ಮಾಹೆ-ಅಂ.ರಾ.ರೆಡ್ಕ್ರಾಸ್ ಸಮಿತಿ ನಡುವೆ ಒಪ್ಪಂದ
ಮಣಿಪಾಲ, ಆ.3: ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ (ಮಾಹೆ) ಹಾಗೂ ಜಿನೀವಾದ ಅಂತಾರಾಷ್ಟ್ರೀಯ ರೆಡ್ಕ್ರಾಸ್ ಸಮಿತಿಯ ನಡುವೆ ಗುರುವಾರ ತಿಳುವಳಿಕೆ ಪತ್ರಕ್ಕೆ ಸಹಿ ಹಾಕಲಾಯಿತು.
ಒಪ್ಪಂದದಂತೆ ಜ್ಞಾನದ ಕ್ಷೇತ್ರದಲ್ಲಿ ಮಾಹೆ ಹಾಗೂ ರೆಡ್ಕ್ರಾಸ್ ನಡುವೆ ಪರಸ್ಪರ ವಿನಿಮಯಕ್ಕೆ ಅವಕಾಶವಾಗಲಿದೆ. ಮುಂದೆ ಅದು ಬೇರೆ ಬೇರೆ ಕ್ಷೇತ್ರಗಳಿಗೆ ವಿಸ್ತರಣೆಗೊಳ್ಳಲಿದೆ.
ಈ ವರ್ಷ ಐಸಿಆರ್ಸಿ ಉಪಖಂಡದಲ್ಲೇ ಮೊದಲ ಬಾರಿ ಶಸ್ತ್ರಾಸ್ತ್ರಗಳಿಂದ ಆದ ಗಾಯಗಳ ಶಸ್ತ್ರಚಿಕಿತ್ಸೆಯ ಕುರಿತಂತೆ ತನ್ನ ಅನುಭವವನ್ನು ಹಂಚಿ ಕೊಳ್ಳಲಿದೆ. ಇದರಿಂದ ಸ್ನಾತಕೋತ್ತರ ಅಧ್ಯಯನದ ವಿದ್ಯಾರ್ಥಿಗಳಿಗೆ, ಸರ್ಜರಿ ಕ್ಷೇತ್ರದ ಪ್ರಾಧ್ಯಾಪಕರಿಗೆ ಹಾಗೂ ವಿಶೇಷಜ್ಞರಿಗೆ ಅನುಕೂಲವಾಗಲಿದೆ. ಇದರೊಂದಿಗೆ ಜಂಟಿ ಸಮ್ಮೇಳನ, ಸೆಮಿನಾರ್, ಹೊಸ ಅನ್ವೇಷಣೆ ಹಾಗೂ ಮಾನವೀಯ ಫೋರೆನ್ಸಿಕ್ನಲ್ಲೂ ಪರಸ್ಪರ ಸಹಕಾರ ದೊರೆಯಲಿದೆ.
ತಿಳುವಳಿಕೆ ಪತ್ರಕ್ಕೆ ಸಹಿ ಹಾಕುವ ಸಂದರ್ಭದಲ್ಲಿ ಮಾಹೆಯ ಪರವಾಗಿ ಕುಲಪತಿ ಡಾ.ಎಚ್.ವಿನೋದ್ ಭಟ್, ಪ್ರೊ ವೈಸ್ ಚಾನ್ಸಲರ್ ಡಾ.ಪೂರ್ಣಿಮ ಬಾಳಿಗಾ, ರಿಜಿಸ್ಟ್ರಾರ್ ಡಾ.ನಾರಾಯಣ ಸಭಾಹಿತ್, ಕೆಎಂಸಿ ಮಣಿಪಾಲದ ಡೀನ್ ಡಾ.ಪ್ರಗ್ನಾ ರಾವ್, ಕೆಎಂಸಿ ಮಂಗಳೂರಿನ ಡೀನ್ ಡಾ.ಎಂ. ವೆಂಕಟ್ರಾಯ ಪ್ರಭು, ಡಾ.ರಘು ರಾಧಾಕೃಷ್ಣ ಉಪಸ್ಥಿತರಿದ್ದರು.
ಐಸಿಆರ್ಸಿ ಜಿನೀವಾ ಭಾರತೀಯ ನಿಯೋಗದ ಪರವಾಗಿ ಡಿಎಂಸಿ ಡಾ.ಅಂಜುಂ ಸೋನಿ, ಅಶಿಷ್ ಅರೋರಾ, ಸುಶೀಲ್ ಮಾಟೆ ಉಪಸ್ಥಿತರಿದ್ದರು.