ಮಾತೃ ವಂದನಾ ಯೋಜನೆಯಡಿ ಗರ್ಭಿಣಿಯರಿಗೆ ನೆರವು: ಶಾಸಕ ವೇದವ್ಯಾಸ ಕಾಮತ್
ಮಂಗಳೂರು, ಆ.1: ಕೇಂದ್ರ ಸರಕಾರವು ಹಲವಾರು ಜನಪರ ಯೋಜನೆಗಳನ್ನು ಜಾರಿಗೊಳಿಸಿದ್ದು, ಇದರಲ್ಲಿ ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆಯಡಿ ವಿವಾಹಿತ ಗರ್ಭಿಣಿ ಮತ್ತು ಬಾಣಂತಿಯರಿಗೆ ಆರು ಸಾವಿರ ರೂ.ವರೆಗೆ ನೆರವು ನೀಡಲಾಗುತ್ತದೆ ಎಂದು ಶಾಸಕ ವೇದವ್ಯಾಸ ಕಾಮತ್ ತಿಳಿಸಿದರು.
ನಗರದ ಕೊಡಿಯಾಲ್ಬೈಲ್ನ ಬಿಜೆಪಿ ಕಚೇರಿಯಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾತೃ ವಂದನಾ ಯೋಜನೆಯು 2017ರ ಜನವರಿ 1ರಿಂದ ಪ್ರಾರಂಭವಾಗಿದೆ. ಪೌಷ್ಠಿಕ ಆಹಾರ, ಲಸಿಕೆ ಮತ್ತು ಆಸ್ಪತ್ರೆಯ ಖರ್ಚು ವೆಚ್ಚ ಭರಿಸಲು ಯೋಜನೆ ಸಹಕಾರಿಯಾಗಿದೆ. 2017ರ ಡಿಸೆಂಬರ್ವರೆಗೆ 51 ಲಕ್ಷ ಮಹಿಳೆಯರು ಯೋಜನೆಯನ್ನು ಸದುಪಯೋಗ ಪಡಿಸಿಕೊಂಡಿದ್ದು, 2.13 ಲಕ್ಷ ಮಹಿಳೆಯರು ನೋಂದಾಯಿಸಿಕೊಂಡಿದ್ದಾರೆ ಎಂದರು.
ಇಂದ್ರಧನುಷ್ ಮಿಷನ್ ಯೋಜನೆಯಡಿ ಎರಡು ವರ್ಷ ಕೆಳಗಿನ ಮಕ್ಕಳು ಮತ್ತು ಬಾಣಂತಿಯರಿಗೆ ತಡೆಗಟ್ಟಬಹುದಾದ ರೋಗಗಳಾದ ಡಿಫ್ತೀರಿಯಾ, ನಾಯುಕೆಮ್ಮು, ಧನುರ್ವಾಯು, ಪೊಲಿಯೊ, ಕ್ಷಯ, ದಡಾರ, ಹೈಪಟೈಟಿಸ್-ಬಿ, ರುಬೆಲ್ಲಾ, ಜಪಾನ್ ಆನೆಕಾಲು ರೋಗ, ರೋಪಾ ವೈರಸ್, ನಿಮೋನಿಯಾಗಳಿಂದ ರಕ್ಷಣ ಪಡೆಯಲು ಮುಂಜಾಗೃತಾ ಕ್ರಮವಾಗಿ ಲಸಿಕೆ ನೀಡಬಹುದಾಗಿದೆ. ಈಗಾಲಗೇ 3.15 ಕೋಟಿ ಮಕ್ಕಳಿಗೆ ಲಸಿಕೆ ಹಾಕಲಾಗಿದೆ ಎಂದರು.
2022ರೊಳಗಾಗಿ ದೇಶದ ಪ್ರತಿಯೊಬ್ಬ ನಾಗರಿಕನೂ ಸ್ವಂತ ಮನೆ ಹೊಂದಿರಬೇಕು ಎನ್ನುವ ಆಶಯದೊಂದಿಗೆ ಪ್ರಧಾನಮಂತ್ರಿ ಆವಾಜ್ ಯೋಜನೆ (ನಗರ-ಗ್ರಾಮೀಣ)ಯನ್ನು ಜಾರಿಗೊಳಿಸಲಾಗಿದೆ. ಸ್ಲಂ ಪ್ರದೇಶಗಳನ್ನು ನಿರ್ಮೂಲನೆ ಮಾಡುವುದು ಪ್ರಥಮ ಆದ್ಯತೆಯಾಗಿದೆ ಎಂದು ತಿಳಿಸಿದರು.
ಸ್ವಚ್ಛ ಭಾರತ ಅಭಿಯಾನ ಯೋಜನೆಯಡಿ ಒಟ್ಟು 26,564 ಸ್ವಚ್ಛ ಭಾರತ ಅಭಿಯಾನಗಳು ನಡೆದಿವೆ. ಭಾರತದ ಪ್ರತಿಯೊಂದು ಗಲ್ಲಿ, ರಸ್ತೆ, ಹಳ್ಳಿ, ನಗರ ಹಾಗೂ ಮೂಲಭೂತ ಸೌಕರ್ಯಗಳನ್ನು ಶುಚಿಯಾಗಿರಿಸುವುದು ಯೋಜನೆಯ ಉದ್ದೇಶವಾಗಿದೆ. ಇದುವರೆಗೆ 7.95 ಕೋಟಿ ಶೌಚಾಲಯಗಳನ್ನು ನಿರ್ಮಿಸ ಲಾಗಿದೆ. ನಾಲ್ಕು ಲಕ್ಷ ಹಳ್ಳಿಗಳು, 419 ಜಿಲ್ಲೆಗಳು, 19 ರಾಜ್ಯಗಳು ಬಯಲು ಶೌಚ ಮುಕ್ತಗೊಂಡಿವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಪ್ರೇಮಾನಂದ, ರವಿಶಂಕರ್ ಮಿಜಾರು, ನಿತಿನ್ಕುಮಾರ್, ಭಾಸ್ಕರ್ಚಂದ್ರ ಶೆಟ್ಟಿ, ರಮೇಶ್ ಕಂಡೆಟ್ಟು, ರವೀಂದ್ರಕುಮಾರ್, ಶ್ರೀನಿವಾಸ್ ಶೇಟ್ ಮತ್ತಿತರರಿದ್ದರು.