ಎಂಆರ್ ಪಿಎಲ್ ಫ್ಯೂಯೆಲ್ ಆಯಿಲ್ ಸೋರಿಕೆ ಆರೋಪ: ಕ್ರಮಕ್ಕೆ ಮುನೀರ್ ಕಾಟಿಪಳ್ಳ ಒತ್ತಾಯ
ಮಂಗಳೂರು, ಆ. 1: ಎಂಆರ್ ಪಿಎಲ್ ನಿಂದ ಎನ್ ಎಂ ಪಿ ಟಿಗೆ ಫ್ಯೂಯೆಲ್ ಆಯಿಲ್ ಸಾಗಿಸುವ ಕೊಳವೆ ಸೆಝ್ ರಸ್ತೆಯಲ್ಲಿರುವ ಅದಾನಿ ಕಂಪೆನಿ ಬಳಿ ಸೋರುತ್ತಿದೆ. ಕಟ್ಟುನಿಟ್ಟಿನ ನಿರಂತರ ತಪಾಸಣೆಯಲ್ಲಿ ಇರಬೇಕಾದ ಈ ಕೊಳವೆ ಮಾರ್ಗದಲ್ಲಿ ತಿಂಗಳುಗಳಿಂದ ಸೋರಿಕೆ ಇತ್ತೆನ್ನಲಾಗಿದ್ದು, ಸುತ್ತಲ ಪ್ರದೇಶದ ಭೂಮಿ ಪೂರ್ಣವಾಗಿ ಕಪ್ಪಾಗಿರುವುದು ಇದನ್ನು ಧೃಢೀಕರಿಸುತ್ತದೆ. ಮಳೆ ಕಡಿಮೆಯಾದ ಕಾರಣ ಮೂರು ದಿನಗಳ ಹಿಂದಷ್ಟೆ ಸೋರಿಕೆಯಾಗುತ್ತಿರುವುದು ಗಮನಕ್ಕೆ ಬಂದಿದೆ. ಆದರೆ ಈವರೆಗೂ ಕಂಪೆನಿಗೆ ಸೋರಿಕೆ ಆಗುತ್ತಿರುವ ಪಾಯಿಂಟ್ ಪತ್ತೆಹಚ್ಚಲು ಸಾಧ್ಯವಾಗಿಲ್ಲ. ಇದು ಪರಿಸರದಲ್ಲಿ ಅಪಾಯಕಾರಿ ಸ್ಥಿತಿ ನಿರ್ಮಾಣಕ್ಕೆ ಕಾರಣವಾಗಿದೆ ಎಂದು ಮುನೀರ್ ಕಾಟಿಪಳ್ಳ ತಿಳಿಸಿದರು.
ಈಗ ಸೋರಿಕೆಯಾಗಿರುವ ಕೊಳವೆಗೆ ತಾಗಿಕೊಂಡು ಕಚ್ಚಾತೈಲ ಸಾಗಿಸುವ ಬೃಹತ್ ಕೊಳವೆಗಳನ್ನೂ ಅಳವಡಿಸಲಾಗಿದ್ದು, ಬೆಂಕಿ ಹೊತ್ತಿಕೊಂಡಿದ್ದಲ್ಲಿ ಊಹಾತೀತ ದುರಂತಕ್ಕೆ ಮಂಗಳೂರು ಸಾಕ್ಷಿಯಾಗುತ್ತಿತ್ತು. ನಿರಂತರ ಸೋರಿಕೆಯಿಂದಾಗಿ ಅಪಾಯಕಾರಿ ಪೆಟ್ರೋಕೆಮಿಕಲ್ ನೆಲದ ಅಡಿಭಾಗದಲ್ಲಿ ಇಂಗಿದ್ದು, ಅಂತರ್ಜಲಕ್ಕೆ ಸೇರ್ಪಡೆಯಾಗಿರುತ್ತದೆ. ಈ ಕೊಳವೆ ಮಾರ್ಗ ಪಲ್ಗುಣಿ ನದಿಯ ದಂಡೆಯಲ್ಲಿ ಸಾಗಿರುವುದರಿಂದ ಸೋರಿಕೆ ನದಿ ನೀರನ್ನು ಸೇರಿರುವ ಅಪಾಯ ಕಾಣಿಸುತ್ತಿದೆ ಎಂದರು.
ಎಂಆರ್ ಪಿಎಲ್ ಬೇಜವಾಬ್ದಾರಿತನ ಈ ಸೋರಿಕೆಯಿಂದ ಮತ್ತೊಮ್ಮೆ ಬಯಲಾಗಿದೆ. ಇಂತಹ ಹಲವು ಸೋರಿಕೆಗಳ ಸತತವಾಗಿ ಸುತ್ತಮುತ್ತ ನಡೆಯಿತ್ತಿದ್ದು ಕಂಪೆನಿ ಎಲ್ಲವನ್ನೂ "ಮಾಲಿನ್ಯ ನಿಯಂತ್ರಣ ಮಂಡಳಿಯ" ಸಹಕಾರದಿಂದ ಮುಚ್ಚಿಹಾಕುತ್ತಿದೆ. ಈಗಿನ ಸೋರಿಕೆ ಬಹಿರಂಗಗೊಂಡು ಮೂರು ದಿನಗಳಾದರೂ ಸೋರಿಕೆಯ ಪಾಯಿಂಟ್ ಗುರುತಿಸಲು ಕಂಪೆನಿಗೆ ಸಾಧ್ಯವಾಗದಿರುವುದು ಕಂಪೆನಿಯ ಬೇಜವಾಬ್ದಾರಿತನ, ಕಂಪೆನಿಯ ಸುತ್ತಲಿನ ಗ್ರಾಮಗಳು ಎದುರಿಸುತ್ತಿರುವ ಅಪಾಯವನ್ನು ಈ ಸೋರಿಕೆ ತೆರೆದಿಟ್ಟಿದೆ ಎಂದರು.
ಲಕ್ಷಾಂತರ ಕೋಟಿ ಬಂಡವಾಳದ ಕಂಪೆನಿ ಭದ್ರತೆಗೆ, ಪರಿಸರ ಮಾಲಿನ್ಯ ನಿಯಂತ್ರಣಕ್ಕೆ ವೆಚ್ಚ ಮಾಡಲು ಹಿಂಜರಿಯುವುದು, ಬೇಜವಾಬ್ದಾರಿತನ ಮೆರೆಯುವುದು ಇನ್ನಾದರು ತಪ್ಪಬೇಕು. ಈ ಕುರಿತ ಜಿಲ್ಲಾಡಳಿತ ಕಂಪೆನಿ ವಿರುದ್ಧ ಗಂಭೀರ ಕ್ರಮ ಕೈಗೊಳ್ಳಬೇಕು ಎಂದು ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಹೇಳಿಕೆಯಲ್ಲಿ ತಿಳಿಸಿದ್ದಾರೆ.