ಕಾಪು: ಹೆದ್ದಾರಿಯಲ್ಲಿ ಎಕ್ಸ್ಪ್ರೆಸ್ ನಿಲುಗಡೆ ಸಾರ್ವಜನಿಕರ ಅಸಮಾಧಾನ
ಕಾಪು, ಆ. 2: ತಾಲ್ಲೂಕು ಕೇಂದ್ರವಾಗಿರುವ ಕಾಪುವಿಗೆ ಸರಿಯಾದ ಎಕ್ಸ್ಪ್ರೆಸ್ ಬಸ್ಸು ತುಂಗುದಾಣಗಳಿಲ್ಲದೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿಯೇ ಬಸ್ಸು ನಿಲುಗಡೆ ಮಾಡಬೇಕಾದ ಅನಿವಾರ್ಯತೆ ಉಂಟಾಗಿದೆ.
ಕಾಪುವಿನಲ್ಲಿ ರಾಷ್ಟ್ರೀಯ ಹೆದ್ದಾರಿ 66ರ ಮೇಲ್ಸೇತುವೆ ಬಳಿ ಮೂರು ತಿಂಗಳಿನಿಂದ ಎಕ್ಸ್ಪ್ರೆಸ್ ಬಸ್ಸು ತಂಗುದಾಣವಾಗಿ ಪರಿವರ್ತನೆಗೊಂಡಿದೆ. ಈ ಹಿಂದೆ ಮಂಗಳೂರಿನಿಂದ ಉಡುಪಿಗೆ ತೆರಳುವ ಎಕ್ಸ್ಪ್ರೆಸ್ ಬಸ್ಸುಗಳು ಸರ್ವೀಸ್ ರಸ್ತೆಯಲ್ಲಿ ಹಾದು ಹೊಸಮಾರಿಗುಡಿ ಎದುರು ನಿಲ್ಲಿಸುತಿದ್ದರು. ಇದೀಗ ಕೆಲ ವೊಂದು ಕಾರಣಗಳ ನೆಪ ಒಡ್ಡಿ ಕಳೆದ ಮೂರು ತಿಂಗಳಿಂದ ರಾಷ್ಟ್ರೀಯ ಹೆದ್ದಾರಿಯ ಮೇಲ್ಸೇತುವೆ ಬಳಿಯೇ ಎಕ್ಸ್ಪ್ರೆಸ್ ಬಸ್ಸುಗಳನ್ನು ನಿಲ್ಲಿಸಲಾ ಗುತ್ತಿದೆ. ಹೆದ್ದಾರಿಯಲ್ಲಿ ವಾಹನಗಳ ಅತೀ ವೇಗದಿಂದ ಸಂಚರಿಸುವುದರಿಂದ ಇದು ಅಪಾಯಕಾರಿಯಾಗಿದೆ. ಈ ಕೂಡಲೇ ಪುರಸಭೆ ಎಚ್ಚೆತ್ತುಕೊಳ್ಳಬೇಕಿದೆ ಎಂಬುವುದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಕಾಪು ತಾಲ್ಲೂಕು ಕಚೇರಿ, ಪುರಸಭಾ ಕಚೇರಿ, ಪ್ರವಾಸಿ ತಾಣಗಳಿಗೆ ಬರುವ ಪ್ರವಾಸಿಗರು, ಕಾಪುವಿನಿಂದ ಉಡುಪಿಗೆ ತೆರಳುವವರು ಇದರಿಂದ ಸಮಸ್ಯೆ ಎದುರಿಸುತಿದ್ದಾರೆ. ಹಿರಿಯರು, ಶಾಲಾ ವಿದ್ಯಾರ್ಥಿಗಳು ಸರಿಯಾದ ತಂಗುದಾಣವಿಲ್ಲದೆ ಮಳೆಗಾಲದಲ್ಲಿ ಆಶ್ರಯಕ್ಕೆ ಸೂಕ್ತ ಸ್ಥಳಾವಕಾಶದ ಕೊರತೆಯೂ ಇದೆ. ಈಗಿರುವ ತಂಗುದಾಣವು ಕಾಪು ಪೇಟೆಯಿಂದ 1 ಕಿಮೀ ದೂರದಲ್ಲಿ ಇರುವುದರಿಂದ ರಿಕ್ಷಾದಲ್ಲಿ ತೆರಳಬೇಕಾಗುತ್ತದೆ. ಕಾಪು ಸುತ್ತಮುತ್ತಲು ಹಲವಾರು ಗ್ರಾಮೀಣ ಪ್ರದೇಶಗಳಿವೆ. ಈ ಭಾಗದ ಜನರು ಕಾಪುವಿನಿಂದಲೇ ಎಕ್ಸ್ಪ್ರೆಸ್ ಬಸ್ಸಿಗಾಗಿ ಬರಬೇಕಾಗಿದೆ.
ಮಂಗಳೂರು ಹಾಗೂ ಉಡುಪಿಯಲ್ಲಿ ನೂರಾರು ಸಂಖ್ಯೆಯಲ್ಲಿ ಕಾಪುವಿನ ಯುವತಿಯರು-ಮಹಿಳೆಯರು ವಿದ್ಯಾಭ್ಯಾಸ, ಕೆಲಸ ನಿರ್ವಹಿಸುತಿದ್ದಾರೆ. ಜನರಿಗೆ ನಿಲ್ಲಲು ಸರಿಯಾದ ವ್ಯವಸ್ಥೆ ಇಲ್ಲದೆ ಹೆದ್ದಾರಿಯಲ್ಲಿಯೇ ನಿಲ್ಲಬೇಕಾಗುತ್ತದೆ. ರಾತ್ರಿ ವೇಳೆ ಸಮಯದಲ್ಲಿ ಈ ಪರಿಸರದಲ್ಲಿ ಕತ್ತಲು ಆವರಿಸುವುದರಿಂದ ಕಾಪು ವಿನಲ್ಲಿ ಇಳಿಯುವ ಹಾಗೂ ಕಾಪುವಿನಿಂದ ಇತರ ಕಡೆಗೆ ಹೋಗುವ ಮಹಿಳೆಯರಿಗೆ ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ಅನ್ವರ್ ಅಲಿ ಕಾಪು.
ಸ್ಥಳಾವಕಾಶದ ಕೊರತೆ ಇದೆ: ಕಾಪುವಿನಲ್ಲಿ ಈಗ ಸ್ಥಳಾವಕಾಶದ ಕೊರತೆ ಇದೆ. ಆರಂಭದಲ್ಲಿಯೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಎಕ್ಸ್ಪ್ರೆಸ್ ತುಂಗುದಾಣಕ್ಕಾಗಿ ಜಾಗ ಕಾಯ್ದಿರಿಸಬೇಕಿತ್ತು. ಆದರೆ ಈಗ ಸರಿಯಾದ ಜಾಗ ಇಲ್ಲದೆ ಸಮಸ್ಯೆ ಆಗಿದೆ. ಈಗಿರುವ ತಾತ್ಕಾಲಿಕ ತಂಗುದಾಣ ಅಪಾಯಕಾರಿಯಾಗಿದ್ದು, ಜನರಿಗೆ ಸಮಸ್ಯೆ ಆಗಿದೆ. ಪೂರ್ವ ಮತ್ತು ಪಶ್ಚಿಮ ಭಾಗದಲ್ಲಿ ತುಂಗುದಾಣಕ್ಕೆ ಸ್ಥಳಾವಕಾಶವಿದೆ. ಆದರೆ ವಾಣಿಜ್ಯ ಸಂಕೀರ್ಣಗಳು ಇರುವುದರಿಂದ ಸಮಸ್ಯೆ ಆಗಿದೆ. ಪುರಸಭೆಗೆ ಸ್ಥಳಾವಕಾಶ ದೊರಕಿದಲ್ಲಿ ಬಸ್ಸು ತಂಗುದಾಣ ನಿರ್ಮಿಸಿ ನಿರ್ವಹಣೆ ಮಾಡಲು ಪುರಸಭೆ ಬದ್ಧವಾಗಿದೆ.
-ರಾಯಪ್ಪ, ಕಾಪು ಪುರಸಭಾ ಮುಖ್ಯಾಧಿಕಾರಿ