ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಪೂಜಾ ಸೇವಾ ವಿವಾದ ಪ್ರಕರಣ: ಬಗೆಹರಿಸಲು ಬಾಳೆಕೋಡಿ ಮಠದ ಸ್ವಾಮೀಜಿ ಆಗ್ರಹ
ಮಂಗಳೂರು, ಆ.1: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆಸಲಾಗುವ ಹಲವು ರೀತಿಯ ಪೂಜಾ ಸೇವೆಗಳನ್ನು ಸುಬ್ರಹ್ಮಣ್ಯ ಮಠದಲ್ಲಿ ನಡೆಸಬಾರದೆಂಬ ವಿರೋಧ ಖಂಡನೀಯ ಎಂದು ಬಾಳೆಕೋಡಿ ಮಠದ ಶಶಿಕಾಂತಮಣಿ ಸ್ವಾಮೀಜಿ ಹೇಳಿದ್ದಾರೆ.
ನಗರದ ಪ್ರೆಸ್ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಕ್ಕೆ ಕ್ಷೇತ್ರದಲ್ಲಿ ನಡೆಸಲಾಗುವ ಆಶ್ಲೇಷಾ ಬಲಿ, ಸರ್ಪಸಂಸ್ಕಾರ, ನಾಗಪ್ರತಿಷ್ಠೆ ಮುಂತಾದ ಸೇವೆಗಳನ್ನು ಸುಬ್ರಹ್ಮಣ್ಯ ಮಠದಲ್ಲಿ ನಡೆಸಬಾರದು ಎಂದು ದೇವಳದ ಆಡಳಿತ ಮಂಡಳಿಯ ಕೆಲವರು ವಿರೋಧಿಸುತ್ತಿದ್ದಾರೆ ಎಂದರು.
ಇದರಿಂದ ಭಕ್ತರ ಭಾವನೆಗಳಲ್ಲಿ ಗೊಂದಲ ಮೂಡಿಸಲಾಗುತ್ತಿದೆ. ಧಾರ್ಮಿಕ ದತ್ತಿ ಇಲಾಖೆ ಆಯುಕ್ತರು ಕೂಡಲೇ ಕ್ರಮ ತೆಗೆದುಕೊಂಡು ಪ್ರಕರಣವನ್ನು ಬಗೆಹರಿಸಬೇಕು ಎಂದು ಆಗ್ರಹಿಸಿದರು.
ಕುಮಾರ ಪರ್ವತದಿಂದ ಕುಮಾರಧಾರಾ ನದಿಯವರೆಗೆ ಇರುವ ಕುಕ್ಕೆ ಸ್ಥಳವು ಪವಿತ್ರ ಭೂಮಿಯೆಂದೇ ಪರಿಗಣಿಸಲಾಗಿದೆ. ಧಾರ್ಮಿಕ ದತ್ತಿ ಇಲಾಖೆಯ ಕಾನೂನುಗಳು ದೇವಸ್ಥಾನದೊಳಗೆ ಅನ್ವಯವಾಗುತ್ತವೆಯೇ ವಿನಃ ದೇವಸ್ಥಾನದ ಹೊರಗಿರುವ ಸುಬ್ರಹ್ಮಣ್ಯ ಮಠದಲ್ಲಿಯೂ ಸೇವೆಗಳನ್ನು ಮಾಡಬಾರದು ಎಂದು ಹೇಳುವುದು ಸರಿಯಲ್ಲ. ಅಲ್ಲದೆ ಪುರಾಣ ಕಾಲದಿಂದಲೂ ಸಂಪುಟೀ ನರಸಿಂಹ ದೇವರು ಸುಬ್ರಹ್ಮಣ್ಯ ದೇವರನ್ನು ಒಂದೇ ಪಲ್ಲಕ್ಕಿಯಲ್ಲಿ ಇರಿಸಿ ಉತ್ಸವ ಮಾಡಲಾಗುತ್ತಿತ್ತು. ಇದೀಗ ಉತ್ಸವ ನಿಂತು ಹೋಗಿದೆ. ಈ ನಡುವೆ, ಸೇವೆಗಳ ಕುರಿತಂತೆ ಗೊಂದಲ ಮೂಡಿಸುವ ಕೆಲಸವನ್ನು ದೇವಸ್ಥಾನದ ಆಡಳಿತ ಮಂಡಳಿ ಮಾಡಬಾರದು ಎಂದು ಹೇಳಿದರು.
ಈ ನಡುವೆ ಕ್ಷೇತ್ರದ ಸ್ವಾಮೀಜಿಯ ಮೇಲೆಯೂ ಆರೋಪ ಮಾಡುವ ಕೆಲಸ ಮಾಡಲಾಗುತ್ತಿದೆ. ಸ್ವಾಮೀಜಿಗಳೇ ಹೊರಗಿನಿಂದ ತಮ್ಮ ಲಾಭಕ್ಕಾಗಿ ಹೋಮ ಹವನ ಮಾಡಿಸುತ್ತಿದ್ದಾರೆ. ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರಾಗಿದ್ದುಕೊಂಡೇ ಇಂತಹ ಆರೋಪ ಮಾಡುವುದಾದರೆ ಅವರು ದತ್ತಿ ಇಲಾಖೆ ಸಮಿತಿಯಲ್ಲಿ ಇರಲು ಅರ್ಹರೇ ಎಂದವರು ಪ್ರಶ್ನಿಸಿದರು.
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ದಲಿತರ ಸೇವೆ ಪ್ರಧಾನವಾದುದು. ದಲಿತರು ಮತ್ತು ದೇವಸ್ಥಾನದ ಸಿಬ್ಬಂದಿ, ಮಠದ ಸ್ವಾಮೀಜಿ ಸಾಮರಸ್ಯದಿಂದ ದೇವರ ಸೇವೆಯನ್ನು ಮಾಡಿಕೊಂಡು ಬರುತ್ತಿದ್ದಾರೆ. ಇದೀಗ ಮಠದಲ್ಲಿ ಸಲ್ಲಿಸುವ ಸೇವೆಯನ್ನು ಅನಧಿಕೃತ ಎಂದು ಹೇಳುವುದರಲ್ಲಿ ಅರ್ಥವಿಲ್ಲ ಎಂದವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಟ್ರಸ್ಟಿಗಳಾದ ಶ್ರೀಧರ್, ಸಚಿನ್ ಕುಮಾರ್, ರೋಶನ್ ಕುಮಾರ್, ಸುಮನ್ ಉಪಸ್ಥಿತರಿದ್ದರು.