ಮಾಜಿ ಶಾಸಕ ಲೋಬೋರಿಂದ ಸರಕಾರಿ ಕಚೇರಿ ದುರುಪಯೋಗ: ಬಿಜೆಪಿ ಆರೋಪ
ಮಂಗಳೂರು, ಆ. 3: ಮಾಜಿ ಶಾಸಕ ಜೆ.ಆರ್.ಲೋಬೊ ಅವರು ತಮ್ಮ ಹಿಂದಿನ ಶಾಸಕರ ಕಚೇರಿಯನ್ನು ಬಳಸಿಕೊಂಡು ಆಡಳಿತ ದುರುಪಯೋಗ ಮಾಡುತ್ತಿದ್ದಾರೆ. ತಕ್ಷಣ ಅವರು ಸರಕಾರಿ ಕಚೇರಿಯನ್ನು ಬಿಟ್ಟುಕೊಡಬೇಕು. ಇಲ್ಲವಾದಲ್ಲಿ ಕಾನೂನು ಹೋರಾಟ ಅನಿವಾರ್ಯವಾದೀತು ಎಂದು ಮಂಗಳೂರು ಮಹಾನಗರ ಪಾಲಿಕೆಯ ವಿಪಕ್ಷ ನಾಯಕ ಪ್ರೇಮಾನಂದ ಶೆಟ್ಟಿ ಎಚ್ಚರಿಸಿದ್ದಾರೆ.
ಶುಕ್ರವಾರ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು ಸರಕಾರಿ ಕಚೇರಿಗಳನ್ನು ನಿಯಮದ ಪ್ರಕಾರ ಹರಾಜು ಪ್ರಕ್ರಿಯೆ ನಡೆಸಿಯೇ ಪಡೆಯಬೇಕು. ಆದರೆ ಇಲ್ಲಿ ಯಾವುದೇ ಹರಾಜು ಪ್ರಕ್ರಿಯೆ ನಡೆದಿಲ್ಲ. ಎಲ್ಲಾ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಸದನದಲ್ಲಿ ಚರ್ಚೆಗೂ ಬಾರದೇ ಏಕಾಏಕಿಯಾಗಿ ಪಾಲಿಕೆ ಆಯುಕ್ತರು ಕಚೇರಿಯನ್ನು ನೀಡಿದ್ದಾದರು ಹೇಗೆ? ಎಂದು ಪ್ರಶ್ನಿಸಿದರು.
ಜು.31ರಂದು ಜರುಗಿದ ತೆರಿಗೆ ನಿರ್ಧರಣೆ, ಹಣಕಾಸು, ಅಪೀಲು ಸ್ಥಾಯಿ ಸಭೆಯಲ್ಲಿ ಮಹಾನಗರ ಪಾಲಿಕೆಯ ಅಧೀನಕ್ಕೆ ಒಳಪಟ್ಟ ಕದ್ರಿ ಮಲ್ಲಿಕಟ್ಟೆ ವಾಣಿಜ್ಯ ಸಂಕೀರ್ಣದ ಈ ಹಿಂದೆ ಮಾಜಿ ಶಾಸಕ ಜೆ.ಆರ್. ಲೋಬೋ ಉಪಯೋಗಿಸುತ್ತಿದ್ದ ಸುಸಜ್ಜಿತವಾದ ಕಚೇರಿಯನ್ನು ಠೇವಣಿ 5,53,000 ರೂ. ಹಾಗೂ 7,237 ರೂ. ಬಾಡಿಗೆಯೊಂದಿಗೆ ಪಡೆದುಕೊಂಡಿದ್ದಾರೆ. ಆದರೆ ಕಾನೂನು ಬಾಹಿರವಾಗಿ ಹರಾಜು ಪ್ರಕ್ರಿಯೆ ನಡೆಸದೆ ಕಚೇರಿಯನ್ನು ಬಳಸಿಕೊಂಡಿರುವುದು ಖಂಡನೀಯ. ಪಾಲಿಕೆಯ ಕಾಂಗ್ರೆಸ್ ಆಡಳಿತದ ಸಹಕಾರದಿಂದಲೇ ಈ ಕೆಲಸ ಆಗಿದೆ ಎಂದು ಪ್ರೇಮಾನಂದ ಶೆಟ್ಟಿ ಆರೋಪಿಸಿದರು.
ಸರಕಾರದ ಮಾರ್ಗ ಸೂಚಿಯನ್ವಯ ಪಾಲಿಕೆಗೆ ಅಧೀನಕ್ಕೊಳಪಟ್ಟ ಯಾವುದೇ ಮಳಿಗೆಯನ್ನು ಸಾರ್ವಜನಿಕ ಹರಾಜು ಪ್ರಕ್ರಿಯೆ ಮೂಲಕವೇ ಹಂಚಿಕೆ ಮಾಡಬೇಕು. ಆದರೆ ಮಾಜಿ ಶಾಸಕರು ತನ್ನ ರಾಜಕೀಯ ಪ್ರಭಾವವನ್ನು ಬಳಸಿ ಗೊತ್ತಿದ್ದೂ ನಿಯಮಾವಳಿಗಳನ್ನು ಗಾಳಿಗೆ ತೂರಿ ಅಧಿಕಾರಿಗಳ ಮೇಲೆ ಒತ್ತಡ ಹೇರಿ ಮಂಜೂರಾತಿಗೊಳಿಸಿದ್ದಾರೆ. ಪ್ರಥಮ ದರ್ಜೆ ಸಹಾಯಕರಿಂದ ಅಧೀೀಕ್ಷಕರಿಗೆ, ಸಹಾಯಕ ಕಂದಾಯಾಧಿಕಾರಿ, ಉಪ ಆಯುಕ್ತರು (ಕಂದಾಯ) ಮುಖೇನ ವರದಿಯ ಆಧಾರದಲ್ಲಿ ಮಂಜೂರಾತಿ ಪಡೆಯಬೇಕಾಗಿದ್ದ ಕಡತವು ಪ್ರಥಮ ದರ್ಜೆಯ ಸಹಾಯಕರಿಂದ ನೇರವಾಗಿ ಆಯುಕ್ತರ ಅನುಮೋದನೆಯನ್ನು ಪಡೆದು ಸಮಿತಿಗೆ ಮಂಡಿಸಿರುವುದು ನಿಯಮಬಾಹಿರವಾಗಿದೆ ಎಂದು ಪ್ರೇಮಾನಂದ ಶೆಟ್ಟಿ ಆರೋಪಿಸಿದರು.
ಈ ಹಿಂದೆ ನಿರ್ದೇಶಕರಾಗಿದ್ದ ಕೆಯುಐಡಿಎ್ಸಿ ಕುಡ್ಸೆಂಪ್ ಕಚೇರಿಯು ಇದೇ ಸಂಕೀರ್ಣದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಬಹುಶಃ ಅದರ ವ್ಯಾಮೋಹದಿಂದಲೇ ತಾನು ಸಾಮಾಜಿಕ ಕಾರ್ಯವನ್ನು ಮಾಡುವ ನೆಪದಲ್ಲಿ ಈ ಹಿಂದಿನ ಕಚೇರಿಯನ್ನು ಮತ್ತೊಮ್ಮೆ ಪಡೆಯಲು ಈ ರೀತಿಯ ವಾಮಮಾರ್ಗವನ್ನು ಬಳಸಿದ್ದಾರೆ. ಕಾಂಗ್ರೆಸ್ ನೇತೃತ್ವದ ಪಾಲಿಕೆ ಆಡಳಿತವು ತನ್ನ ಪಕ್ಷದ ಮುಖಂಡನಿಗಾಗಿ ಪಾಲಿಕೆಗೆ ಸಂಬಂಧಿಸಿದ ಈ ಸುಸಜ್ಜಿತ ಕೋಣೆಯನ್ನು ಕಾನೂನು ಬಾಹಿರವಾಗಿ ನೀಡುವ ಮೂಲಕ ತನ್ನ ಆಡಳಿತವನ್ನು ದುರ್ಬಳಕೆ ಮಾಡಿಕೊಂಡಿರುವುದನ್ನು ಪ್ರತಿಪಕ್ಷವಾದ ಬಿಜೆಪಿ ಖಂಡಿಸುತ್ತದೆ. ಅಲ್ಲದೆ ಸಮಿತಿಯು ಕೈಗೊಂಡಿರುವ ತೀರ್ಮಾನವನ್ನು ತಕ್ಷಣ ಕೈ ಬಿಡಬೇಕು ಎಂದು ಪ್ರೇಮಾನಂದ ಶೆಟ್ಟಿ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಪಾಲಿಕೆ ಸದಸ್ಯರಾದ ಸುಧೀರ್ ಶೆಟ್ಟಿ ಕಣ್ಣೂರು, ರೂಪಾ ಡಿ.ಬಂಗೇರ, ವಿಜಯ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.