ವಿಶ್ವಕರ್ಮ ಸಮುದಾಯದ ಅವಹೇಳನ: ಕ್ರಮಕ್ಕೆ ಎಸ್ಪಿಗೆ ಮನವಿ
ಉಡುಪಿ, ಆ.1: ಸಾಮಾಜಿಕ ಜಾಲತಾಣಗಳಲ್ಲಿ ವಿಶ್ವಕರ್ಮ ಸಮುದಾಯ ವನ್ನು ಅವಹೇಳನ ಮಾಡಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳು ವಂತೆ ಆಗ್ರಹಿಸಿ ಉಡುಪಿ ತಾಲೂಕು ವಿಶ್ವಕರ್ಮ ಕಾರ್ಪೆಂಟರ್ಸ್ ಯೂನಿಯನ್ ಬುಧವಾರ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಮನವಿ ಸಲ್ಲಿಸಿತು.
ವಿಶ್ವಕರ್ಮ ಸಮುದಾಯವನ್ನು ಅವಹೇಳನ ಮಾಡುವ ಉದ್ದೇಶದಿಂದ ಕುರ್ಕಾಲು ಪ್ರದೀಪ್ ಶೆಟ್ಟಿ ಮತ್ತು ಭರತ್ ಆಳ್ವ ಎಂಬವರು ತಮ್ಮ ಫೇಸ್ಬುಕ್ ನಲ್ಲಿ ಪೋಸ್ಟ್ಗಳನ್ನು ಹಾಕಿದ್ದು, ಈ ಮೂಲಕ ಸಮುದಾಯವನ್ನು ಸಮಾಜದಲ್ಲಿ ಅವಮಾನಿಸಿದ್ದಾರೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಈ ಸಂದೇಶ ಇತ್ತೀಚೆಗೆ ಎಲ್ಲೆಂದರಲ್ಲಿ ವಾಟ್ಸ್ಆ್ಯಪ್ ಗ್ರೂಪ್ಗಳಲ್ಲಿ ಹರಿದಾಡುತ್ತಿದ್ದು, ನಮ್ಮ ಸಮುದಾಯದ ಗೌರವಕ್ಕೆ ಧಕ್ಕೆ ಉಂಟಾಗಿದೆ. ಈ ರೀತಿ ಅವ ಹೇಳನ ಮಾಡಿರುವ ಮಧುಸೂದನ ಶೆಟ್ಟಿಗಾರ್ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಯೂನಿಯನ್ ಮನವಿಯಲ್ಲಿ ಆಗ್ರಹಿಸಿದೆ.
ಮನವಿಯನ್ನು ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಚಂದ್ರ ಸ್ವೀಕರಿಸಿ, ಕ್ರಮದ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಯುನಿಯೂನ್ ಅಧ್ಯಕ್ಷ ನಿಟ್ಟೂರು ಗೋಕುಲ್ ಆಚಾರ್ಯ, ಪ್ರಧಾನ ಕಾರ್ಯದರ್ಶಿ ಜಯ ಕರ ಆಚಾರ್ಯ, ಕಾನೂನು ಸಲಹೆಗಾರ ಎಚ್.ಎಂ.ಗಂಗಾಧರ ಆಚಾರ್ಯ, ಗೌರವಾಧ್ಯಕ್ಷ ಬಳ್ಕೂರು ಗೋಪಾಲ ಆಚಾರ್ಯ, ಉಪಾಧ್ಯಕ್ಷರಾದ ಅಚ್ಯುತ ಆಚಾರ್ಯ, ರಮೇಶ್ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು.