ವೆನ್ಲಾಕ್ ಆಸ್ಪತ್ರೆಯಲ್ಲಿ ಅವ್ಯವಹಾರ ಆರೋಪ: ತನಿಖೆಗಾಗಿ ಎಸ್ಡಿಪಿಐ ಒತ್ತಾಯ
ಮಂಗಳೂರು, ಆ.1: ದ.ಕ.ಜಿಲ್ಲೆ ಸಹಿತ ಆಸುಪಾಸಿನ ನಾಲ್ಕೈದು ಜಿಲ್ಲೆಯ ಬಡರೋಗಿಗಳ ಆಶಾಕಿರಣವಾಗಿರುವ ವೆನ್ಲಾಕ್ ಸರಕಾರಿ ಆಸ್ಪತ್ರೆಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಗಳ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ದ.ಕ.ಜಿಲ್ಲಾ ಎಸ್ಡಿಪಿಐ ಆಗ್ರಹಿಸಿದೆ.
ಮಾಧ್ಯಮ ಹೇಳಿಕೆಯೊಂದನ್ನು ನೀಡಿದ ಪಕ್ಷದ ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ, ವೆನ್ಲಾಕ್ ಆಸ್ಪತ್ರೆಯಲ್ಲಿ ರೋಗಿಗಳಿಗೆ ಬೇಕಾದ ಎಲ್ಲಾ ರೀತಿಯ ಚಿಕಿತ್ಸೆ ಮತ್ತು ಸೌಕರ್ಯಗಳು ಸಿಗಬೇಕಾಗಿದೆ. ಇತ್ತೀಚಿನ ದಿನಗಳಲ್ಲಿ ವೆನ್ಲಾಕ್ ಆಸ್ಪತ್ರೆಯ ಮೇಲೆ ಬಹಳಷ್ಟು ಆರೋಪಗಳು ಕೇಳಿಬರುತ್ತಿದ್ದು, ರೋಗಿಗಳಿಗೆ ನೀಡುವ ಆಹಾರ ಪದಾರ್ಥಗಳ ಬಗ್ಗೆ ಮತ್ತು ಸ್ಕ್ಯಾನಿಂಗ್ ಮತ್ತಿತರ ಯಂತ್ರಗಳ ಲೋಪದೋಷಗಳ ಬಗ್ಗೆ ಹಾಗೂ ಔಷಧಗಳಿಗೆ ಹಣ ತೆಗೆದುಕೊಳ್ಳುವ ಕುರಿತು ಪಕ್ಷದ ಜಿಲ್ಲಾ ಸಮಿತಿಯು ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿತ್ತು. ಆದರೆ, ಈ ಮನವಿಗೆ ಪ್ರತ್ಯುತ್ತರವಾಗಿ ವೆನ್ಲಾಕ್ನ ಅಧೀಕ್ಷಕಿಯು ಆರೋಪಗಳಲ್ಲಿ ಹುರುಳಿಲ್ಲ ಎಂದು ಪ್ರತಿಕ್ರಿಯಿಸಿದ್ದರು. ಇದರ ಬೆನ್ನಿಗೆ ಪ್ರಮುಖ ಮಾಧ್ಯಮಗಳಲ್ಲಿ ವೆನ್ಲಾಕ್ ಆಸ್ಪತ್ರೆಯ ಅಕ್ರಮದ ಬಗ್ಗೆ ಬೆಳಕು ಚೆಲ್ಲಲಾಗಿತ್ತು. ಇದು ಎಸ್ಡಿಪಿಐ ಪಕ್ಷದ ಆರೋಪಕ್ಕೆ ಪುಷ್ಟಿ ನೀಡಿದಂತಾಗಿದೆ. ಎಸ್ಡಿಪಿಐ ಸಲ್ಲಿಸಿದ ಮನವಿಯನ್ನು ಪರಿಶೀಲಿಸದೆ ಏಕಾಎಕಿ ಆರೋಪ ಸುಳ್ಳು ಎಂದು ಹೇಳುವ ಮೂಲಕ ಅಧೀಕ್ಷಕಿ ಕೂಡಾ ಈ ಹಗರಣದಲ್ಲಿ ಶಾಮೀಲಾಗಿರುವ ಬಗ್ಗೆ ಸಂಶಯ ಇದೆ ಎಂದು ತಿಳಿಸಿದ್ದಾರೆ. ಹಾಗಾಗಿ ಜಿಲ್ಲಾಧಿಕಾರಿ ತಕ್ಷಣ ಈ ಬಗ್ಗೆ ಗಮನಹರಿಸಿ ತನಿಖೆಗೆ ಕ್ರಮ ಜರುಗಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.