ಆ.15ರಿಂದ ‘ಹಸಿರು ಕರ್ನಾಟಕ ಅಭಿಯಾನ’ ಚಾಲನೆ: ಪಿ.ಶ್ರೀಧರ್
ಆಕಾಶವಾಣಿಯಲ್ಲಿ ‘ಆಟಿಡೊಂಜಿ ದಿನ-ವನಮಹೋತ್ಸವ’
ಮಂಗಳೂರು, ಆ.3: ಗಿಡ ಮರಗಳಲ್ಲಿ ಜಗತ್ತಿನ ಉಸಿರು ಅಡಕವಾಗಿದೆ. ಪ್ರಕೃತಿಯನ್ನು ಉಳಿಸಿ ಬೆಳೆಸುವ ಹೊಣೆ ಪ್ರತಿಯೊಬ್ಬರ ಮೇಲಿದೆ ಎಂದು ದ.ಕ. ಜಿಲ್ಲಾ ವಲಯ ಅರಣ್ಯ ಅರಣ್ಯಾಧಿಕಾರಿ ಪಿ.ಶ್ರೀಧರ್ ಹೇಳಿದ್ದಾರೆ.
ಮಂಗಳೂರು ಆಕಾಶವಾಣಿಯ ಮನೋರಂಜನಾ ಸಂಘದಿಂದ ಆ.3ರಂದು ನಡೆದ ‘ಆಟಿಡೊಂಜಿ ದಿನ ಮತ್ತು ವನಮಹೋತ್ಸವ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಪ್ರಕೃತಿಯ ಕೊಡುಗೆಯಿಂದ ಜಗತ್ತಿನ ಜೀವರಾಶಿ ಬಾಳ್ವೆ ಮಾಡುತ್ತಿದೆ. ಗಿಡ ಮರ ನೆಟ್ಟು ಹಸಿರಾಗಿಸುವ ಮೂಲಕ ನೀರಿನ ಹೆಚ್ಚಳ, ತಾಪಮಾನ ಕಡಿತ, ಜೀವ ವೈವಿಧ್ಯಗಳ ಸಂರಕ್ಷಣೆ, ಔಷಧಿ ಸಸ್ಯಗಳ ರಕ್ಷಣೆ ಸೇರಿದಂತೆ ಬಹುಸ್ತರಗಳಲ್ಲಿ ಲಾಭದಾಯಕವಾಗುತ್ತದೆ ಎಂದರು.
ಪ್ರಕೃತಿಗೆ ತಮ್ಮ ಕೊಡುಗೆ ಏನು ಎಂಬ ಚಿಂತನೆ ಅಗತ್ಯ. ಗಿಡಮರ ನೆಡುವುದು ಮಾತ್ರವಲ್ಲ ಅದರ ಪಾಲನೆ ಕೂಡ ಮುಖ್ಯವಾಗಿದೆ. ಆ.15ರಿಂದ ಇಡೀ ರಾಜ್ಯದಲ್ಲಿ ‘ಹಸಿರು ಕರ್ನಾಟಕ ಅಭಿಯಾನ’ಕ್ಕೆ ಚಾಲನೆ ನೀಡುವ ಮೂಲಕ ಗಿಡಮರ ನೆಡುವ ಆಂದೋಲನ ಪ್ರತಿಯೊಂದು ಮನೆಯಿಂದಲೂ ಪ್ರಾರಂಭವಾಗಲಿದೆ ಎಂದರು.
ಪರಿಸರವಾದಿ ಮಾಧವ ಉಳ್ಳಾಲ್ ಮಾತನಾಡಿ, ಪ್ರಕೃತಿಯಲ್ಲಿ ಅಳಿಯುತ್ತಿರುವ ಜೀವ ಸಂಕುಲವನ್ನು ಕಾಪಾಡಲು ಅಪೂರ್ವ ಗಿಡ ಮರಗಳನ್ನು ಬೆಳೆಸಿ ಜೀವವೈವಿಧ್ಯ ಉಳಿಸುವ ಪಣ ತೊಡಬೇಕು ಎಂದು ಹೇಳಿದರು.
ಪರಿಸರ ಪ್ರೇಮಿ ಪ್ರೊ.ಜೋಸೆಫ್ ಮಡಂತ್ಯಾರ್, ಆಕಾಶವಾಣಿ ಕಾರ್ಯಕ್ರಮ ಮುಖ್ಯಸ್ಥೆ ಉಷಾಲತಾ ಸರಪಾಡಿ ಮಾತನಾಡಿದರು. ಕಾರ್ಯ ಕ್ರಮದ ಅಧ್ಯಕ್ಷತೆಯನ್ನು ಆಕಾಶವಾಣಿ ಮನೋರಂಜನಾ ಸಂಘದ ಅಧ್ಯಕ್ಷ ಜಿ.ರಮೇಶ್ಚಂದ್ರನ್ ವಹಿಸಿದ್ದರು.
ಸಂಘದ ಸದಸ್ಯರು 25ಕ್ಕೂ ಹೆಚ್ಚು ಅಪೂರ್ವ ಸಸ್ಯ ವೈವಿಧ್ಯದ ಗಿಡಗಳನ್ನು ಆಕಾಶವಾಣಿ ಆವರಣದಲ್ಲಿ ನೆಟ್ಟು ಪ್ರತಿಯೊಂದು ಗಿಡವನ್ನು ಸದಸ್ಯರು ದತ್ತು ಪಡೆದು ಪಾಲನೆಯ ಜವಾಬ್ದಾರಿ ವಹಿಸಿಕೊಂಡರು. ಅರಣ್ಯ ಇಲಾಖೆಯ ಉಪವಲಯ ಅರಣ್ಯಾಧಿಕಾರಿ ವೆಂಕಟೇಶ್ ಭಟ್, ಅರಣ್ಯ ವೀಕ್ಷಕರಾದ ದೇವದಾಸ್, ಸೂರಜ್, ಮನೋರಂಜನಾ ಸಂಘದ ಖಜಾಂಚಿ ಕುಸುಮಾವತಿ ಮತ್ತಿತರಿದ್ದರು.
ಸಂಘದ ಕಾರ್ಯದರ್ಶಿ ಡಾ.ಸದಾನಂದ ಪೆರ್ಲ ಸ್ವಾಗತಿಸಿದರು. ಜೊತೆ ಕಾರ್ಯದರ್ಶಿ ಸೂರ್ಯನಾರಾಯಣ ಭಟ್ ವಂದಿಸಿದರು.