ಶಿರಾಡಿ ಘಾಟ್: ಆ. 2ರಿಂದ ಎಲ್ಲ ವಾಹನಗಳ ಸಂಚಾರಕ್ಕೆ ಮುಕ್ತ
ಮಂಗಳೂರು, ಆ.1: ಶಿರಾಡಿ ಘಾಟ್ ರಸ್ತೆ ಕಾಮಗಾರಿ ಬಹುತೇಕ ಮುಕ್ತಾಯಗೊಂಡಿರುವುದರಿಂದ ಈ ರಸ್ತೆಯಲ್ಲಿ ಭಾರೀ ವಾಹನಗಳ ಸಂಚಾರಕ್ಕೆ ನಿಷೇಧ ವಿಧಿಸಿ ಹೊರಡಿಸಿರುವ ಆದೇಶವನ್ನು ಹಿಂದಕ್ಕೆ ಪಡೆಯಲಾಗಿದೆ.
ಆ.2ರಿಂದ ಶಿರಾಡಿ ಘಾಟ್ನಲ್ಲಿ ಭಾರೀ ವಾಹನಗಳು ಸೇರಿದಂತೆ ಎಲ್ಲ ವಾಹನಗಳಿಗೆ ಮುಕ್ತ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಎಸ್. ಸಸಿಕಾಂತ್ ಸೆಂಥಿಲ್ ಆದೇಶದಲ್ಲಿ ತಿಳಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟಿ ರಸ್ತೆಯಲ್ಲಿ ಅಪೂರ್ಣ ಸ್ಥಿತಿಯಲ್ಲಿದ್ದ ತಡೆಗೋಡೆ ಮತ್ತು ರಸ್ತೆ ಬದಿಯಲ್ಲಿ ಮಣ್ಣು ಹಾಕುವ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಗುರುವಾರದಿಂದಲೇ ಘನ ವಾಹನ ಸಂಚಾರಕ್ಕೆ ಹೆದ್ದಾರಿ ಮುಕ್ತವಾಗಲಿದೆ.
ಮಂಗಳೂರು -ಬೆಂಗಳೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟ್ ರಸ್ತೆಯ ಎರಡನೆ ಹಂತದ 12.3 ಕಿ.ಮೀ. ಕಾಂಕ್ರಿಟ್ ರಸ್ತೆ ಕಾಮಗಾರಿ 74 ಕೋಟಿ ರೂ. ವೆಚ್ಚದಲ್ಲಿ ಪೂರ್ಣಗೊಂಡ ಕಾಮಗಾರಿಯನ್ನು ಜು.15ಕ್ಕೆ ಉದ್ಘಾಟಿಸಲಾಗಿತ್ತು. ಲಘು ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಆದರೆ ಘನ ವಾಹನಗಳ ಸಂಚಾರಕ್ಕೆ ನಿಷೇಧ ಮುಂದುವರಿದಿತ್ತು.
ಪ್ರಥಮ ಹಂತದ ಕಾಮಗಾರಿ ಹಾಸನದ ಮಾರ್ನಹಳ್ಳಿಯಿಂದ ಕೆಂಪುಹೊಳೆಯವರೆಗೆ 13 ಕಿ.ಮೀ. 2015ರಲ್ಲಿ ಪೂರ್ಣಗೊಂಡಿತ್ತು. ಇದರೊಂದಿಗೆ ಶಿರಾಡಿ ಘಾಟಿಯ 26 ಕಿ.ಮೀ. ದೂರದ ಘಾಟ್ ರಸ್ತೆಯ ಕಾಮಗಾರಿ ಪೂರ್ಣಗೊಂಡು ಜು.15ಕ್ಕೆ ಸಂಚಾರಕ್ಕೆ ಲಘು ವಾಹನಗಳಿಗೆ ಮಾತ್ರ ಮುಕ್ತಗೊಂಡಿತ್ತು. ರಾಷ್ಟ್ರೀಯ ಹೆದ್ದಾರಿ 75ರ ಗುಂಡ್ಯದಿಂದ ಕೆಂಪುಹೊಳೆಯವರೆಗಿನ ಕಾಂಕ್ರಿಟ್ ರಸ್ತೆ ಕಾಮಗಾರಿ 30 ವರ್ಷಕ್ಕೂ ಹೆಚ್ಚು ದೀರ್ಘ ಕಾಲ ಬಾಳಿಕೆ ಬರುವ ಕಾಮಗಾರಿಯಾಗಿದೆ. ಜರ್ಮನ್ ತಂತ್ರಜ್ಞಾನದ 10 ಕೋಟಿ ರೂ. ವೆಚ್ಚದ ಸ್ಲಿಪ್ ಫಾರ್ಮ್ ಫೇವರ್ ಯಂತ್ರದ ಮೂಲಕ ಕಾಂಕ್ರಿಟ್ ಕಾಮಗಾರಿ ನಿರ್ಮಿಸಿರುವುದು ವಿಶೇಷತೆಯಾಗಿದೆ.
45 ಸೆಂಟಿ ಮೀಟರ್ ಎತ್ತರದ ಡಿಎಲ್ಸಿ ಕಾಂಕ್ರಿಟ್ ಅಳವಡಿಕೆಯೊಂದಿಗೆ ಒಟ್ಟು 60 ಸೆಂಟಿ ಮೀಟರ್ ಎತ್ತರದ ಕಾಂಕ್ರಿಟ್ ರಸ್ತೆಯಾಗಿದೆ. ಪ್ರತಿ 25 ಮೀಟರ್ಗಳಿಗೆ ತಲಾ 75 ಅಡ್ಡಕಾಲುವೆ ನಿರ್ಮಿಸಲಾಗಿದೆ. ಅಪಾಯಕಾರಿ ತಿರುವುಗಳನ್ನು ಹೊಂದಿರುವ ಶಿರಾಡಿ ಘಾಟ್ ರಸ್ತೆಯಲ್ಲಿ ಒಟ್ಟು 65 ತಿರುವುಗಳಿವೆ. 3 ಕಡೆ ಹೊಸ ಸೇತುವೆಗಳನ್ನು ನಿರ್ಮಿಸಲಾಗಿದೆ ಎಂದು ಹೆದ್ದಾರಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. 4 ವರ್ಷ ಕಾಲ ಹೆದ್ದಾರಿಯ ನಿರ್ವಹಣೆಯನ್ನು ಗುತ್ತಿಗೆ ಪಡೆದ ಸಂಸ್ಥೆ ಮಾಡಬೇಕಾಗಿದೆ.
ಕೆಂಪು ಹೊಳೆಯಿಂದ ಅಡ್ಡಹೊಳೆ ತನಕ ಹೊಳೆ ಬದಿಯ ತಡೆಗೋಡೆ ನಿರ್ಮಾಣ ಪೂರ್ಣಗೊಂಡಿದೆ. ಇನ್ನೊಂದು ಬದಿಯಲ್ಲಿ ಕಾಮಗಾರಿ ನಡೆಯುತ್ತಿದೆ. ರಸ್ತೆ ಬದಿಗೆ ಮಣ್ಣು ಹಾಕುವ ಕೆಲಸ ನದಿ ಬದಿಗೆ ಪೂರ್ಣಗೊಂಡಿದ್ದು, ಇನ್ನೊಂದು ಬದಿಯಲ್ಲಿ 4 ಕಿ.ಮೀ.ನಷ್ಟು ದೂರ ಬಾಕಿ ಇದೆ. ಶೀಘ್ರವೇ ಮುಗಿಸಲಾಗುವುದು. ಕುಸಿದ ಜಾಗದಲ್ಲಿ, ನದಿ ಬದಿಯಲ್ಲಿ ನೀರಿನ ಒರತೆ ಇದ್ದು, ಮಳೆ ಸಂಪೂರ್ಣ ನಿಲುಗಡೆ ಆಗದೇ ಹಾಗೂ ಹೊಳೆಯಲ್ಲಿ ನೀರಿನ ಹರಿವು ಕಡಿಮೆ ಆಗದೆ ಅದನ್ನು ಪೂರ್ಣಗೊಳಿಸಲು ಅಸಾಧ್ಯ. ಇದೀಗ ಅಲ್ಲಿ ತಗಡಿನ ಶೀಟ್ ಹಾಕಲಾಗಿದ್ದು, ತಾತ್ಕಾಲಿಕವಾಗಿ ರಕ್ಷಣಾ ಕ್ರಮ ಅನುಸರಿಸಲಾಗಿದೆ ಎಂದು ಓಷಿಯನ್ ಕನ್ಸ್ಟ್ರಕ್ಷನ್ ಸಂಸ್ಥೆಯ ನಿರ್ದೇಶಕ ಶರ್ಪುದ್ದೀನ್ ಮಾಹಿತಿ ನೀಡಿದ್ದಾರೆ.