ಪುತ್ತೂರು: ಹತ್ತನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ
ಪುತ್ತೂರು, ಆ.3: ಪ್ರೌಢಶಾಲಾ ವಿದ್ಯಾರ್ಥಿಯೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಇರ್ದೆ ಗ್ರಾಮದ ದೂಮಡ್ಕಎಂಬಲ್ಲಿ ಇಂದು ಬೆಳಗ್ಗೆ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ಬಾಲಕನನ್ನು ಜೋಗಿಮೂಲೆ ನಿವಾಸಿ ರಮಣ್ ಕುಮಾರ್ (15) ಎಂದು ಗುರುತಿಸಲಾಗಿದೆ. ಈತ ಬೆಟ್ಟಂಪಾಡಿಯ ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ 10ನೇ ತರಗತಿಯ ವಿದ್ಯಾರ್ಥಿಯಾಗಿದ್ದ. ಮೂಲತಃ ಸುಳ್ಯದ ದಿ. ಕೆ.ಸತ್ಯನಾರಾಯಣ ಹಾಗೂ ಸಂಧ್ಯಾಲಕ್ಷ್ಮೀಯ ಪುತ್ರನಾಗಿರುವ ಈತ ಕಳೆದ 2 ವರ್ಷಗಳಿಂದ ತನ್ನ ಮಾವ ದೂಮಡ್ಕ ನಿವಾಸಿ ನರಸಿಂಹ ಪ್ರಸಾದ್ ರವರ ಮನೆಯಿಂದ ಶಾಲೆಗೆ ಹೋಗುತ್ತಿದ್ದ.
ಈತನ ಮೃತದೇಹವು ಇಂದು ಬೆಳಗ್ಗೆ ಮನೆಯ ಕೋಣೆಯಲ್ಲಿ ಫ್ಯಾನ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಘಟನಾ ಸ್ಥಳಕ್ಕೆ ಸಂಪ್ಯ ಠಾಣಾ ಪೊಲೀಸರು ಧಾವಿಸಿದ್ದು, ತನಿಖೆ ಮುಂದುವರಿಸಿದ್ದಾರೆ.
ಶಾಲೆಗೆ ರಜೆ: ವಿದ್ಯಾರ್ಥಿ ಶ್ರೀರಮಣ ಕುಮಾರ್ ನಿಧನ ಪ್ರಯುಕ್ತ ಪ್ರಿಯದರ್ಶಿನಿ ವಿದ್ಯಾಸಂಸ್ಥೆಗೆ ಆ.3 ರಂದು ರಜೆ ಘೋಷಿಸಲಾಗಿದೆ.