ಆ. 4: ಲಯನ್ಸ್ ಪದಗ್ರಹಣ ಸಮಾರಂಭ
ಮಂಗಳೂರು, ಆ.2: ಲಯನ್ಸ್ ಜಿಲ್ಲಾ ಸಂಪುಟ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ‘ಸಮರ್ಪಣ’ವು ಅಡ್ಯಾರ್ನ ಅಡ್ಯಾರ್ ಗಾರ್ಡನ್ನ ವಿ.ಕೆ.ಶೆಟ್ಟಿ ಸಭಾಂಗಣದಲ್ಲಿ ಆ.4ರಂದು ಮಧ್ಯಾಹ್ನ 3 ಗಂಟೆಗೆ ನಡೆಯಲಿದೆ.
ನಗರದ ಖಾಸಗಿ ಹೊಟೇಲ್ವೊಂದರಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಲಯನ್ಸ್ ಜಿಲ್ಲಾ ರಾಜ್ಯಪಾಲ ದೇವದಾಸ್ ಭಂಡಾರಿ, ಸಮಾರಂಭದ ಮುಖ್ಯಅತಿಥಿಯಾಗಿ ಪೂರ್ವ ರಾಜ್ಯಪಾಲ ಡಾ.ಶಾಂತಾರಾಮ್ ಶೆಟ್ಟಿ ಭಾಗವಹಿಸಿ ಪ್ರದಗ್ರಹಣವನ್ನು ನೆರವೇರಿಸಲಿದ್ದಾರೆ. ಗೌರವ ಅತಿಥಿಯಾಗಿ ನಗರಾಭಿವೃದ್ಧಿ ಮತ್ತು ವಸತಿ ಸಚಿವ ಯು.ಟಿ.ಖಾದರ್ ಪಾಲ್ಗೊಳ್ಳಲಿದ್ದಾರೆ ಎಂದರು.
ಲಯನ್ಸ್ ಜಿಲ್ಲಾ ಪ್ರಥಮ ಮಹಿಳೆ ಸುಖಲತಾ ಭಂಡಾರಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಪ್ರಥಮ ಉಪರಾಜ್ಯಪಾಲ ರೊನಾಲ್ಡ್ ಗೋಮ್ಸ್ ಜಿಲ್ಲಾ ಡೈರೆಕ್ಟರಿಯನ್ನು ಬಿಡುಗಡೆಗೊಳಿಸಲಿದ್ದಾರೆ. ದ್ವೀತಿಯ ಉಪರಾಜ್ಯಪಾಲ ಡಾ.ಗೀತ್ಪ್ರಕಾಶ್, ಶಶಿಧರ್ ಮಾರ್ಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
2008-19ನೇ ಸಾಲಿನಲ್ಲಿ ಲಯನ್ಸ್ ರಾಜ್ಯಪಾಲ ದೇವದಾಸ್ ಭಂಡಾರಿ ‘ಡೆಡಿಕೇಟ್’ ಎಂಬ ಧ್ಯೇಯವಾಕ್ಯದೊಂದಿಗೆ ಸುಮಾರು 20 ಕೊಟಿ ರೂ. ಸೇವಾ ಯೋಜನೆಗಳನ್ನು ಹಮ್ಮಿಕೊಂಡಿದ್ದು, ಅದರಲ್ಲಿ ಮುಖ್ಯವಾಗಿ ಸಕ್ಕರೆ ಕಾಯಿಲೆಗಳ ಬಗ್ಗೆ ಜಾಗೃತಿ ಮೂಡಿಸುವುದು, ಸ್ವಚ್ಛತಾ ಅಭಿಯಾನದೊಂದಿಗೆ ಪರಿಸರ ಸಂರಕ್ಷಣೆ, ಮಾದಕ ದ್ರವ್ಯ ಬಗ್ಗೆ ಮಾಹಿತಿ, ಲಯನ್ಸ್ ಸೇವಾ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿ ಸೇವಾ ಕಾರ್ಯಗಳಿಗೆ ಸ್ಪಂದಿಸುವ ಕಾರ್ಯಗಳನ್ನು ಹಾಕಿಕೊಳ್ಳಲಿದೆ ಎಂದರು.
ಅಂಗವೈಫಲ್ಯ ಅಥವಾ ವಿಶೇಷ ಮಕ್ಕಳ ಆರೈಕೆ, ಪಾಳುಬಿದ್ದ ಕೃಷಿಗೆ ಪೂರಕವಾದ ಪ್ರದೇಶವನ್ನು ಅಭಿವೃದ್ಧಿಪಡಿಸಿ ಕೃಷಿ ಮಾಡುವಂತೆ ಪ್ರೇರೇಪಿಸುವುದು, ವಾಹನ ಚಾಲನೆ ಮತ್ತು ರಸ್ತೆ ಸುರಕ್ಷತೆಯ ಬಗ್ಗೆ ಅರಿವು ಮೂಡಿಸುವುದು ಹಗೂ ಮಹಿಳಾ ಸಬಲೀಕರಣಕ್ಕೆ ಪೂರಕವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು, ಸೂರಿಲ್ಲದವರಿಗೆ ಸೂರು ಒದಗಿಸುವ ನಿಟ್ಟಿನಲ್ಲಿ ಬಡತನ ರೇಖೆಗಿಂತ ಕೆಳಗಿರುವ ಮನೆ ಇಲ್ಲದಿರುವ ಕುಟುಂಬದವರನ್ನು ಗುರುತಿಸಿ ಅವರಿಗೆ ಮನೆ ಕಟ್ಟಿ ಕೊಡಲಾಗುವುದು ಎಂದು ತಿಳಿಸಿದರು.
ಲಯನ್ಸ್ನ ನಾಲ್ಕು ಕಂದಾಯ ಜಿಲ್ಲೆಯಲ್ಲಿ ಶೌಚಾಲಯ ಇಲ್ಲದ ಕುಟುಂಬವನ್ನು ಗುರುತಿಸಿ ಅವರಿಗೆ ಶೌಚಾಲಯವನ್ನು ಜಿಲ್ಲೆಯ ಲಯನ್ಸ್ ಕ್ಲಬ್ಗಳ ಮೂಲಕ ನಿರ್ಮಿಸುವುದಕ್ಕೆ ಪ್ರೋತ್ಸಾಹ ನೀಡುವುದು ಸೇರಿದಂತೆ ಹಲವು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಅಮೆರಿಕದ ಲಾಸ್ವೇಗಾಸ್ನಲ್ಲಿ ಜು.3ರಂದು ನಡೆದ ಅಂತರ್ರಾಷ್ಟ್ರೀಯ ಲಯನ್ಸ್ ಸಮ್ಮೇಳನದಲ್ಲಿ ದೇವದಾಸ್ ಭಂಡಾರಿ ಜಿಲ್ಲಾ ರಾಜ್ಯಪಾಲರಾಗಿ ಪ್ರತಿಜ್ಞಾವಿಧಿ ಸ್ವೀಕರಿಸಿದರು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಲಯನ್ಸ್ ಜಿಲ್ಲಾ ಪ್ರಥಮ ಉಪರಾಜ್ಯಪಾಲ ರೊನಾಲ್ಡ್ ಗೋಮ್ಸ್, ದ್ವಿತೀಯ ಉಪರಾಜ್ಯಪಾಲ ಡಾ.ಗೀತ್ಪ್ರಕಾಶ್, ಜಿಲ್ಲಾ ಸಂಪುಟ ಕಾರ್ಯದರ್ಶಿ ಬಾಲಕೃಷ್ಣ ಹೆಗ್ಡೆ, ಖಜಾಂಚಿ ಶ್ರೀನಾಥ್ ಕೊಂಡೆ, ಪ್ರದಗ್ರಹಣ ಕಾರ್ಯಕ್ರಮದ ಕಾರ್ಯಾಧ್ಯಕ್ಷ ಶಶಿಧರ್ ಮಾರ್ಲ, ಸಾರ್ವಜನಿಕ ಸಂಪರ್ಕಾಧಿಕಾರಿ ಚಂದ್ರಹಾಸ ಶೆಟ್ಟಿ, ಡಾ.ನವೀನ್ ಶೆಟ್ಟಿ, ಮೈನಾ ಕೊಂಡೆ, ರಾಮು, ಸೌಮ್ಯಾಶೆಟ್ಟಿ, ಸ್ವರೂಪಾ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.