ಎಡಪದವು: ಐಡಿಯಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವನಮಹೋತ್ಸವ
ಮಂಗಳೂರು, ಆ. 1: ಎಡಪದವು ಐಡಿಯಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾಲಾ ಮುಖೋಪಾಧ್ಯಾಯಿನಿ ನಂದಾ ಉಮಾ ಪ್ರಿಯಾ ಗಡಿಯಾರ್ ಅವರ ಅಧ್ಯಕ್ಷತೆಯಲ್ಲಿ ವನಮಹೋತ್ಸವ ಆಚರಿಸಲಾಯಿತು.
ನಂತರ ಮಾತನಾಡಿದ ಅವರು ಗಿಡಮರಗಳನ್ನು ಬೆಳೆಸುವುದರಿಂದ ಪರಿಸರದ ಮಾಲಿನ್ಯವನ್ನು ತಡೆಯಬಹುದು. ಗಿಡಗಳನ್ನು ನೆಟ್ಟು ಅದರ ಪೋಷಣೆ ಯನ್ನು ಕೂಡಾ ಮಾಡುವುದು ಅವಶ್ಯಕ, ಸಾಲು ಮರದ ತಿಮ್ಮಕ್ಕ ಗಿಡಗಳನ್ನು ನೆಟ್ಟು ದೂರದಿಂದ ನೀರನ್ನು ಹೊತ್ತು ತಂದು ಅವುಗಳನ್ನು ತನ್ನ ಸ್ವಂತ ಮಕ್ಕಳಂತೆ ಪೋಷಣೆಯನ್ನು ಮಾಡಿ ಎಲ್ಲರಿಗೂ ಪರಿಸರದ ಬಗ್ಗೆ ಜಾಗೃತಿಯನ್ನು ಮೂಡಿಸಿದರು. ಅವರ ಆದರ್ಶ, ಪರಿಸರ ಪ್ರೇಮ, ಕಾಳಜಿಯನ್ನು ವಿದ್ಯಾರ್ಥಿಗಳು ತಮ್ಮಲ್ಲಿ ಅಳವಡಿಸಿಕೊಳ್ಳಬೇಕು. ಪರಿಸರದ ತಾಪವು ದಿನೇ ದಿನೇ ಏರಿಕೆ ಆಗುತ್ತಿರುವುದು ಕಳವಳದ ಸಂಗತಿಯಾಗಿದೆ. ಇದಕ್ಕೆ ಮೂಲ ಕಾರಣ ಗಿಡಮರಗಳ ನಾಶವೇ ಆಗಿದೆ. ಪರಿಸರದ ಗಾಳಿಯು ದಿನದಿಂದ ದಿನಕ್ಕೆ ಮಲಿನಗೊಳ್ಳುತ್ತಿದೆ. ವಾತಾವರಣದ ಇಂಗಾಲದ ಡೈ ಆಕ್ಸೈಡ್ ವಿಪರೀತ ಪ್ರಮಾಣದಲ್ಲಿ ಹೆಚ್ಚುತ್ತಿರುವುದರಿಂದ ನಮ್ಮ ಆರೋಗ್ಯದ ಮೇಲೆ ಪ್ರತಿಕೂಲಪರಿಣಾಮವನ್ನು ಬೀರುತ್ತಿದೆ. ಎಲ್ಲರೂ ತಮ್ಮ ಪರಿಸರದಲ್ಲಿ ಗಿಡಗಳನ್ನು ನೆಟ್ಟು ಅದರ ಪೋಷಣೆ ಹಾಗೂ ರಕ್ಷಣೆಯನ್ನು ಮಾಡಿ ಪರಿಸರದ ಸಮತೋಲನವನ್ನು ಕಾಪಾಡಿಕೊಳ್ಳಬೇಕು ಎಂದು ಕರೆ ನೀಡಿದರು.
ವಿದ್ಯಾರ್ಥಿಗಳು ತಾವು ತಂದ ಗಿಡಗಳನ್ನು ಶಾಲಾ ವಠಾರದಲ್ಲಿ ನೆಡುವುದರ ಮೂಲಕ ವನಮಹೋತ್ಸವ ಆಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಿದರು. ಶಿಕ್ಷಕಿ ಯಾಸ್ಮಿನ್ ಎಲ್ಲರನ್ನೂ ಸ್ವಾಗತಿಸಿದರು. ಶಿಕ್ಷಕಿ ಸೀಮಾ ಕರ್ಕಿ ಕಾರ್ಯಕ್ರಮವನ್ನು ನಿರ್ವಹಿಸಿದರು. ಶಿಕ್ಷಕ ಸೈಮನ್ ವಂದಿಸಿದರು. ಸಹಮುಖ್ಯೋಪಾಧ್ಯಾಯರಾದ ಫೆಲಿಕ್ಸ್ ಸಿಕ್ವೇರಾ, ಶಾಲಾ ಮ್ಯಾನೇಜರ್ ಫ್ಲೋಸ್ಸಿ ತಾವ್ರೋ ಉಪಸ್ಥಿತರಿದ್ದರು. ದೈಹಿಕ ಶಿಕ್ಷಕ ಗಣೇಶ್ ಸಹಕರಿಸಿದರು.