ಪಿಂಟೋ ಸಹೋದರರ ವಿರುದ್ಧ ಗೂಂಡಾ ಕಾಯ್ದೆ ಜಾರಿಯಾಗುತ್ತಿದ್ದರೆ ಗುರು ಭಟ್ ಕೊಲೆಯಾಗುತ್ತಿರಲಿಲ್ಲ!
ಉಡುಪಿ, ಆ.3: ಉಡುಪಿಯ ರೌಡಿ ಶೀಟರ್ಗಳಾದ ರಂಜಿತ್ ಪಿಂಟೋ ಹಾಗೂ ಸುಜಿತ್ ಪಿಂಟೋ ಸಹೋದರರ ವಿರುದ್ಧ ಪೊಲೀಸರು ಶಿಫಾರಸ್ಸು ಮಾಡಿದ್ದ ಗೂಂಡಾ ಕಾಯಿದೆ ಜಾರಿಯಾಗಿರುತ್ತಿದ್ದರೆ ಮಣಿಪಾಲ ಇಸ್ಪೀಟ್ ಕ್ಲಬ್ ನ ಗುರುಪ್ರಸಾದ್ ಭಟ್ ಕೊಲೆಯೇ ನಡೆಯುತ್ತಿರಲಿಲ್ಲ.
ಹೀಗೆ ಹೇಳಿದ್ದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ್ ನಿಂಬರ್ಗಿ. ಇಂದು ಎಸ್ಪಿ ಕಚೇರಿಯಲ್ಲಿ ನಡೆದ ಫೋನ್ ಇನ್ ಕಾರ್ಯಕ್ರಮದ ಬಳಿಕ ಗುರುಪ್ರಸಾದ್ ಭಟ್ ಕೊಲೆಗೆ ಸಂಬಂಧಿಸಿ ಮಾಧ್ಯಮದವರ ಪ್ರಶ್ನೆಗಳಿಗೆ ಅವರು ಉತ್ತರ ನೀಡಿದರು.
ರೌಡಿ ಶೀಟರ್ಗಳಾಗಿ ಹಲವು ಪ್ರಕರಣಗಳಲ್ಲಿ ಭಾಗಿಯಾಗಿರುವ ರಂಜಿತ್ ಹಾಗೂ ಸುಜಿತ್ ವಿರುದ್ಧ ಎರಡು ತಿಂಗಳ ಹಿಂದೆ ಗೂಂಡಾ ಕಾಯಿದೆ ಜಾರಿ ಮಾಡುವಂತೆ ಶಿಫಾರಸ್ಸು ಮಾಡಲಾಗಿತ್ತು. ಆದರೆ ಬೆಂಗಳೂರಿನಲ್ಲಿರುವ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಯವರನ್ನೊಳಗೊಂಡ ಸಮಿತಿಯು ಈ ಶಿಫಾರಸ್ಸನ್ನು ತಿರಸ್ಕರಿಸಿತ್ತು ಎಂದು ಎಸ್ಪಿ ತಿಳಿಸಿದರು.
ಗೂಂಡಾ ಕಾಯಿದೆ ಪ್ರಕಾರ ಆರೋಪಿಯನ್ನು ಯಾವುದೇ ಕೋರ್ಟ್ ವಿಚಾರಣೆ ಇಲ್ಲದೆ ಒಂದು ವರ್ಷ ಕಾಲ ಕಾರಾಗೃಹದಲ್ಲಿ ಇರಿಸಿಕೊಳ್ಳಬಹುದು. ಹಾಗೆ ಏನಾದರೂ ಗೂಂಡಾ ಕಾಯಿದೆ ಜಾರಿಯಾಗುತ್ತಿದ್ದರೆ ಈ ಕೊಲೆಯೇ ನಡೆಯುತ್ತಿರಲಿಲ್ಲ. ಆರೋಪಿಗಳು ಜೈಲಿನಲ್ಲಿರುವಾಗ ಗೂಂಡಾ ಕಾಯಿದೆಗೆ ಶಿಫಾರಸ್ಸು ಮಾಡಲು ಆಗುವುದಿಲ್ಲ. ಆದರೆ ಮುಂದೆ ಇವರಿಬ್ಬರ ವಿರುದ್ಧ ಈ ಕಾಯಿದೆ ಜಾರಿಗೊಳಿಸುವಂತೆ ಮತ್ತೆ ಶಿಫಾರಸ್ಸು ಮಾಡಲಾಗುವುದು ಎಂದರು.
ಕೊಲೆಗೆ ಆರೋಪಿಗಳು ಹಾಗೂ ಗುರು ಭಟ್ ನಡುವಿನ ಹಣಕಾಸು ವ್ಯವಹಾರ ಮತ್ತು ತಾಯಿಗೆ ಅವಾಚ್ಯ ಶಬ್ದಗಳಿಂದ ಬೈದಿರುವುದೇ ಕಾರಣ. ಕ್ಲಬ್ಗೆ ನುಗ್ಗಿದ ಆರೋಪಿಗಳ ಪೈಕಿ ರಂಜಿತ್ ಪಿಂಟೋ ತನ್ನ ಕೈಯಲ್ಲಿದ್ದ ಚಾಕುವಿನಿಂದ ಗುರು ಭಟ್ರ ಕೈ ಮತ್ತು ಕತ್ತಿನ ಹಿಂಭಾಗಕ್ಕೆ ಇರಿದು ಕೊಲೆ ಮಾಡಿದ್ದಾನೆ. ಆರೋಪಿಗಳ ಸ್ಪಷ್ಟ ಮುಖ, ಕೊಲೆ ಮಾಡುತ್ತಿರುವುದು ಎಲ್ಲ ಘಟನೆಗಳು ಸಿಸಿ ಟಿವಿಯಲ್ಲಿ ದಾಖಲಾಗಿದ್ದು, ಇದು ಪ್ರಕರಣದ ಪ್ರಬಲ ಸಾಕ್ಷ್ಯವಾಗಿದೆ ಎಂದು ಎಸ್ಪಿ ತಿಳಿಸಿದರು.
ರಕ್ತದ ಕಲೆಗಳ ಬಟ್ಟೆ ನದಿಗೆಸೆದರು!
ಕೊಲೆ ನಡೆಸಿದ ನಂತರ ಆರೋಪಿಗಳು ಕೃತ್ಯಕ್ಕೆ ಬಳಸಿದ ಓಮ್ನಿ ಕಾರಿನಲ್ಲಿ ರಂಜಿತ್ ಪಿಂಟೋನನ್ನು ಕೊಳಲಗಿರಿಯಲ್ಲಿ ಬಿಟ್ಟು ಶಿವಮೊಗ್ಗದತ್ತ ಪರಾರಿ ಯಾಗಲು ಯತ್ನಿಸಿದ್ದರೆನ್ನಲಾಗಿದೆ. ಸಿಸಿ ಕ್ಯಾಮೆರಾದಿಂದ ಒಮ್ನಿ ಕಾರಿನ ನಂಬರ್ ಪತ್ತೆ ಹಚ್ಚಿದ ಪೊಲೀಸರು ಜಿಲ್ಲೆಯ ಎಲ್ಲ ಚೆಕ್ಪೋಸ್ಟ್ಗಳಿಗೆ ಮಾಹಿತಿ ರವಾನಿಸಿದರು. ಅದರಂತೆ ಕಂಡ್ಲೂರು ಚೆಕ್ಪೋಸ್ಟ್ನಲ್ಲಿ ಮೂವರನ್ನು ಪೊಲೀಸರು ಬಂಧಿಸಿದರು. ಈ ಮಧ್ಯೆ ಆರೋಪಿಗಳು ಕೊಲೆ ಮಾಡುವ ಸಂದರ್ಭ ತಾವು ತೊಟ್ಟಿದ ರಕ್ತದ ಕಲೆಗಳಿಂದ ಕೂಡಿದ ಬಟ್ಟೆಗಳನ್ನು ನದಿಗೆ ಎಸೆದಿದ್ದರೆನ್ನಲಾಗಿದೆ. ಆ ಬಟ್ಟೆಗಳು ಈವರೆಗೆ ಪತ್ತೆಯಾಗಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಆ.16ರವರೆಗೆ ನ್ಯಾಯಾಂಗ ಬಂಧನ
ಗುರು ಭಟ್ ಕೊಲೆ ಪ್ರಕರಣದ ನಾಲ್ವರು ಆರೋಪಿಗಳಿಗೆ ಉಡುಪಿ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯವು ಆ.16ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆ.2ರಂದು ಆದೇಶ ನೀಡಿದೆ.
ಜು.29ರಂದು ಬಂಧಿಸಲ್ಪಟ್ಟ ಪ್ರಕರಣದ ಆರೋಪಿಗಳಾದ ರಂಜಿತ್ ಪಿಂಟೋ, ಸುಜಿತ್ ಪಿಂಟೋ, ಪ್ರದೀಪ್ ಪೂಜಾರಿ ಹಾಗೂ ರಾಜೇಶ್ ಪೂಜಾರಿಯನ್ನು ಪೊಲೀಸರು ಮೂರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆದುಕೊಂಡಿದ್ದರು. ಆ.2ರಂದು ಪೊಲೀಸ್ ಕಸ್ಟಡಿ ಅವಧಿ ಮುಗಿದ ಹಿನ್ನೆಲೆಯಲ್ಲಿ ಎಲ್ಲ ಆರೋಪಿಗಳನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಆರೋಪಿಗಳು ಇದೀಗ ಕಾರವಾರ ಕಾರಗೃಹದಲ್ಲಿದ್ದಾರೆ.