ಪುನರ್ವಸತಿ ಕಾರ್ಯಕರ್ತೆಗೆ ಮಾನಸಿಕ ಹಿಂಸೆ ನೀಡಿಲ್ಲ: ಬನ್ನೂರು ಪಂಚಾಯತ್ ಸ್ಪಷ್ಟನೆ
ಪುತ್ತೂರು, ಆ. 4: ಬನ್ನೂರು ಗ್ರಾಮ ಪಂಚಾಯತ್ ಸದಸ್ಯ ರತ್ನಾಕರ ಪ್ರಭು ಅವರು ತನಗೆ ಮಾನಸಿಕ ಹಿಂಸೆ ನೀಡಿದ್ದಾರೆ ಎಂದು ವಿಕಲಚೇತನರ ಪುನರ್ವಸತಿ ಕಾರ್ಯಕರ್ತೆ ನೇಹಾ ರೈ ಅವರು ಉಪವಿಭಾಗಾಧಿಕಾರಿಗಳಿಗೆ ದೂರು ನೀಡಿದ್ದು, ಈ ದೂರಿನಲ್ಲಿ ಸತ್ಯಾಂಶವಿಲ್ಲ, ಅವರಿಗೆ ಯಾವುದೇ ರೀತಿಯಾದ ಮಾನಸಿಕ ಹಿಂಸೆ ನೀಡಿಲ್ಲ ಎಂದು ಪಂಚಾಯತ್ ಆಡಳಿತ ಮಂಡಳಿ ಸ್ಪಷ್ಟ ಪಡಿಸಿದೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಂಚಾಯತ್ ಅಧ್ಯಕ್ಷೆ ರಮಣಿ ಡಿ. ಗಾಣಿಗ, ಉಪಾಧ್ಯಕ್ಷ ಜಿನ್ನಪ್ಪ ಗೌಡ ಮತ್ತು ಸದಸ್ಯ ರತ್ನಾಕರ ಪ್ರಭು ಅವರು ಮಾತನಾಡಿ ವಿಕಲಚೇತನರು ದೇವರಿಗೆ ಸಮಾನವಾಗಿದ್ದು, ಅವರಿಗೆ ನಾವೆಂದೂ ಕೆಟ್ಟದ್ದನ್ನು ಬಯಸುವುದಿಲ್ಲ. ಆದರೆ ನಮ್ಮ ಪಂಚಾಯತ್ ಪುನರ್ವಸತಿ ಕಾರ್ಯಕರ್ತೆಯಾಗಿರುವ ನೇಹಾ ರೈ ಅವರು ಕಚೇರಿಗೆ ಆಗಮಿಸುತ್ತಿಲ್ಲ ಅಲ್ಲದೆ ಪಂಚಾಯತ್ ವ್ಯಾಪ್ತಿಯಲ್ಲಿ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ವಿಕಲಚೇತನರ ಕುಟುಂಬದವರಿಂದ ಗ್ರಾಮಸಭೆಯಲ್ಲಿ ದೂರು ಬಂದಿತ್ತು. ಇದನ್ನು ಪಂಚಾಯತ್ ಸಭೆಯಲ್ಲಿ ಪ್ರಸ್ತಾಪಿಸಿ ನಿರ್ಣಯ ಅಂಗೀಕರಿಸಿ ಅವರನ್ನು ಬಿಡುಗಡೆ ಮಾಡಿ ಪಂಚಾಯತ್ ವ್ಯಾಪ್ತಿಯಲ್ಲಿಯೇ ವಾಸವಿರುವ ಬೇರೆ ವಿಕಲಚೇತನರನ್ನು ಕಾರ್ಯಕರ್ತರಾಗಿ ನೇಮಿಸಿಕೊಳ್ಳುವ ನಿಟ್ಟಿನಲ್ಲಿ ನಿರ್ಣಯ ಕೈಗೊಂಡಿದ್ದೆವು. ಈ ನಿರ್ಣಯದ ಪ್ರತಿಯನ್ನು ತಾಲೂಕು ವಿಕಲಚೇತನರ ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತರಿಗೆ ನೀಡಲಾಗಿತ್ತು. ಇದಕ್ಕಾಗಿ ನಮ್ಮ ವಿರುದ್ಧ ವಿನಾಕಾರಣ ದೂರು ನೀಡಲಾಗಿದೆ ಎಂದ ಅವರು ಪಂಚಾಯತ್ ವ್ಯಾಪ್ತಿಯವರು ಕಾರ್ಯಕರ್ತರಾದರೆ ಸ್ಥಳೀಯ ಅಂಗವಿಕಲರಿಗೆ ಸರಿಯಾದ ಮಾಹಿತಿ ಹಾಗೂ ಸವಲತ್ತು ಮುಟ್ಟಿಸಲು ಸಾಧ್ಯವಾಗುತ್ತದೆ ಎಂಬ ನೆಲೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆಯೇ ಹೊರತು ಇದರಲ್ಲಿ ಯಾವುದೇ ರಾಜಕೀಯ ಅಥವಾ ಪೂರ್ವಾಗ್ರಹವಿಲ್ಲ ಎಂದು ಹೇಳಿದರು.
2017ರ ಮಾರ್ಚ್ ತಿಂಗಳಿನಲ್ಲಿ ನೇಮಕಗೊಂಡಿದ್ದ ಪುನರ್ವಸತಿ ಕಾರ್ಯಕರ್ತೆ ನೇಹಾ ರೈ ಅವರು 2 ಬಾರಿ ಮಾತ್ರ ಪಂಚಾಯತ್ ಕಚೇರಿಗೆ ಆಗಮಿಸಿದ್ದಾರೆ. ಇತರ ಯಾವ ದಿನವೂ ಆಗಮಿಸಿಲ್ಲ. ಕಚೇರಿಗೆ ಅಗಮಿಸದ ಅವರಿಗೆ ನಾವು ಮಾನಸಿಕ ಹಿಂಸೆ ನೀಡಿರುವುದಾದರೂ ಹೇಗೆ ಎಂದು ಪ್ರಶ್ನಿಸಿದ ಅವರು ನಾವು ಮಾನಸಿಕ ಹಿಂಸೆ ಕೊಟ್ಟಿಲ್ಲ ಎಂದು ಯಾವುದೇ ಪುಣ್ಯ ಕ್ಷೇತ್ರದಲ್ಲಿ ಪ್ರಮಾಣಕ್ಕೂ ಸಿದ್ಧವಿದ್ದೇವೆ ಎಂದು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ತಾಲೂಕು ಪಂಚಾಯತ್ ಸದಸ್ಯ ಲಕ್ಷ್ಮಣ್ ಬೆಳ್ಳಿಪ್ಪಾಡಿ, ಬನ್ನೂರು ಗ್ರಾಮ ಪಂಚಾಯತ್ ಸದಸ್ಯ ಅಣ್ಣಿ ಪೂಜಾರಿ ಉಪಸ್ಥಿತರಿದ್ದರು.