ಮಂಗಳೂರಿನಲ್ಲಿ ಹೈಟೆಕ್ ಭಿಕ್ಷಾಟನೆ: ಎಚ್ಚರಿಕೆ ನೀಡಿದ ಪೊಲೀಸರು
ಮಂಗಳೂರು, ಆ.3: ನಗರದಲ್ಲಿ ಹೈಟೆಕ್ಆಗಿ ಭಿಕ್ಷಾಟನೆ ನಡೆಸುತ್ತಿದ್ದ ಐದು ಮಂದಿ ಯುವತಿಯರನ್ನು ವಶಕ್ಕೆ ತೆಗೆದುಕೊಂಡ ಪೊಲೀಸರು ಎಚ್ಚರಿಕೆ ನೀಡಿ ಬಿಡುಗಡೆ ಮಾಡಿದ್ದಾರೆ.
ಪ್ಯಾಂಟ್, ಶರ್ಟ್, ಟೈ, ಶೂ ಧರಿಸಿ, ತಿರುಗಾಡುತ್ತಿದ್ದ ರಾಜಸ್ಥಾನದ ಮೂಲದ ರಾಣಿಪುರದ ಯುವತಿಯರು ನಗರದ ಜನತೆಯನ್ನು ವಂಚಿಸುತ್ತಿದ್ದರು ಎನ್ನಲಾಗಿದೆ. ನೆರೆ ಸಂತ್ರಸ್ತರಾಗಿ ಎಲ್ಲವನ್ನೂ ಕಳೆದುಕೊಂಡಿದ್ದೇವೆ ಎಂದು ಹೇಳುತ್ತಾ ಭಿಕ್ಷಾಟನೆ ಮಾಡುತ್ತಿದ್ದ ಅವರ ಕುರಿತು, ಸ್ವಚ್ಛ ಭಾರತ್ ಅಭಿಯಾನದ ಕಾರ್ಯಕರ್ತ ಸೌರಜ್ ಮಂಗಳೂರು ಎಂಬವರು ತಮ್ಮ ಫೇಸ್ಬುಕ್ ಖಾತೆಯಲ್ಲಿ ವೀಡಿಯೊ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಅದರಂತೆ ಕದ್ರಿ ಪೊಲೀಸರು ಅವರನ್ನು ಠಾಣೆಗೆ ಕರೆಸಿ ಎಚ್ಚರಿಕೆ ನೀಡಿ ಬಿಡುಗಡೆಗೊಳಿಸಿದ್ದಾರೆ.
ತಮ್ಮ ಊರಿನಲ್ಲಿ ನೆರೆ ಬಂದಿದ್ದು, ಅಸ್ತಿಪಾಸ್ತಿ ಎಲ್ಲ ಕೊಚ್ಚಿ ಹೋಗಿದೆ. ಆಹಾರ ಬಟ್ಟೆ ಬರೆ ಇಲ್ಲದೆ ಸಂತ್ರಸ್ತರಾಗಿದ್ದೇವೆ ಎಂದು ಪತ್ರವೊಂದನ್ನು ಹಿಡಿದುಕೊಂಡು ಸಾರ್ವಜನಿಕರಿಂದ ಹಣ ಸಂಗ್ರಹಿಸುತ್ತಿದ್ದರು. ಇವರ ಬಗ್ಗೆ ಕನಿಕರ ಪಟ್ಟು ಕೆಲವರು ಹಣ ನೀಡುತ್ತಿದ್ದರು. ಹಣ ಪಡೆದವರಿಂದ ಸಹಿ ಮತ್ತು ಎಷ್ಟು ಮೊತ್ತ ಎಂದು ಬರೆಸಿಕೊಳ್ಳುತ್ತಿದ್ದರು. ಕಡಿಮೆ ಹಣ ಬರೆದವರ ಮೊತ್ತವನ್ನು ಯುವತಿಯರೇ ತಿದ್ದಿ ಹೆಚ್ಚು ಬರೆದು ಇತರರಿಂದ ಹೆಚ್ಚು ವಸೂಲಿ ಮಾಡುತ್ತಿದ್ದರು ಎಂದು ಆರೋಪಿಸಲಾಗಿದೆ.