ಉಳ್ಳಾಲ ನಗರಸಭೆಯ ಆಡಳಿತವನ್ನು ಕಿತ್ತೊಗೆಯಿರಿ: ದಿನಕರ ಉಳ್ಳಾಲ್
ಉಳ್ಳಾಲ, ಜು. 31: ಉಳ್ಳಾಲ ನಗರ ಸಭೆಯು ಇತ್ತೀಚಿನ ವರ್ಷಗಳಲ್ಲಿ ನಾಗರಿಕರಿಗೆ ಮೂಲಭೂತ ಸೌಲಭ್ಯಗಳನ್ನು ನೀಡದೆ ಆಡಳಿತ ಪಕ್ಷದ ಕೌನ್ಸಿಲರ್ಗಳ ದಬ್ಬಾಳಿಕೆ, ಅಭಿವೃದ್ಧಿಯಲ್ಲಿ ತಾರತಮ್ಯ, ಭ್ರಷ್ಟಾಚಾರದಲ್ಲಿ ತೊಡಗಿರುವುದರಿಂದ ಈ ಆಡಳಿತವನ್ನು ಕಿತ್ತೊಗೆದು ಈ ಬಾರಿ ಜನತಾದಳವನ್ನು ಅಧಿಕಾರಕ್ಕೆ ತರುವಂತೆ ಕರ್ನಾಟಕ ಕರ್ನಾಟಕ ಪ್ರದೇಶ ಜನತಾದಳದ ರಾಜ್ಯ ಪ್ರಧಾನ ಕಾರ್ಯದರ್ಶಿ ದಿನಕರ ಉಳ್ಳಾಲ್ ಅವರು ಕರೆ ನೀಡಿದರು.
ಅವರು ಉಳ್ಳಾಲ ನಗರಸಭೆ ಕಚೇರಿ ಎದುರು ನಗರಾಡಳಿತದ ದುರಾಡಳಿತದ ವಿರುದ್ಧ ಮಂಗಳವಾರ ಉಳ್ಳಾಲ ನಗರ ಜೆಡಿಎಸ್ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.
ಉಳ್ಳಾಲ ನಗರಸಭೆಯಲ್ಲಿ ಕಮಿಷನ್ ದಂಧೆಯು ವ್ಯಾಪಕವಾಗಿದ್ದು, ಕಮಿಷನ್ ಹಣದಲ್ಲೇ ನಗರ ಸದಸ್ಯರು ಕಾರು, ಮನೆಗಳನ್ನು ಖರೀಧಿಸಿ ಅತೀ ಭ್ರಷ್ಟ ಆಡಳಿತ ನಡೆಸುತ್ತಿದ್ದಾರೆ. ಇದಕ್ಕೆ ಬಿಜೆಪಿಯವರು ಕೂಡಾ ಸಾಥ್ ನೀಡಿ ಹೊಂದಾಣಿಕೆ ರಾಜಕಾರಣ ಮಾಡಿಕೊಂಡಿದ್ದಾರೆ. ಆದ್ದರಿಂದ ಮುಂದಿನ ಎರಡು ತಿಂಗಳಿನಲ್ಲಿ ನಡೆಯುವ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳು ಗೆದ್ದು ಈ ಕಮಿಷನ್ ದಂಧೆಯನ್ನು ಬಯಲಿಗೆಳೆಯಲಿದ್ದಾರೆ ಎಂದರು.
ನಗರಸಭಾ ಸದಸ್ಯ ಪಾರೂಕ್ ಎಚ್ ಮಾತನಾಡಿ, ನಗರ ವ್ಯಾಪ್ತಿಯಲ್ಲಿ ಇನ್ನೂ ಸುಸಜ್ಜಿತ ಕ್ರೀಡಾಂಗಣ, ಈಜುಕೊಳವನ್ನು ನಿರ್ಮಿಸಲು ಇನ್ನೂ ಸಾಧ್ಯವಾಗಿಲ್ಲ ಎಂದರು.
ಪ್ರತಿಭಟನೆಯಲ್ಲಿ ಮುಖಂಡರಾದ ನಝೀರ್ ಉಳ್ಳಾಲ್, ಗಂಗಾಧರ ಉಳ್ಳಾಲ್, ಪುತ್ತುಮೋನು ಹುಸೈನ್, ಜಿನ್ನಪ್ಪ ಬಂಗೇರ, ಆಲ್ಪ್ರೇಟ್ ಡಿಸೋಜ, ಇಬ್ರಾಹಿಂ ತವಕ್ಕಲ್, ಹುಸೇನ್ ಮೋನು, ರವೀಂದ್ರ ಉಳ್ಳಾಲ್, ಮುರುಗೇಶ್ ಉಳ್ಳಾಲ್, ತ್ಯಾಗರಾಜ್ ಮೊದಲಾದವರು ಉಪಸ್ಥಿತರಿದ್ದರು.