ಸಿಗದ ಸುಳಿವು: ಪೊಲೀಸರಿಗೆ ಸವಾಲಾದ ಪ್ರಕರಣ !
ಪಶ್ಚಿಮ ಬಂಗಾಳದ ಯುವಕ ನಾಪತ್ತೆ ಪ್ರಕರಣ
ಮಂಗಳೂರು, ಆ. 2: ಕೂಳೂರು ಬಳಿಯಿಂದ ನಾಪತ್ತೆಯಾಗಿರುವುದಾಗಿ ಹೇಳಲಾಗಿರುವ ಪಶ್ಚಿಮ ಬಂಗಾಲದ ಯುವಕನ ಕುರಿತಂತೆ ಪೊಲೀಸರಿಗೆ ಇದುವರೆಗೆ ಯಾವುದೇ ಸುಳಿವು ದೊರಕಿಲ್ಲ. ಬದಲಿಗೆ ಪೊಲೀಸರಿಗೆ ಈ ಪ್ರಕರಣ ಸವಾಲಾಗಿ ಪರಿಣಮಿಸಿದೆ.
ಬಿಕಾಂ ಪದವಿ ಮುಗಿಸಿರುವ ಅಭಿಜಿತ್ ಡೇ ಮಣಿಪಾಲದಲ್ಲಿ ಎಂಕಾಂ ಓದಲೆಂದು ಜುಲೈ 25ರಂದು ಮಂಗಳೂರಿಗೆ ಆಗಮಿಸಿದ್ದ. ಎರಡು ದಿನಗಳ ಬಳಿಕ ಅಂದರೆ ಜುಲೈ 27ರಂದು ಆತನ ಅವಳಿ ಸಹೋದರ ಹಾಗೂ ತಂದೆ ದೇಬ್ ಕುಮಾರ್ ಡೇ ವಿಮಾನದ ಮೂಲಕ ಮಂಗಳೂರಿಗೆ ಆಗಮಿಸಿದ್ದರು.
ವಿಮಾನ ನಿಲ್ದಾಣದಲ್ಲಿ ತಂದೆ ಹಾಗೂ ಸಹೋದರನ್ನು ಬರಮಾಡಿಕೊಂಡು ಮಣಿಪಾಲಕ್ಕೆ ತೆರಳುವುದಾಗಿ ಬಜ್ಪೆ ವಿಮಾನ ನಿಲ್ದಾಣದಿಂದ ಟ್ಯಾಕ್ಸಿ ಮೂಲಕ ಸಂಜೆ 4.20ಕ್ಕೆ ಮಣಿಪಾಲಕ್ಕೆ ಹೋಗುತ್ತಿದ್ದರು. ಕೂಳೂರಿನಲ್ಲಿ ಕಾಫಿ ಕುಡಿಯಲು ಟ್ಯಾಕ್ಸಿ ನಿಲ್ಲಿಸಿದ್ದರು. ಕಾಫಿ ಕುಡಿದು ಹೊಟೇಲ್ನಿಂದ ಅಭಿಜಿತ್ ಮೊದಲು ಹೊರಬಂದಾತ ಬಳಿಕ ನಾಪತ್ತೆಯಾಗಿದ್ದ. ಪರಿಸರದಲ್ಲಿ ಆತನನ್ನು ಹುಡುಕಾಟ ನಡೆಸಿ ಸಿಗದ ಹಿನ್ನೆಲೆಯಲ್ಲಿ ಕಾವೂರು ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು.
ಕಳೆದ ರವಿವಾರದಿಂದ ಅಭಿಜಿತ್ ಡೇ ಬಳಸುತ್ತಿದ್ದ ಮೊಬೈಲ್, ಇಂಟರ್ರ್ನೆಟ್, ಎಂಟಿಎಂ ಕಾರ್ಡ್ಗಳೂ ಸ್ಥಗಿತಗೊಂಡಿವೆ. ಸಿಸಿ ಕ್ಯಾಮರಾಗಳನ್ನು ಪರಿಶೀಲಿಸಲಾಗಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.ಈ ನಡುವೆ ಆತ 25ರಂದು ಮಂಗಳೂರಿಗೆ ಬಂದು ಮಣಿಪಾಲಕ್ಕೆ ಕಾಲೇಜು ಪ್ರವೇಶಕ್ಕಾಗಿ ಹೋಗಿರುವ ಕುರಿತಂತೆ ಕಾಲೇಜಿನಲ್ಲಿಯೂ ಪೊಲೀಸರು ಪರಿಶೀಲಿಸಿದ್ದಾರೆ.
ಆದರೆ ಕಾಲೇಜಿನಲ್ಲಿ ಆತ ಹೋಗಿರುವ ಬಗ್ಗೆ ಯಾವುದೇ ದಾಖಲೆಗಳು ಕೂಡಾ ಲಭ್ಯವಾಗಿಲ್ಲ.ಅಪಹರಣ ನಡೆದಿರಬಹುದೇ?ಯುವಕನ ಮನೆಯವರು ಹೇಳುತ್ತಿರುವಂತೆಯೇ ಉನ್ನತ ಶಿಕ್ಷಣದ ಉದ್ದೇಶದಿಂದ ಅಭಿಜಿತ್ ಮಂಗಳೂರಿಗೆ ಆಗಮಿಸಿದ್ದು, ಆತನನ್ನು ಅಪಹರಣ ಮಾಡಿರುವ ಸಾಧ್ಯತೆಗಳ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆದರೆ ಅಪಹರಣ ಯಾವ ಉದ್ದೇಶಕ್ಕಾಗಿ ನಡೆದಿರಬಹುದು ಎಂಬ ಪ್ರಶ್ನೆಯೂ ಉದ್ಭವಿಸಿದೆ.
ಕೂಳೂರು ಜಂಕ್ಷನ್ನಲ್ಲಿ ಇರುವ ಸಿಸಿ ಕ್ಯಾಮರಾ ಪರಿಶೀಲನೆ ನಡೆಸಿದ್ದು, ಅಭಿಜಿತ್ನ ಚಲನ ವಲನ ಸೆರೆಯಾಗಿದೆ. ಆದರೆ ಆತ ಯಾವ ವಾಹನ ಹತ್ತಿ ಎಲ್ಲಿಗೆ ಹೋಗಿದ್ದಾನೆ ಎಂಬುದು ಮಾತ್ರ ಇನ್ನೂ ಸ್ಪಷ್ಟವಾಗಿಲ್ಲ. ಮೊಬೈಲ್ ಸ್ವಿಚ್ ಆಫ್ ಆಗಿದೆ. ಎಟಿಎಂನಿಂದ ಹಣ ಡ್ರಾ ಆಗಿಲ್ಲ. ಆತನ ಕೈಯ್ಯಲ್ಲಿದ್ದ ಲ್ಯಾಪ್ಟಾಪ್ ಭಾನುವಾರ ಮಧ್ಯಾಹ್ನ ಲಾಗ್ಇನ್ ಆಗಿರುವುದು ಪೊಲೀಸರ ಗಮನಕ್ಕೆ ಬಂದಿದೆ. ಮಣಿಪಾಲದಲ್ಲೂ ಪೊಲೀಸರು ಹುಡುಕಾಟ ನಡೆಸಿದ್ದಾರಾದರೂ ಯಾವುದೇ ಕುರುಹು ಪತ್ತೆಯಾಗಿಲ್ಲ.
ತಂದೆ ದೇವ್ಕುಮಾರ್ ಹಾಗೂ ಸಹೋದರ ಮಂಗಳೂರಿನಲ್ಲಿದ್ದು, ಪೊಲೀಸರಿಗೆ ಸಹಕಾರ ನೀಡುತ್ತಿದ್ದಾರೆ.ದೇವಕುಮಾರ್ ಡೇ ಅವರ ಅವಳಿ ಜವಳಿ ಮಕ್ಕಳಲ್ಲಿ ಅಭಿಜಿತ್ ಡೇ ಓರ್ವನಾಗಿದ್ದು, ಈತ ಎರಡು ದಿನ ಮೊದಲು ಮಂಗಳೂರಿಗೆ ಬಂದು ಬಳಿಕ ತಂದೆ ಹಾಗೂ ಸಹೋದರನನ್ನು ಕರೆಸಿದ್ದಾನೆ.
ಈ ಸಂದರ್ಭ ಆತ ಯಾರನ್ನು ಭೇಟಿಯಾಗಿದ್ದಾನೆ, ಎಲ್ಲಿ ಹೋಗಿದ್ದಾನೆ, ಎಲ್ಲಿ ವಾಸ್ತವ್ಯದಲ್ಲಿದ್ದ ಎಂಬ ಬಗ್ಗೆಯೂ ಮಾಹಿತಿ ಲಭ್ಯವಾಗಿಲ್ಲ.ಪೊಲೀಸರಿಗೆ ಇದೊಂದು ಸವಾಲಿನ ಪ್ರಕರಣವಾಗಿದ್ದು, ಹಲವು ಆಯಾಮಗಳಲ್ಲಿ ತನಿಖೆ ಮುಂದುವರಿದಿದೆ.