ವಸತಿ ಯೋಜನೆಯ ಮನೆ ಆವರಣದಲ್ಲಿ ಗಿಡ ನೆಡುವುದು ಕಡ್ಡಾಯಗೊಳಿಸಲು ಕ್ರಮ: ಸಚಿವ ಖಾದರ್
ಮಂಗಳೂರು, ಆ.1: ಸರಕಾರದಿಂದ ನಿರ್ಮಾಣವಾಗುವ ವಸತಿ ಯೋಜನೆಯ ಪ್ರತಿ ಮನೆಗಳ ಎದುರಲ್ಲೂ ಬೇವು, ತುಳಸಿ ಇತರ ಔಷದೀಯ ಗುಣಗಳ ಔಷದೀಯ ಸಸ್ಯಗಳು ಅಥವಾ ದಿನಬಳಕೆಯ ಸಸ್ಯಗಳನ್ನು ಬೆಳೆಸುವುದು ಕಡ್ಡಾಯಗೊಳಿಸುವ ಬಗ್ಗೆ ನಿಯಮ ರೂಪಿಸಲಾಗುವುದು ಎಂದು ನಗರಾಭಿವೃದ್ಧಿ ಮತ್ತು ವಸತಿ ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಖಾದರ್ ತಿಳಿಸಿದ್ದಾರೆ.
ನಗರದ ಪುರಭವನದಲ್ಲಿಂದು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ನೇತೃತ್ವದಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಹಮ್ಮಿಕೊಂಡ ಪರಿಸರ ಸಂರಕ್ಷಣಾ ದಿನದ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಪ್ರತಿ ಮನೆಯಲ್ಲೂ ಪರಿಸರ ಸಂರಕ್ಷಣೆ ಗಿಡ ನೆಡುವ, ಬೆಳೆಸುವ ವಾತಾವರಣ ನಿರ್ಮಾಣವಾಗಬೇಕಾಗಿದೆ ಎಂದು ಅವರು ನುಡಿದರು.
ಮಾಲಿನ್ಯ ನಿಯಂತ್ರಣ ತಡೆಗೆ ಕಾನೂನು ಜಾರಿ ಅಧಿಕಾರಿಗಳ ಹೊಣೆಗಾರಿಕೆ:
ಮಾಲಿನ್ಯ ನಿಯಂತ್ರಣ ತಡೆಗೆ ಸಂಬಂಧಿಸಿದ ಕಾನೂನು ಜಾರಿ ಮಾಡುವ ಹೊಣೆಗಾರಿಕೆ ಅಧಿಕಾರಿಗಳ ಮೇಲಿದೆ. ಅದರಲ್ಲಿ ನ್ಯೂನತೆಯಾದಾಗ ಪರಿಸರ ಮತ್ತು ಜನತೆಗೆ ತೊಂದರೆ ಉಂಟಾಗುತ್ತದೆ. ಈ ನಿಟ್ಟಿನಲ್ಲಿ ಸಮಾಜದ ಎಲ್ಲಾ ಜನರ ಸಹಕಾರ ಅಗತ್ಯ. ಪರಿಸರ ಮಾಲಿನ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಕಾನೂನು ಮೂಲಕ ಸಂಪೂರ್ಣ ತಡೆಗಟ್ಟಲು ಸಾಧ್ಯವಿಲ್ಲ. ಈ ಬಗ್ಗೆ ಜನಜಾಗೃತಿ ಅನಿವಾರ್ಯ ಎಂದು ಸಚಿವರು ಅಭಿಪ್ರಾಯಿಸಿದರು.
*ಪರಿಸರ ಸಮತೋಲನದೊಂದಿಗೆ ಅಭಿವೃದ್ಧಿ:
ಸಮಾಜದ ಬೆಳವಣಿಗೆ ಅಭಿವೃದ್ಧಿ ಅಗತ್ಯ. ಆದರೆ ಪರಿಸರಕ್ಕೆ ಹಾನಿಯಾಗುವ ರೀತಿಯ ಅಭಿವೃದ್ಧಿ ಯೋಜನೆಗಳನ್ನು ಕೈಗೊಂಡರೆ ಮುಂದಿನ ಜನಾಂಗಕ್ಕೆ ನಾವು ಸಂಕಷ್ಟದ ಪರಿಸ್ಥಿತಿಯನ್ನು ತಂದೊಡ್ಡಿದಂತಾಗುತ್ತದೆ. ಪರಿಸರ ಸಮತೋಲನದ ಯೋಜನೆಗಳು ನಮ್ಮ ನಡುವೆ ಜಾರಿಯಾಗಬೇಕಾಗಿದೆ ಎಂದು ಖಾದರ್ ತಿಳಿಸಿದ್ದಾರೆ.
ಸಮಾರಂಭದಲ್ಲಿ ಶಾಸಕರಾದ ವೇದವ್ಯಾಸ ಕಾಮತ್, ಹರೀಶ್ ಕುಮಾರ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ನ್ಯಾಯಾಧೀಶ ಮಲ್ಲನ ಗೌಡ, ಜಿಪಂ ಅಧ್ಯಕ್ಷೆ ಮಿನಾಕ್ಷಿ ಶಾಂತಿಗೋಡು, ವಿಭಾಗೀಯ ಅರಣ್ಯ ಸಂರಕ್ಷಣಾಧಿಕಾರಿ ಡಾ.ವಿ.ಕರಿಕಲ್ಲನ್, ಮನಪಾ ಆಯುಕ್ತ ಮುಹಮ್ಮದ್ ನಝೀರ್, ಎನ್ಐಟಿಕೆ ಪ್ರೊಫೆಸರ್ ಜಿ.ಶ್ರೀನಿಕೇತನ್, ದ.ಕ. ಜಿಲ್ಲಾ ಅಪರ ಜಿಲ್ಲಾಧಿಕಾರಿ ಕುಮಾರ್, ಕಿರುತೆರೆ ಕಲಾವಿದ ಹರ್ಷ ಮೊದಲಾದವರು ಉಪಸ್ಥಿತರಿದ್ದರು.
ಪರಿಸರ ಸಂರಕ್ಷಣೆಯ ಅಂಗವಾಗಿ ಹಮ್ಮಿಕೊಂಡಿದ್ದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಇದೇ ಸಂದರ್ಭ ಬಹುಮಾನಗಳನ್ನು ವಿತರಿಸಲಾಯಿತು. ಜಯಪ್ರಕಾಶ್ ನಾಯಕ್, ಕದ್ರಿ ನವನೀತ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಪರಿಸರ ಸಂರಕ್ಷಣೆಗೆ ಸಂಬಂದಿಸಿದಂತೆ ಉತ್ತಮ ಸಾಧನೆ ಮಾಡಿದ ಸಂಸ್ಥೆಗಳಿಗೆ ಪುರಸ್ಕರಾ ನೀಡಲಾಯಿತು. ದಕ್ಷಿಣ ಕನ್ನಡ ಜಿಲ್ಲಾ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿ ರಾಜಶೇಖರ ಪುರಾಣಿಕ್ ಮೊದಲಾದವರು ಉಪಸ್ಥಿತರಿದ್ದರು