ಕಾವು: ಪೆಸೆಂಜರ್ ಟೆಂಪೊ-ಲಾರಿ ಢಿಕ್ಕಿ; 12 ಮಂದಿಗೆ ಗಾಯ
ಪುತ್ತೂರು, ಆ. 1: ಪೆಸೆಂಜರ್ ಟೆಂಪೊ ಮತ್ತು ಅಡುಗೆ ಅನಿಲ ಹೊತ್ತೊಯ್ಯುತ್ತಿದ್ದ ಲಾರಿ ನಡುವೆ ಮಾಣಿ ಮೈಸೂರು ರಾಜ್ಯ ಹೆದ್ದಾರಿಯ ಕಾವು ಬಸ್ ತಂಗುದಾಣದ ಬಳಿ ಅಪಘಾತ ನಡೆದಿದ್ದು, ಪ್ರವಾಸಿ ಪೆಸೆಂಜರ್ ಟಂಪೊದಲ್ಲಿದ್ದ ಚಾಲಕ ಸಹಿತ ಮಂಗಳೂರು ಜೊಯ್ಸಾ ಸಾಫ್ಟ್ ಡ್ರಿಂಗ್ಸ್ನ ಕುಲಾಯಿ ಮತ್ತು ಅಡ್ಯಾರ್ ಸಂಸ್ಥೆಯ 12 ಮಂದಿ ಗಾಯಗೊಂಡಿದ್ದಾರೆ.
ಸುರತ್ಕಲ್ ಸಮೀಪದ ಕುಲಾಯಿ ಮತ್ತು ಮಂಗಳೂರು ಸಮೀಪದ ಅಡ್ಯಾರ್ ಜೊಯ್ಸಾ ಸಾಫ್ಟ್ ಡ್ರಿಂಗ್ಸ್ನ ಸಂಸ್ಥೆಯ ಸಿಬ್ಬಂದಿ ಸೇರಿಕೊಂಡು ಪೆಸೆಂಜರ್ ಟೆಂಪೊವೊಂದರಲ್ಲಿ ನಾಲ್ಕು ದಿನದ ತಮಿಳುನಾಡು, ಆಂಧ್ರಪ್ರದೇಶ, ಕನ್ಯಾಕುಮಾರಿ ಪ್ರವಾಸ ಮುಗಿಸಿ ಹಿಂದಿರುಗುವ ವೇಳೆ ಈ ಅಪಘಾತ ಸಂಭವಿಸಿದೆ.
ಅವರು ಸುಳ್ಯ ಪುತ್ತೂರು ರಸ್ತೆಯಾಗಿ ಮಂಗಳೂರಿಗೆ ಹೋಗುವ ವೇಳೆ ಕಾವು ಸಮೀಪ ವಿರುದ್ಧ ಧಿಕ್ಕಿನಿಂದ ಬರುತ್ತಿದ್ದ ಅನಿಲ ಅಡುಗೆ ಹೇರಿಕೊಂಡಿದ್ದ ಭಾರತ್ ಗ್ಯಾಸ್ನ ಲಾರಿಗೆ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಪೆಸೆಂಜರ್ ಟೆಂಪೊದಲ್ಲಿದ್ದ 6 ಮಂದಿ ಮಹಿಳೆಯರು ಮತ್ತು 6 ಮಂದಿ ಪುರಷರು ಗಾಯಗೊಂಡಿದ್ದು, ಈ ಪೈಕಿ 10 ಮಂದಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸುರತ್ಕಲ್ ಇಳಂತಬೆಟ್ಟು ನಿವಾಸಿ ಸುಂದರ ಪೂಜಾರಿ ಅವರ ಪತ್ನಿ ನಾಗಮ್ಮ (65ವ), ಅವರ ಪುತ್ರ ಅಶೋಕ್ (42ವ), ಹೊಸಮನೆ ಶಂಬೂರು ನಿವಾಸಿ ಲೋಕನಾಥ ಅವರ ಪುತ್ರ ದೀಪಕ್ (29ವ), ಸುರತ್ಕಲ್ ಕೃಷ್ಣಾಪುರ ನಿವಾಸಿ ಸುರೇಶ್ ಎಂಬವರ ಪತ್ನಿ ಜ್ಯೋತಿ(36ವ), ಮಂಗಳೂರು ವಿದ್ಯಾನಗರ ನಿವಾಸಿ ರಾಮಯ್ಯ ಅವರ ಪತ್ನಿ ಲೀಲಾ(52ವ), ಬೆಳಗಾಂನ ಶಿವಾನಂದ ಅವರ ಪುತ್ರ ಸಿದ್ಧು(25ವ), ಬಂಟ್ವಾಮಂಗಳೂರು ಕುಲಾಯಿ ನಿವಾಸಿ ವಿಜಯ ಅವರ ಪತ್ನಿ ಲೀಲಾವತಿ(43ವ), ಬೆಳ್ತಂಗಡಿ ಬಳಂಜ ನಿವಾಸಿ ಜಿನ್ನಪ್ಪ ದೇವಾಡಿಗ ಅವರ ಪುತ್ರ ಯೋಗೀಶ್(32ವ), ಮಂಗಳೂರು ಲೋಕನಾಥ್ ಅವರ ಪತ್ನಿ ಅಕ್ಷಯ(23ವ) ಮತ್ತು ಕನ್ಯಾಮಂಗಲ ನಿವಾಸಿ ವೀರಪ್ಪ ಪೂಜಾರಿಯವರ ಪುತ್ರ ಅಪಘಾತ ಎಸಗಿದ ಚಾಲಕ ಸಂತೋಷ್ ಪೂಜಾರಿ(30ವ), ಗಾಯಗೊಂಡಿದ್ದು ಇಲ್ಲಿನ ಆದರ್ಶ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಇನ್ನೋರ್ವ ಚಾಲಕ ಸತೀಶ್ರವರು ಚಿಕಿತ್ಸೆ ಪಡೆದು ತೆರಳಿರುವುದಾಗಿ ತಿಳಿದು ಬಂದಿದೆ.
ಉಳಿದಂತೆ ಸಣ್ಣಪುಟ್ಟ ಗಾಯಗೊಂಡಿದ್ದರು. ಘಟನೆಯಿಂದಾಗಿ ಮಾಣಿ ಮೈಸೂರು ರಾಜ್ಯ ಹೆದ್ದಾರಿ ಕೆಲ ಕ್ಷಣ ಸಂಚಾರಕ್ಕೆ ತೊಂದರೆ ಉಂಟಾಗಿದ್ದರೂ. ಘಟನಾ ಸ್ಥಳಕ್ಕೆ ಸಂಪ್ಯ ಪೊಲೀಸ್ ಠಾಣೆ ಎಸ್.ಐ ಅಬ್ದುಲ್ ಖಾದರ್ ಅವರ ನೇತೃತ್ವದಲ್ಲಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಘಟನೆಗೆ ಸಂಬಂಧಿಸಿ ಲಾರಿ ಚಾಲಕ ಕೊರಗಪ್ಪ ಗೌಡ ನೀಡಿದ ದೂರಿನಂತೆ ಸಂಪ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.