ಹೆದ್ದಾರಿ ರಸ್ತೆ ಕಾಮಗಾರಿ, ಟೋಲ್ ಗೇಟ್ ಸಮಸ್ಯೆ ಬಗೆಹರಿಸಲು ಮಾನವಹಕ್ಕು ಆಯೋಗ ಆದೇಶ
ಪಿಯುಸಿಎಲ್ ಘಟಕದ ದೂರಿಗೆ ಸ್ಪಂದನೆ
ಮಂಗಳೂರು, ಜು.3: ತಲಪಾಡಿ ಟೋಲ್ಗೇಟ್ ಹಾಗೂ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಸಮಸ್ಯೆಗಳ ಬಗ್ಗೆ ದಕ್ಷಿಣ ಕನ್ನಡ ಪಿಯುಸಿಎಲ್ ಘಟಕದ ಅಧ್ಯಕ್ಷ ಮುಹಮ್ಮದ್ ಕಬೀರ್ ಅವರು ನೀಡಿದ ದೂರಿಗೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಮಾನವ ಹಕ್ಕು ಆಯೋಗ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮುಖ್ಯ ಅಭಿಯಂತರರಿಗೆ ಸೂಕ್ತ ವರದಿ ನೀಡುವಂತೆ ನೊಟೀಸು ಜಾರಿ ಮಾಡಿದೆ. ಮುಂದಿನ ಆರು ವಾರಗಳ ಒಳಗೆ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಸೂಕ್ತ ಕ್ರಮ ಕೈಗೊಂಡು ವರದಿ ನೀಡುವಂತೆ ಸೂಚಿಸಿದೆ.
ಪಿಯುಸಿಎಲ್ ದೂರು:- ಮಂಗಳೂರಿನ ಗಡಿ ಭಾಗದಲ್ಲಿರುವ ತಲಪಾಡಿ ಎಂಬಲ್ಲಿ ಟೋಲ್ ಗೇಟ್ ನಿರ್ಮಿಸಿದ್ದು,ಇಲ್ಲಿಂದ ಉಡುಪಿಯ ಬಳಿಯ ಸಾಸ್ತನ ದವರೆಗೆ ನೂರು ಕಿಲೋಮೀಟರ್ ವ್ಯಾಪ್ತಿಯಲ್ಲಿ ನಾಲ್ಕು ಟೋಲ್ ಬೂತುಗಳು ವಾಹನ ಸವಾರರಿಂದ ದರೋಡೆ ನಡೆಸುತ್ತಿವೆ. ಈ ಟೋಲ್ಗಳಲ್ಲಿ ವಾಹನಗಳ ಸವಾರರಿಂದ ಬಲವಂತವಾಗಿ ಟೋಲ್ ಸಂಗ್ರಹಿಸುತ್ತಾರೆ. ಟೋಲ್ ನಡೆಸುವವರು ಗೂಂಡಾಗಳಂತೆ ವರ್ತಿಸುತ್ತಾರೆ. ಹೆದ್ದಾರಿಯ ರಸ್ತೆ ಕಾಮಗಾರಿ ಸಂಪೂರ್ಣಗೊಳ್ಳುವ ಮೊದಲೆ ಟೋಲ್ ಗೇಟ್ಗಳಲ್ಲಿ ತೆರಿಗೆ ಸಂಗ್ರಹಿಸಲಾಗುತ್ತಿದೆ. ಹೆದ್ದಾರಿಯಲ್ಲಿ ಕಾಮಗಾರಿ ಪೂರ್ಣಗೊಳ್ಳದೆ ಇರುವ ಕಾರಣ ಅಂಬ್ಯುಲೆನ್ಸ್ ವಾಹನಗಳು ಅಪಘಾತಕ್ಕೀಡಾದವರನ್ನು ಆಸ್ಪತ್ರೆಗೆ ಸಾಗಿಸುವ ಮೊದಲೆ ಸಾಕಷ್ಟು ಜನರು ಜೀವ ಕಳೆದುಕೊಂಡ ಉದಾಹರಣೆಗಳಿವೆ. ಒಂದು ಟೋಲ್ ಗೇಟ್ನಿಂದ ಇನ್ನೊಂದು ಟೋಲ್ ಗೇಟ್ ನಡುವೆ 60 ಕಿ.ಮೀ ಅಂತರವಿರಬೇಕು ಎಂಬ ನಿಯಮವಿದ್ದರೂ 60 ಕಿ.ಮೀ ನಡುವೆ ಮೂರು ಟೋಲ್ಗೇಟ್ಗಳಿವೆ. ಕಳೆದ ಎಂಟರಿಂದ ಒಂಭತ್ತು ವರ್ಷಗಳಿಂದ ಇಲ್ಲಿ ಕಾಮಗಾರಿ ನಡೆಯುತ್ತಿದೆ. ಟೋಲ್ ಗೇಟಿನ ಸಮೀಪದ ಊರಿಗೆಎ 2ರಿಂದ 3 ಕಿಮೀ ಅಂತರದಲ್ಲಿ ಸಂಚರಿಸುವ ಪ್ರತಿ ವಾಹನಗಳ ಪ್ರತಿಟ್ರಿಪ್ಗಳಿಗೂ ಹಣ ವಸೂಲಾತಿ ನಡೆಯುತ್ತಿದೆ. ಹಲವು ಬಾರಿ ವಾಹನ ಸವಾರರ ಮೇಲೆ ದೈಹಿಕ ಹಲ್ಲೆ ನಡೆಸಿದ ಘಟನೆ ಟೋಲ್ನಲ್ಲಿ ನಡೆದಿದೆ. ಪ್ರತಿಬೂತ್ಗಳಲ್ಲಿ 3 ನಿಮಿಷಕ್ಕಿಂತ ಹೆಚ್ಚು ಹೊತ್ತು ವಾಹನ ನಿಲ್ಲಿಸಿದರೆ ಹಣಪಾವತಿಸದೆ ತೆರಳಲು ಅವಕಾಶವಿದೆ ಆದರೆ ಈ ನಿಯಮವೂ ಇಲ್ಲಿ ಪಾಲನೆಯಾಗುತ್ತಿಲ್ಲ. 60 ಕಿ.ಮೀ ಒಳಗಡೆ ಹೆಚ್ಚುವರಿ ಟೋಲ್ ಗೇಟ್ ನಿರ್ಮಿಸದಂತೆ ಮತ್ತು ರಾಷ್ಟ್ರೀಯ ಹೆದ್ದಾರಿ ಮತ್ತು ಮೇಲ್ ಸೇತುವೆ ಕಾಮಗಾರಿ ಪೂರ್ಣಗೊಳ್ಳದೆ ಯಾವೂದೆ ರೀತಿಯ ಸುಂಕ ವಸೂಲಾತಿ ಮಾಡಬಾರದು ಎಂಬ ನಿಯಮ ಇದ್ದರೂ ಸುಂಕ ವಸೂಲು ಮಾಡುತ್ತಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಿರುದ್ಧ ಕ್ರಮ ಕೈ ಗೊಳ್ಳುವಂತೆ ದಕ್ಷಿಣ ಕನ್ನಡ ಪಿಯುಸಿಎಲ್ ಘಟಕ ರಾಜ್ಯ ಮಾನವ ಹಕ್ಕು ಆಯೋಗಕ್ಕೆ ಮನವಿ ಮಾಡಿದೆ.