ನವಾಯತ್ ಸಮುದಾಯದ ಮಾಹಿತಿ ಕಣಜ ಅಬ್ದುಲ್ಲಾ ದಾಮೂದಿ ನಿಧನ
ಭಟ್ಕಳ, ಆ.1: ಉತ್ತರಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಪ್ರಮುಖ ಸಮುದಾಯವಾಗಿರುವ ನವಾಯತ್ ಸಮುದಾಯದ ಮಾಹಿತಿ ಕಣಜ ಎಂದೇ ಗುರುತಿಸಲ್ಪಟ್ಟಿರುವ ಶಿಕ್ಷಣ ತಜ್ಞ, ಸಾಹಿತಿ ಹಾಗೂ ವಿವಿಧ ಸಾಮಾಜಿಕ ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದ ಅಬ್ದುಲ್ಲಾ ದಾಮೂದಿ (77) ಬುಧವಾರ ಮಧ್ಯಾಹ್ನ ಮಗ್ದೂಮ್ ಕಾಲನಿಯ ತಮ್ಮ ಸ್ವಗೃಹದಲ್ಲಿ ನಿಧನರಾದರು.
ನವಾಯತ್ ಸಮುದಾಯದ ಕುರಿತಂತೆ ಹಲವು ಮಹತ್ತರ ಮಾಹಿತಿ ಹಾಗೂ ದಾಖಲೆಗಳನ್ನು ಹೊಂದಿದ್ದ ಅಬ್ದುಲ್ಲಾ ದಾಮೂದಿ ಈ ನಿಟ್ಟಿನಲ್ಲಿ ಬೃಹತ್ ಸಂಗ್ರಹವನ್ನೇ ಇಟ್ಟುಕೊಂಡಿದ್ದರು. ಇಲ್ಲಿನ ಸಾಮಾಜಿಕ, ರಾಜಕೀಯ ಸಂಸ್ಥೆಯಾಗಿರು ಮಜ್ಲಿಸೆ-ಇಸ್ಲಾಹ್-ವ-ತಂಝೀಮ್ ನಲ್ಲಿ ಪ್ರಮುಖ ಹುದ್ದೆಗಳೊಂದಿಗೆ ಸಾಮಾಜಿ ಹಾಗೂ ಶೈಕ್ಷಣಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಮಾದರೆ ಹವ್ವಾ ಶಿಕ್ಷಣ ಸಂಸ್ಥೆಯ ಸ್ಥಾಪಕರಾಗಿದ್ದ ಇವರು ಅಂಜುಮನ್ ಹಾಮಿಯೇ ಮುಸ್ಲಿಮೀನ ಶಿಕ್ಷಣ ಸಂಸ್ಥೆಯ ಸಕ್ರೀಯ ಸದಸ್ಯರಾಗಿದ್ದು ಹಲವು ಹುದ್ದೆಗಳನ್ನು ಅತ್ಯಂತ ಪ್ರಮಾಣಿಕತೆ ನಿಭಾಯಿಸಿದ ಕೀರ್ತಿ ಇವರದ್ದಾಗಿದೆ. ಅಲ್ಲದೆ ರಾಜಕೀಯದಲ್ಲೂ ಗುರುತಿಸಿಕೊಂಡಿದ್ದ ಅವರು ಜನತಾದಳ (ಎಸ್) , ವೆಲ್ಫೇರ್ ಪಾರ್ಟಿಗಳಲ್ಲಿ ಕೆಲ ಸಮಯ ಕಾರ್ಯನಿರ್ವಹಿಸಿದ್ದಾರೆ.
ತಂಝೀಮ್ ಸಂಸ್ಥೆಯ ಶತಮಾನೋತ್ಸವ ಸಮಿತಿ ಸಂಚಾಲಕರಾಗಿ ಅತ್ಯಂತ ಯಶಸ್ವಿಯಾಗಿ ಶತಮಾನೋತ್ಸವ ಸಮಾರಂಭವನ್ನು ಆಯೋಜಿಸಿ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದರು. ಕೆಲ ದಿನಗಳಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಇವರು ಬುಧವಾರ ಮೃತಪಟ್ಟಿದ್ದಾರೆ. ಮೃತರು ಪತ್ನಿ, ಐದು ಮಂದಿ ಪುತ್ರಿಯರು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.
ಇವರ ನಿಧನಕ್ಕೆ ಅಂಜುಮನ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಅಬ್ದುಲ್ ರಹೀಮ್ ಜುಕಾಕೋ, ತಂಝೀಮ್ ಪ್ರಧಾನ ಕಾರ್ಯದರ್ಶಿ ಮುಹಿದ್ದೀನ ಅಲ್ತಾಫ್ ಖರೂರಿ, ಜಮಾಅತೆ ಇಸ್ಲಾಮಿ ಹಿಂದ್ ಭಟ್ಕಳ ಶಾಖೆಯ ಅಧ್ಯಕ್ಷ ಮುಜಾಹಿದ್ ಮುಸ್ತಫಾ, ಕೆನರಾ ಕೌನ್ಸಿಲ್ ಅಧ್ಯಕ್ಷ ಅಬ್ದುಲ್ ಕಾದಿರ್ ಬಾಷಾ ರುಕ್ನುದ್ದೀನ್, ರಾಬಿತಾ ಸಂಸ್ಥೆ, ಅಲಿಪಬ್ಲಿಕ್ ಸ್ಕೂಲ್, ಜಾಮಿಯಾ ಇಸ್ಲಾಮಿಯಾ ಶಿಕ್ಷಣ ಸಂಸ್ಥೆ, ನ್ಯೂಶಮ್ಸ್ ಸ್ಕೂಲ್, ಆಲ್ ಇಂಡಿಯಾ ಐಡಿಯಾಲ್ ಟೀಚರ್ಸ್ ಅಸೋಸಿಯೇಶನ್ ಉತ್ತರಕನ್ನಡ ಜಿಲ್ಲೆ, ನಾರ್ತ್ ಕೆನರಾ ಮುಸ್ಲಿಮ್ ಯುನೈಟೆಡ್ ಫೋರಂ, ರಾಬಿತಾ ಮಿಲ್ಲಾತ್ ಸೇರಿದಂತೆ ಉತ್ತರಕನ್ನಡ ಜಿಲ್ಲೆಯ ಹಲವು ಸಾಮಾಜಿಕ, ಶೈಕ್ಷಣಿಕ ಸಂಘಸಂಸ್ಥೆಗಳು ಸಂತಾಪವನ್ನು ವ್ಯಕ್ತಪಡಿಸಿದ್ದಾರೆ.