ಲೋಕಸಭಾ ಚುನಾವಣೆಯಲ್ಲಿ ಕ್ರೈಸ್ತ ನಾಯಕರಿಗೆ ಟಿಕೆಟ್: ಕ್ರೈಸ್ತ ಒಕ್ಕೂಟ ಆಗ್ರಹ
ಉಡುಪಿ, ಆ.1: ಮುಂದಿನ ಲೋಕಸಭಾ ಚುನಾವಣೆಯಲ್ಲಿ ಉಡುಪಿ ಜಿಲ್ಲೆಯ ಸಮಸ್ತ ಕ್ರೈಸ್ತ ಸಮಾಜ ಬಾಂಧವರ ಪರವಾಗಿ ಒಮ್ಮತದ ಕ್ರೈಸ್ತ ನಾಯಕ ನನ್ನು ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಕಣಕ್ಕೀಳಿಸಲು ನಿರ್ಧರಿಸಲಾಗಿದೆ ಎಂದು ಅಂತಾರಾಷ್ಟ್ರೀಯ ಕ್ರೈಸ್ತ ಸಂಘಗಳ ಒಕ್ಕೂಟ ಕರ್ನಾಟಕ ಇದರ ಉಡುಪಿ ಜಿಲ್ಲಾಧ್ಯಕ್ಷ ಡಾ. ನೇರಿ ಕರ್ನೆಲಿಯೊ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಸುಮಾರು 25ರಿಂದ 30ಲಕ್ಷ ಕ್ರೈಸ್ತ ಮತದಾರರಿದ್ದು, ರಾಜ್ಯದ 27 ಜಿಲ್ಲೆಗಳಲ್ಲಿ ಕ್ರೈಸ್ತ ಮತದಾರರು ತಮ್ಮ ಹಕ್ಕನ್ನು ಚಲಾಯಿಸುತ್ತಿದ್ದಾರೆ. ಸದ್ಯ ಕಾಂಗ್ರೆಸ್ ಪಕ್ಷದಲ್ಲಿ ಕ್ರೈಸ್ತ ನಾಯಕರು ಇರುವುದರಿಂದ ಲೋಕಸಭಾ ಚುನಾವಣೆ ಯಲ್ಲಿ ಎರಡು ಸ್ಥಾನವನ್ನು ಕ್ರೈಸ್ತ ಸಮುದಾಯಕ್ಕೆ ಸ್ವರ್ಧಿಸಲು ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.
ಮುಂದಿನ ಚುನಾವಣೆಯಲ್ಲಿ ಉಡುಪಿ ಲೋಕಸಭಾ ಕ್ಷೇತ್ರದಿಂದ ಕ್ರೈಸ್ತ ಸಮು ದಾಯದ ರಾಜ್ಯ ನಾಯಕ, ಮಾಜಿ ಸರಕಾರಿ ಮುಖ್ಯ ಸಚೇತಕ ಹಾಗೂ ವಿಧಾನ ಪರಿಷತ್ತಿನ ಸದಸ್ಯ ಐವನ್ ಡಿಸೋಜರಿಗೆ ಅವಕಾಶ ನೀಡಬೇಕು. ಅದೇ ರೀತಿ ಬೆಂಗಳೂರು ಸೆಂಟ್ರಲ್ನಲ್ಲಿಯೂ ಕ್ರೈಸ್ತ ಸಮುದಾಯದವರಿಗೆ ಸ್ಪರ್ಧಿಸಲು ಅವಕಾಶ ಕಲ್ಪಿಸಬೇಕೆಂದು ಕಾಂಗ್ರೆಸ್ ಪಕ್ಷವನ್ನು ಒತ್ತಾಯಿಸಲಾಗುವುದು ಎಂದರು.
ಕಳೆದ ಹಲವಾರು ವರ್ಷಗಳಿಂದ ಪಕ್ಷ ಸಂಘಟನೆ ಮಾತ್ರವಲ್ಲದೆ ಜಾತಿ, ಮತ, ಬೇದ ಮಾಡದೆ, ಎಲ್ಲ ವರ್ಗದವರಿಗೂ ಸಹಾಯ ಹಸ್ತ ನೀಡಿರುವ ಐವನ್ ಡಿಸೋಜ, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದರಾದರೆ ಕ್ಷೇತ್ರ ಅಭಿವೃದ್ಧಿ ಮಾತ್ರ ವಲ್ಲದೇ ಬಡ ಮತ್ತು ಶೋಷಿತ ವರ್ಗದವರ ದ್ವನಿಯಾಗಲಿದ್ದಾರೆ ಎಂದರು.
ಆದುದರಿಂದ ಉಡುಪಿ ಜಿಲ್ಲಾ ಕಾಂಗ್ರೆಸ್ ಐವನ್ ಡಿಸೋಜರವರನ್ನು ಸರ್ವಸಮ್ಮತದ ಅಭ್ಯರ್ಥಿಯಾಗಿ ಆಯ್ಕೆ ಮಾಡುವಲ್ಲಿ ವಿಶೇಷ ಪ್ರಯತ್ನವನ್ನು ಮಾಡಬೇಕು. ಈ ಸಂಬಂಧ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಸೋನಿಯ ಗಾಂಧಿ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯ ಮಂತ್ರಿ ಜಿ.ಪರಮೇಶ್ವರ್ ಅವರನ್ನು ಶೀಘ್ರ ದಲ್ಲಿ ಜಿಲ್ಲೆಯ ಕ್ರೈಸ್ತ ನಿಯೋಗ ಭೇಟಿ ಮಾಡಿ ಮನವಿ ಸಲ್ಲಿಸಲಿದೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಭಾರತೀಯ ಕ್ರೈಸ್ತ ಒಕ್ಕೂಟದ ರಾಜ್ಯಾಧ್ಯಕ್ಷ ಪ್ರಶಾಂತ್ ಜತ್ತನ್ನ, ಉಡುಪಿ ಜಿಲ್ಲಾ ಅಲ್ಪಸಂಖ್ಯಾತ ವೇದಿಕೆಯ ಪ್ರಧಾನ ಕಾರ್ಯದರ್ಶಿ ಚಾರ್ಲ್ಸ್ ಅಂಬ್ಲರ್, ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸ್ಟೀವನ್ ಕುಲಾಸೊ ಉದ್ಯಾವರ, ಕಥೋಲಿಕ್ ಸಭಾ ಜಿಲ್ಲಾಧ್ಯಕ್ಷ ಅಲ್ವಿನ್ ಕ್ವಾಡ್ರಸ್, ಪ್ರಧಾನ ಕಾರ್ಯದರ್ಶಿ ಮ್ಯಾಕ್ಸಿಮ್ ಡಿಸೋಜ, ಡಿಯೋನ್ ಡಿಸೋಜ, ವಲೇರಿಯನ್ ಫೆರ್ನಾಂಡಿಸ್, ಕಥೋಲಿಕ್ ಸ್ತ್ರೀ ಸಂಘಟನೆಯ ಜಿಲ್ಲಾಧ್ಯಕ್ಷೆ ಜಾನೆಟ್ ಬರ್ಬೋಜ ಉಪಸ್ಥಿತರಿದ್ದರು.