ಬಂಟ್ವಾಳ ಪುರಸಭೆ: ಈ ಅವಧಿಯ ಕೊನೆಯ ಸಾಮಾನ್ಯ ಸಭೆ
ಬಂಟ್ವಾಳ, ಆ. 2: ಲೆಕ್ಕಪತ್ರಗಳ ಗೊಂದಲ, ಪಾರ್ಕಿಂಗ್ ಅವ್ಯವಸ್ಥೆ, ತ್ಯಾಜ್ಯ ವಿಲೇವಾರಿ, ಪಾರ್ಕ್ ನಿರ್ವಹಣೆಗಳ ಸಮಸ್ಯೆಗಳು ಇನ್ನೂ ಹಾಗೇ ಉಳಿದಿರುವಂತೆಯೇ ಆರೋಪ-ಪ್ರತ್ಯಾರೋಪ, ದೂಷಣೆಗಳು, ಗದ್ದಲದ ನಡುವೆ ಬಂಟ್ವಾಳ ಪುರಸಭೆಯ ಈ ಅವಧಿಯ ಕೊನೆಯ ಸಾಮಾನ್ಯ ಸಭೆ ಗುರುವಾರ ಮುಕ್ತಾಯಗೊಂಡಿತು.
ಸಭೆ ನಡೆಯುತ್ತಿರುವ ಸಂದರ್ಭ ಪುರಸಭೆ ಚುನಾವಣೆ ಘೋಷಣೆ ಪ್ರಕಟಗೊಂಡಿರುವ ಹಿನ್ನೆಲೆಯಲ್ಲಿ ಮುಂದಿನ ಚುನಾವಣ ತಯಾರಿ ಕುರಿತು ಸದಸ್ಯರು ತಲೆಕೆಡಿಸಿಕೊಂಡದ್ದು ಬಿಟ್ಟರೆ, ಮಹತ್ವದ ನಿರ್ಣಯಗಳೇನೂ ಇಲ್ಲದೆ ಸಭೆ ಕೊನೆಗೊಂಡಿತು.
ಅಧ್ಯಕ್ಷ ಪಿ.ರಾಮಕೃಷ್ಣ ಆಳ್ವ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ್ದ ಟ್ರಾಫಿಕ್ ಎಸ್ಸೈ ಯಲ್ಲಪ್ಪ ಅವರೆದುರು ಪಾರ್ಕಿಂಗ್ ಸಮಸ್ಯೆಯ ಕುರಿತು ಸದಸ್ಯರು ಕಳವಳ ವ್ಯಕ್ತಪಡಿಸಿದರು. ಈ ಸಂದರ್ಭ ಎಸ್ಸೈಮಾತನಾಡಿ, ಪುರಸಭೆ ವತಿಯಿಂದ ನೋ ಪಾರ್ಕಿಂಗ್ ಅನ್ನು ಕಟ್ಟುನಿಟ್ಟಾಗಿ ಅಳವಡಿಸಬೇಕಾದ ಕುರಿತು ವಿವರಿಸಿದರು. ವಾಹನ ಅಪಘಾತಕ್ಕೆ ಸಂಬಂಧಿಸಿ ಜುಲೈ ತಿಂಗಳಲ್ಲಿ ಬಂಟ್ವಾಳ ಟ್ರಾಫಿಕ್ ಠಾಣಾ ವ್ಯಾಪ್ತಿಯಲ್ಲಿ 12 ಪ್ರಕರಣಗಳು ನಡೆದಿವೆ. ಹೀಗಾಗಿ ಸುರಕ್ಷಿತ ಚಾಲನೆ ಕುರಿತು ಎಚ್ಚರ ಮೂಡಿಸುವ ಸಲುವಾಗಿ ತಪಾಸಣೆ ನಡೆಸುತ್ತೇವೆ ಎಂದ ಅವರು, ಬಿ.ಸಿ.ರೋಡ್, ಬಡ್ಡಕಟ್ಟೆಯಲ್ಲಿ ಪಾರ್ಕಿಂಗ್ಗೆ ಸೂಕ್ತ ಜಾಗ ಗುರುತಿಸುವ ಅಗತ್ಯವಿದೆ ಎಂದರು.
ಟೋಲ್ ಗೇಟ್ ಸರ್ವೀಸ್ ರಸ್ತೆಯಲ್ಲಿ ವಾಹನಗಳನ್ನು ಅಡ್ಡಗಟ್ಟಲು ಪೊಲೀಸ್ ಸಿಬ್ಬಂದಿಯನ್ನು ಬಳಕೆ ಮಾಡಲಾಗುತ್ತದೆ ಎಂದು ಹೇಳಿದ ಸದಸ್ಯ ದೇವದಾಸ ಶೆಟ್ಟಿ, ಬಿ.ಸಿ.ರೋಡಿನ ರಸ್ತೆ ಸಮಸ್ಯೆ ಕುರಿತು ಹೆದ್ದಾರಿ ಪ್ರಾಧಿಕಾರಕ್ಕೆ ಈಗಾಗಲೇ ದೂರು ಸಲ್ಲಿಸಲಾಗಿದೆ ಎಂದು ಗಮನ ಸೆಳೆದರು. ಸದಸ್ಯರಾದ ಜಗದೀಶ ಕುಂದರ್, ಸದಾಶಿವ ಬಂಗೇರ, ಮುಹಮ್ಮದ್ ಶರೀಫ್ ಮೊದಲಾದವರು ಟ್ರಾಫಿಕ್ ಸಮಸ್ಯೆಗಳ ಗಮನ ಸೆಳೆದರು. ಈ ಸಂದರ್ಭ ಮಾತನಾಡಿದ ರೇಖಾ ಜೆ. ಶೆಟ್ಟಿ, ಬಿ.ಸಿ.ರೋಡ್ನಲ್ಲಿ ಎಲ್ಲಿ ಪಾರ್ಕಿಂಗ್ ಸರ್ವೆಯನ್ನು ನಡೆಸಲಾಗುವುದು ಎಂದರು.
56 ಲಕ್ಷ ರೂ. ಲೆಕ್ಕ ಕೊಡಿ
ಪುರಸಭೆಯಲ್ಲಿ ಲೆಕ್ಕಪತ್ರ ವಿಚಾರದಲ್ಲಿ ಲೆಕ್ಕಾಧಿಕಾರಿಯನ್ನು ವಜಾ ಮಾಡಲಾಗಿದೆ. ಆದರೆ 56 ಲಕ್ಷ ರೂ. ಎಲ್ಲಿಗೆ ಹೋಯಿತು ಎಂಬ ಉತ್ತರ ಇಲ್ಲ. ಇದಕ್ಕೆ ಮುಖ್ಯಾಧಿಕಾರಿಯೂ ಹೊಣೆಗಾರರಾಗುತ್ತಾರೆ ಎಂದು ಬಿಜೆಪಿ ಸದಸ್ಯರಾದ ದೇವದಾಸ ಶೆಟ್ಟಿ ಮತ್ತು ಗೋವಿಂದ ಪ್ರಭು ಆಪಾದಿಸಿದರು. ತಪ್ಪು ಮಾಡಿದವರಿಗೆ ಶಿಕ್ಷೆ ಆಗುತ್ತದೆ ಎಂದು ಬುಡಾ ಅಧ್ಯಕ್ಷ ಸದಾಶಿವ ಬಂಗೇರ ಹೇಳಿದರೆ, ಯಾರ ಹಸ್ತಕ್ಷೇಪ ಲೆಕ್ಕಪತ್ರವಿಚಾರದಲ್ಲಿ ಆಗಿದೆ ಉತ್ತರ ಕೊಡಿ ಎಂದು ಗೋವಿಂದಪ್ರಭು ಪಟ್ಟು ಹಿಡಿದರು.
ಬಸ್ ನಿಲ್ದಾಣದ ಜಾಹೀರಾತು ಫಲಕಗಳು ಅತಿ ಕಡಿಮೆ ದರದಲ್ಲಿ ಕೊಡಲಾಗಿರುವ ವಿಚಾರ, ತ್ಯಾಜ್ಯ ಸಂಗ್ರಹಣೆಯ ಟಿಪ್ಪರ್ ದುರಸ್ತಿಗಳ ಬಿಲ್ ಪಾವತಿ, ಬಿ.ಸಿ.ರೋಡ್ ಪಾರ್ಕ್ನ ನಿರ್ವಹಣೆ ವಿಚಾರಗಳು ಸಭೆಯಲ್ಲಿ ಚರ್ಚೆಗೆ ಬಂದವು. ಉಪಾಧ್ಯಕ್ಷ ಮುಹಮ್ಮದ್ ನಂದರಬೆಟ್ಟು, ಸ್ಥಾಯಿ ಸಮಿತಿ ಅಧ್ಯಕ್ಷ ವಾಸು ಪೂಜಾರಿ, ಬುಡಾ ಅಧ್ಯಕ್ಷ ಸದಾಶಿವ ಬಂಗೇರ, ಸದಸ್ಯರಾದ ಮುಹಮ್ಮದ್ ಇಕ್ಬಾಲ್, ಮುನೀಶ್ ಅಲಿ, ಮುಮ್ತಾಝ್ ಲತೀಫ್, ಯಾಸ್ಮೀನ್, ಸುಗುಣ ಕಿಣಿ, ಬಿ.ಮೋಹನ್, ಬಿ.ಪ್ರವೀಣ್, ಗಂಗಾಧರ್, ಮುಹಮ್ಮದ್ ಶರೀಫ್, ವಸಂತಿ ಚಂದಪ್ಪ, ಚಂಚಲಾಕ್ಷಿ, ಭಾಸ್ಕರ ಟೈಲರ್, ಜಗದೀಶ ಕುಂದರ್ ವಿವಿಧ ವಿಷಯಗಳ ಕುರಿತು ಮಾತನಾಡಿದರು.
ಟಿಸಿ ಕೌಂಟರ್ ಕೊಠಡಿ ಕೆಡವಿದ ಬಗ್ಗೆ ತನಿಖೆಯಾಗಲಿ
ಬಿ.ಸಿ.ರೋಡ್ ಬಸ್ ನಿಲ್ದಾಣದಲ್ಲಿದ್ದ ಕೆಎಸ್ಸಾರ್ಟಿಸಿ ಟಿಕೆಟ್ ಕೌಂಟರ್ ಕೊಠಡಿಯನ್ನು ರಾತ್ರೋರಾತ್ರಿ ಸಾರ್ವಜನಿಕರು ಸೇರಿ ಭಾಗಶಃ ಕೆಡವಿದ್ದಾರೆ. ಉಳಿದಂತೆ ಸಂಪೂರ್ಣ ತೆರವಿಗೆ ಸಭೆ ತೀರ್ಮಾನಿಸಿದ ಸಂದರ್ಭ ಆಕ್ಷೇಪಿಸಿದ ದೇವದಾಸ ಶೆಟ್ಟಿ, ಅದನ್ನು ಯಾರು ಕೆಡಹಿದ್ದಾರೆ ಎಂಬ ತನಿಖೆ ನಡೆಸಬೇಕು ಎಂದರು.
ಈ ಸಂದರ್ಭ ಬುಡಾ ಅಧ್ಯಕ್ಷ ಸದಾಶಿವ ಬಂಗೇರ, ದೇವದಾಸ ಶೆಟ್ಟಿ ಮತ್ತು ಗೋವಿಂದ ಪ್ರಭು ಮಧ್ಯೆ ಏರಿದ ಧ್ವನಿಯಲ್ಲಿ ಮಾತಿನ ಚಕಮಕಿ ನಡೆಯಿತು. ಬಾಯಿಮುಚ್ಚಿ, ಎದ್ದು ಹೋಗಿ, ನಿಮ್ಮ ಬಗ್ಗೆ ಗೊತ್ತುಂಟು ಎಂಬ ಪದಪ್ರಯೋಗಗಳು ಯಥೇಚ್ಛವಾಗಿ ಬಳಕೆಯಾದವು. ಭಾರೀ ಗದ್ದಲದ ನಡುವೆ ಈ ಪ್ರಕರಣ ಅಲ್ಲಿಗೆ ಮುಕ್ತಾಯಗೊಂಡಿತು.