ಆ. 5ರಂದು ಓದು ಬಾ ಬರಹ ಭಂಡಾರ ಉದ್ಘಾಟನೆ
ಮಂಗಳೂರು, ಆ.2: ಓದುವವರ ಮತ್ತು ಬರೆಯುವವರ ಸಂಖ್ಯೆಯನ್ನು ಹೆಚ್ಚಿಸುವ ಉದ್ದೇಶದಿಂದ ಸ್ವರೂಪ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ನ್ಯಾಯವಾದಿ ದಿನೇಶ್ ಹೆಗ್ಡೆ ಉಳೆಪಾಡಿಯವರ ಓದು ಬಾ ಬರಹ ಭಂಡಾರಕ್ಕೆ ಆಗಸ್ಟ್ 5ರಂದು ಚಾಲನೆ ದೊರೆಯಲಿದೆ ಎಂದು ಕೇಂದ್ರದ ನಿರ್ದೇಶಕ ಗೋಪಾಡ್ಕರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾಹಿತಿ ನೀಡಿದ ಅವರು, ಇದೇ ವೇಳೆ ಗೋಪಾಡ್ಕರ್ ಸ್ವರೂಪ ಶಿಕ್ಷಣ ಪುಸ್ತಕ ಬಿಡುಗಡೆಯೂ ನಡೆಯಲಿದೆ ಎಂದರು. ಅಂದು ಸಂಜೆ 4.30ಕ್ಕೆ ಬಾಸೆಲ್ ಮಿಶನ್ ರಸ್ತೆಯ ಬಿಇಎಂ ಶಾಲೆಯ ಮುಭಾಗದ ಗೋಪಾಡ್ಕರ್ ಸ್ವರೂಪ ಅಧ್ಯಯನ ಕೇಂದ್ರದಲ್ಲಿ ಉದ್ಗಾಟನೆ ನಡೆಯಲಿದೆ.
ಸಾಂಕೇತಿಕ ಉದ್ಘಾಟನೆ ಬಲಿಕ ಸಮಾರಂಭ ಕೆನರಾ ಹೆಣ್ಣು ಮಕ್ಕಳ ಶಾಲೆಯ ಸಭಾಂಗಣದಲ್ಲಿ ನಡೆಯಲಿದೆ.ಕಾರ್ಯಕ್ರಮದಲ್ಲಿ ಕನ್ನಡ ಸಂಸ್ಕೃತಿ ಇಲಾಖೆ ಸಚಿವೆ ಡಾ. ಜಯಮಾಲಾ, ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್, ಮೇಯರ್ ಭಾಸ್ಕರ್, ಕಸಾಪ ಮಾಜಿ ಅಧ್ಚಕ್ಷ ಹರಿಕೃಷ್ಣ ಪುನರೂರು ಹಾಗೂ ಇತರ ಗಣ್ಯರು ಭಾಗವಹಿಸಲಿದ್ದಾರೆ.
ನಗರ ರಥಬೀದಿಯಲ್ಲಿರುವ ಗೋಪಾಡ್ಕರ್ ಸ್ವರೂಪ ಅಧ್ಯಯನ ಕೇಂದ್ರದಲ್ಲಿ ಓದುಬಾ ಗ್ರಂಥಾಲಯ ಆರಂಭಗೊಳ್ಳಲಿದೆ. ಈ ಕಾರ್ಯಕ್ರಮಕ್ಕೆ ಪೂರಕವಾಗಿ ಈಗಾಗಲೇ ಸುಮ್ಮನೆ ಬರೆ ಎಂಬ ಎರಡು ದಿನಗಳ ಬರಹ ಕಮ್ಮಟವನ್ನೂ ಆಯೋಜಿಸಲಾಗಿತ್ತು. ಸುಮಾರು 130 ಶಿಬಿರಾರ್ಥಿಗಳು ಭಾಗವಹಿಸಿದ್ದರು.
ಓದುಬಾ ಗ್ರಂಥಾಲಯದಲ್ಲಿ ಸಂಗ್ರಹವಾಗುವ ಪುಸ್ತಕಗಳಲ್ಲಿ ಉಳೆಪಾಡಿಯವರ ಸಂಗ್ರಹ ಮತ್ತು ಅವರ ಆತ್ಮೀಯರು, ಸ್ನೇಹಿತರು, ಬರಹಗಾರರು, ದಾನಿಗಳು ನೀಡುವುದಾಗಿದೆ. ಪುಸ್ತಕ ಗ್ರಂಥಾಲಯದಲ್ಲಿ ಉಳಿಯದೆ ಮನೆ ಮನೆ ಹಾಗೂ ವ್ಯಕ್ತಿಯಿಂದ ವ್ಯಕ್ತಿಗೆ ಹೀಗೆ ದೇಶವ್ಯಾಪಿಯಾಗಿ ಸಂಚಾರ ಮಾಡುವಂತಾಗಬೇಕು. ಗ್ರಂಥಾಲಯದ ಜತೆಗೆ ಬರಹ ಭಂಡಾರಕ್ಕೆ ಸ್ವರೂಪದ ವಿದ್ಯಾರ್ಥಿಗಳಿಂದ ನಿತ್ಯ ಬರಹ ಸಂಗ್ರಹಿಸಲಾಗುವುದು ಎಂದು ಅವರು ಹೇಳಿದರು.
ಗೋಷ್ಠಿಯಲ್ಲಿ ನ್ಯಾಯವಾದಿ ದಿನೇಶ್ ಹೆಗ್ಡೆ ಉಳೆಪಾಡಿ, ಸ್ವರೂಪ ಅಧ್ಯಯನ ಕೇಂದ್ರದ ವಿದ್ಯಾರ್ಥಿನಿ ಆದಿ ಸ್ವರೂಪ ಉಪಸ್ಥಿತರಿದ್ದರು.