ತೈಲ ಸೋರಿಕೆಯ ಎಮ್ಆರ್ ಪಿಎಲ್ ಸ್ಪಷ್ಟೀಕರಣ ಸುಳ್ಳಿನ ಕಂತೆ: ಮುನೀರ್ ಕಾಟಿಪಳ್ಳ
ಮಂಗಳೂರು, ಆ. 2: ಫ್ಯೂಯೆಲ್ ಆಯಿಲ್ ಸಾಗಿಸುವ ಕೊಳವೆಯಲ್ಲಿ ಉಂಟಾಗಿರುವ ಸೋರಿಕೆಯ ಕುರಿತು ಎಮ್ಆರ್ ಪಿಎಲ್ ಮಾಧ್ಯಮಗಳಿಗೆ ಬಿಡುಗಡೆ ಮಾಡಿರುವ ಹೇಳಿಕೆ ಸುಳ್ಳಿನ ಕಂತೆ. ಕೊಳವೆಯು ಬಹುದಿನಗಳಿಂದ ಸೋರಿಕೆಯಾಗುತ್ತಿರುವುದು ಮೇಲ್ನೋಟಕ್ಕೆ ಗೋಚರಿಸುತ್ತಿದ್ದರೂ, ಕಂಪೆನಿಯು "ಸೋರಿಕೆ ಆಗಿಲ್ಲ, ಕೊಳವೆ ಸಾಗಿರುವ ಸ್ಥಳದಲ್ಲಿ ಸ್ಥಳೀಯರು ತ್ಯಾಜ್ಯ ವಸ್ತುಗಳನ್ನು ರಾಶಿ ಹಾಕಿದ್ದರ ಪರಿಣಾಮ ಒತ್ತಡದಿಂದಾಗಿ ಸ್ಥಳದಲ್ಲಿ ತೈಲ ಪದರಗಳು ಕಂಡುಬಂದಿದೆ" ಎಂದು ಹೇಳಿಕೆಯಲ್ಲಿ ಕಂಪೆನಿ ತಿಳಿಸಿರುವುದು ಬೇಜವಾಬ್ದಾರಿತನದ ಪರಮಾವಧಿ ಎಂದು ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಆರೋಪಿಸಿದ್ದಾರೆ.
ಅಪಾಯಕಾರಿ ತೈಲವನ್ನು ಸಾಗಿಸುವ ಕೊಳವೆಗಳ ಸುರಕ್ಷತೆಯಲ್ಲಿನ ವೈಫಲ್ಯಗಳನ್ನು ಗುರುತಿಸಿ, ತಪ್ಪುಗಳನ್ನು ಸರಿಪಡಿಸುವ ಬದಲಿಗೆ ಎಮ್ಆರ್ ಪಿಎಲ್ ತಪ್ಪೇ ನಡೆದಿಲ್ಲ ಎಂದು ಸುಳ್ಳು ಹೇಳಿಕೆಗಳ ಮೂಲಕ ಎಲ್ಲರನ್ನೂಮೂರ್ಖರನ್ನಾಗಿಸಲು ಹೊರಟಿದ್ದಾರೆ. ತಿಂಗಳುಗಳ ಕಾಲದ ಸೋರಿಕೆ ಕಂಪೆನಿಯ ಗಮನಕ್ಕೆ ಬಂದು ನಾಲ್ಕು ದಿನಗಳವರೆಗೂ ಕಂಪೆನಿ ಸೋರಿಕೆಯ ವಿಷಯವನ್ನು ಸ್ಥಳೀಯ ಪಂಚಾಯತ್, ಜಿಲ್ಲಾಡಳಿತ, ಮಾಲಿನ್ಯ ನಿಯಂತ್ರಣಮಂಡಳಿಯ ಗಮನಕ್ಕೆ ತಾರದೆ ಗೌಪ್ಯವಾಗಿಟ್ಟಿತ್ತು. ಮಾಧ್ಯಮಗಳ ವರದಿಯ ನಂತರವಷ್ಟೇ ಸಂಬಂಧ ಪಟ್ಟ ಆಡಳಿತಗಳಿಗೆ ವಿಷಯ ತಿಳಿದಿದೆ. ಇದು ಅತ್ಯಂತ ಗಂಭೀರವಾದ ಲೋಪವಾಗಿದ್ದು, ಅನಾಹುತಗಳೇನಾದರು ಸಂಭವಿಸಿದ್ದರೆ ಜಿಲ್ಲಾಡಳಿತ ಅಸಹಾಯಕವಾಗುವ ಸ್ಥಿತಿ ನಿರ್ಮಾಣವಾಗುತ್ತಿತ್ತು. ಐದು ದಿನಗಳ ತಪಾಸಣೆಯ ನಂತರವೂ ಕಂಪೆನಿಗೆ ಸೋರಿಕೆಯ ಪಾಯಿಂಟ್ ಪತ್ತೆಯಾಗದಿರುವುದು ಕಂಪೆನಿ ತಾಂತ್ರಿಕವಾಗಿ ಹಿಂದುಳಿದಿರುವುದನ್ನು ಸಾಬೀತುಪಡಿಸುತ್ತದೆ ಎಂದರು.
ಇಂತಹ ಬೇಜವಾಬ್ದಾರಿತನ ಮುಂದಿನ ದಿನಗಳಲ್ಲಿ ಮಂಗಳೂರಿಗೆ ಬಹುದೊಡ್ಡ ಅಪಾಯವನ್ನು ತಂದೊಡ್ಡಬಹುದು. ಮಾಲಿನ್ಯ ನಿಯಂತ್ರಣ ಮಂಡಳಿ ಈ ಬಾರಿಯಾದರೂ ಮಾಲಿನ್ಯದ ಪ್ರಮಾಣ, ಸೋರಿಕೆಯ ಕಾರಣಗಳನ್ನು ಪತ್ತೆಹಚ್ಚಿ ಕಂಪೆನಿಯ ಮೇಲೆ ಕ್ರಮ ಕೈಗೊಳ್ಳಬೇಕು. ಜಿಲ್ಲಾಡಳಿತವನ್ನು ಕತ್ತಲಲ್ಲಿಟ್ಟು ತಪ್ಪು ಮಾಹಿತಿಗಳನ್ನು ಸಾರ್ವಜನಿಕವಾಗಿ ಪ್ರಕಟಿಸಿದ್ದಕ್ಕಾಗಿ ಕಂಪೆನಿಯ ವಿರುಧ್ದ ಕಠಿಣ ಕ್ರಮಗಳನ್ನು ಜರುಗಿಸಬೇಕು ಹಾಗೂ ಕಂಪೆನಿಯು ನಿಯಮ ಉಲ್ಲಂಘಿಸುವ ಕುರಿತು ಪ್ರತ್ಯೇಕ ತನಿಖೆ ನಡೆಸಬೇಕು ಎಂದು ಮುನೀರ್ ಕಾಟಿಪಳ್ಳ ಒತ್ತಾಯಿಸಿದ್ದಾರೆ.