆ ಎಂದು ಅವರು ಹೇಳಿದರು.
ಬಂದರು ಸರಕು ಸಾಗಾಟದ ವೆಚ್ಚ ಕಡಿತಗೊಳಿಸಲು ಕ್ರಮ:-
ಬಂದರು ಮಂಡಳಿಯ ಸರಕು ನಿರ್ವಹಣೆಯ ವೆಚ್ಚ ಕಡಿತಗೊಳಿಸಲು ಬಂದರಿನಲ್ಲಿ ಕಾರ್ಮಿಕರಿಗೆ ತಮ್ಮ ವೇತನದ ಹೊರತಾಗಿ ಹೆಚ್ಚುವರಿಯಾಗಿ ವೆಚ್ಚವನ್ನು ಪಡೆಯುವುದನ್ನು ತಡೆಯಲಾಗುವುದು ಇದರಿಂದ ಮಂಡಳಿಯ ಗ್ರಾಹಕರ ಮೇಲೆ ಹೆಚ್ಚಿನ ಹೊರೆ ಕಡಿಮೆಯಾಗಲಿದೆ ಈ ಬಗ್ಗೆ ಕ್ರಮ ಕೈ ಗೊಳ್ಳಲಾಗುವುದು. ಬಂದರಿನ ಕಾರ್ಮಿಕರಿಗೆ ಸಂಸ್ಥೆಯಿಂದ ವೇತನ ಮಾತ್ರ ಪಡೆಯಲು ಅವಕಾಶ ಕಲ್ಪಿಸಲಾಗುವುದು ಎಂದು ಕೃಷ್ಣ ಬಾಬು ತಿಳಿಸಿದ್ದಾರೆ.
ಬಂದರಿಗೆ ಸಮರ್ಪಕ ರಸ್ತೆ, ರೈಲು ಮಾರ್ಗದ ಸಂಪರ್ಕದ ಯೋಜನೆ:-
ನವ ಮಂಗಳೂರು ಬಂದರು ಮಂಡಳಿಗೆ ಒಳಗೆ ಸಮರ್ಪಕವಾಗಿ ಸರಕು ಸಾಗಾಟದ ಹಿನ್ನೆಲೆಯಲ್ಲಿ ಉತ್ತಮ ಮೂಲ ಸೌಕರ್ಯ ಅಭಿವೃದ್ಧಿಪಡಿಸಲು ರಸ್ತೆ, ರೈಲು ಮಾರ್ಗದ ಸಂಪರ್ಕ ವ್ಯವಸ್ಥೆಯನ್ನು ಉತ್ತಮ ಪಡಿಸುವ ಬಗ್ಗೆ ಯೋಜನೆ ಸಿದ್ಧವಾಗಿದೆ ಎಂದು ಕೃಷ್ಣ ಬಾಬು ತಿಳಿಸಿದ್ದಾರೆ.
2017-18ನೆ ಸಾಲಿನಲ್ಲಿ ನವ ಮಂಗಳೂರು ಮಂಡಳಿಯಿಂದ 2,60,66,000.00 ರೂ. ಮೊತ್ತವನ್ನು ಸಿಎಸ್ ಆರ್ ವೆಚ್ಚವಾಗಿ ಸಮುದಾಯ ಹಾಗೂ ಸಾರ್ವಜನಿಕ ಸೇವಾ ಕಾರ್ಯ ಯೋಜನೆಗಳಿಗೆ ವೆಚ್ಚ ಮಾಡಲಾಗಿದೆ ಎಂದು ಎಂ.ಟಿ.ಕೃಷ್ಣ ಬಾಬು ತಿಳಿಸಿದ್ದಾರೆ.