ಪುತ್ತೂರು: ರಸ್ತೆ ದುರಸ್ತಿಗೆ ಆಗ್ರಹಿಸಿ ಹೀಗೊಂದು ಪ್ರತಿಭಟನೆ
ಪುತ್ತೂರು, ಜು. 31: ರಸ್ತೆ ದುರಸ್ತಿಗೆ ಆಗ್ರಹಿಸಿ ಹಲವು ಕಡೆಗಳಲ್ಲಿ ಪ್ರತಿಭಟನೆ ಧರಣಿ ನಡೆಸುವುದು ಸಾಮಾನ್ಯವಾಗಿದೆ. ಆದರೆ ಪುತ್ತೂರು ತಾಲೂಕಿನ ಮುಂಡೂರು ಪರಿಸರದ ಸಾರ್ವಜನಿಕರು ರಸ್ತೆಯಲ್ಲಿ ಬಾಳೆ ಗಿಡನೆಟ್ಟು ಅದರೊಂದಿಗೆ ‘ಬೆರ್ಚಪ್ಪ’ನನ್ನು ನಿಲ್ಲಿಸಿ ಗಮನ ಸೆಳೆದಿದ್ದಾರೆ.
ಪುತ್ತೂರು -ಮುಂಡೂರು ನಡುವಿನ ಜಿಲ್ಲಾ ಪಂಚಾಯತ್ ರಸ್ತೆ ಮುಂಡೂರು ಸಮೀಪ ತೀರಾ ಹದೆಗೆಟ್ಟಿದ್ದು, ಈ ಬಗ್ಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳನ್ನು ಎಚ್ಚರಿಸಲು ರಸ್ತೆಯ ನಡುವೆ ಇರುವ ಗುಂಡಿಯಲ್ಲಿ ’ಬೆರ್ಚಪ್ಪ’ ನಿಲ್ಲಿಸುವ ಮೂಲಕ ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ವ್ಯಕ್ತ ಪಡಿಸಿದ್ದಾರೆ. ಈ ರಸ್ತೆಯು ಅಲ್ಲಲ್ಲಿ ಹೊಂಡಗಳು ನಿರ್ಮಾಣ ವಾಗಿದ್ದು, ಈ ಹೊಂಡಗಳಲ್ಲಿ ಮಳೆ ಬಂದರೆ ನೀರು ತುಂಬಿ ಹೊಂಡಗಳ ಆಳ ತಿಳಿಯದೆ ಹಲವಾರು ಬೈಕ್ ಸವಾರರು ಅಪಘಾತಕ್ಕೀಡಾಗಿದ್ದಾರೆ. ಈ ರಸ್ತೆಯ ದುರವಸ್ಥೆ ಬಗ್ಗೆ ಅಧಿಕಾರಿಗಳಿಗೆ ದೂರು ನೀಡಲಾಗಿದ್ದರೂ ಯಾವುದೇ ಪರಿಣಾಮ ಉಂಟಾಗಿಲ್ಲ. ವಾಹನ ಚಾಲಕರ ಪಾಲಿಗೆ ಉಂಟಾಗುವ ನರಕಸದೃಶವಾಗಿರುವ ರಸ್ತೆ ಬಗ್ಗೆ ಜನಪ್ರತಿನಿಧಿಗಳೂ ಮೌನ ಮುರಿಯುತ್ತಿಲ್ಲ ಎಂದು ಇಲ್ಲಿನ ಜನತೆ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ರಸ್ತೆ ದುರವಸ್ಥೆಯಿಂದ ಕಂಗೆಟ್ಟ ಮುಂಡೂರು ಹಾಗೂ ಕುರಿಯ ಭಾಗದ ರಿಕ್ಷಾ ಚಾಲಕರು ರಸ್ತೆ ಹೊಂಡದಲ್ಲಿ ಬಾಳೆಗಿಡವನ್ನು ನೆಟ್ಟು ಗಿಡದ ಮಧ್ಯೆ ’ಬೆರ್ಚಪ್ಪ’ ವಿನೂತನ ಶೈಲಿಯ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ.
ಕಳೆದ ಎರಡು ವರ್ಷಗಳಿಂದ ಮಳೆಗಾಲದಲ್ಲಿ ಇದೇ ಪರಿಸ್ಥಿತಿ ಉಂಟಾಗಿದ್ದರೂ ರಸ್ತೆಯನ್ನು ಸಂಚಾರ ಯೋಗ್ಯ ಮಾಡುವಲ್ಲಿ ಅಧಿಕಾರಿ ವರ್ಗ ಮುಂದಾಗಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಇದೇ ಪರಿಸ್ಥಿತಿ ಮುಂದುವರಿದರೆ ಸಾಮೂಹಿಕ ಹೋರಾಟ ನಡೆಸಲು ಮುಂದಾಗಬೇಕಾಗಿದೆ ಎಂದು ಜನತೆ ತಿಳಿಸಿದ್ದಾರೆ.