ಅಧಿಕಾರಿಗಳು ಶಾಮೀಲಾಗಿ ಮತದಾರರ ಪಟ್ಟಿಯಲ್ಲಿ ಗೊಂದಲ ಸೃಷ್ಟಿಸಿದ್ದಾರೆ: ಮುನೀಶ್ ಅಲಿ
ಬಂಟ್ವಾಳ, ಆ. 4: ಪುರಸಭೆಯ ನಾಮನಿರ್ದೇಶಿತ ಸದಸ್ಯರೊಬ್ಬರ ಲಿಖಿತ ಮನವಿಯ ಆಧಾರದಲ್ಲಿ ಅಧಿಕಾರಿಗಳು ಶಾಮೀಲಾಗಿ ಮತದಾರರ ಪಟ್ಟಿಯಲ್ಲಿ ಅದಲು ಬದಲು ಮಾಡಿ ಗೊಂದಲ ಸೃಷ್ಟಿಸಿರುವ ವಿದ್ಯಾಮಾನ ಬಯಲಿಗೆ ಬಂದಿದೆ. ಪುರಸಭೆಯ ಬಿ.ಮೂಡ ಗ್ರಾಮದ ವಾರ್ಡ್ ಸಂಖ್ಯೆ 20 ಮತ್ತು 21ರಲ್ಲಿ ಕೆಲವು ಮತದಾರರು ಅದಲು ಬದಲಾಗಿರುವುದು ಕಂಡು ಬಂದಿದ್ದು, ಇದರಲ್ಲಿ ಪುರಸಭೆಯ ಅಧಿಕಾರಿಗಳು ಕೂಡ ಶಾಮೀಲಾಗಿದ್ದಾರೆ ಎಂದು ಬಂಟ್ವಾಳ ಪುರಸಭಾ ವ್ಯಾಪ್ತಿಯ ಎಸ್ಡಿಪಿಐ ಸಮಿತಿ ಅಧ್ಯಕ್ಷ ಮುನೀಶ್ ಅಲಿ ಅವರು ಶನಿವಾರ ಕರೆದ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದಾರೆ.
ಬಂಟ್ವಾಳ ಪುರಸಭೆಯ 23 ವಾರ್ಡ್ಗಳನ್ನು ಮರುವಿಂಗಡಿಸಿ, ಈಗ 27 ವಾರ್ಡ್ಗಳನ್ನಾಗಿಸಲಾಗಿದೆ. ಅದಕ್ಕೆ ಸಂಬಂಧಿಸಿದಂತೆ ವಾರ್ಡ್ವಾರು ಮೀಸಲಾತಿ ಮತ್ತು ಕರಡು ಮತದಾರರ ಪಟ್ಟಿಯನ್ನು ಕಳೆದ ಮೇ. 25 ರಂದು ಪ್ರಕಟಿಸಲಾಗಿತ್ತು. ಆ ಸಂದರ್ಭ ಗಾಂದೋಡಿ, ತಲಪಾಡಿ, ಜುಮಾದಿಗುಡ್ಡೆ, ಕುಪ್ಪಿಲ, ಪಲ್ಲಮಜಲು ಹಾಗೂ ಪರಾರಿ ಪ್ರದೇಶಗಳನ್ನು ವಾರ್ಡ್ ಸಂಖ್ಯೆ 20 ಎಂದು ಗುರುತಿಸಿ ಮತದಾರರ ಪಟ್ಟಿ ಭಾಗ ಸಂಖ್ಯೆ 23 ಮತ್ತು 24 ಗಳನ್ನು ನೀಡಲಾಗಿತ್ತು. ಅದೇ ರೀತಿ ಮೊಡಂಕಾಪು, ಕೈಕಂಬ ಕಳ್ಳಿಗೆ ಪೊಳಲಿ ರಸ್ತೆ ಬಳಿ, ಶಾಂತಿಯಂಗಡಿ, ಕುರ್ಸುಗುಡ್ಡೆ ಜೊತೆಗೆ ಉಳಿದ ಗಾಂದೋಡಿ, ತಲಪಾಡಿ ಜುಮಾಡಿಗುಡ್ಡಗಳ ಪ್ರದೇಶವನ್ನು ವಾರ್ಡ್ 21 ಎಂದು ಗುರುತಿಸಿ ಮತದಾರರ ಪಟ್ಟಿ ಭಾಗ ಸಂಖ್ಯೆ 25 ಎಂದು ಗುರುತಿಸಲಾಗಿತ್ತು ಎಂದು ವಿವರಿಸಿದ ಅವರು, ವಾರ್ಡ್ 20 ಮತ್ತು 21 ನ್ನು ಸಾಮಾನ್ಯ ಮತ್ತು ಹಿಂದುಳಿದ ವರ್ಗ ಬಿ-ಗೆ ಮೀಸಲಾತಿ ಪ್ರಕಟಿಸಲಾಗಿತ್ತು ಎಂದರು.
ಆದರೆ ಜುಲೈ 30ರಂದು ಪ್ರಕಟವಾದ ಅಂತಿಮ ಮತದಾರರ ಪಟ್ಟಿಯಲ್ಲಿ ಗಾಂದೋಡಿ, ತಲಪಾಡಿ, ಜುಮಾದಿಗುಡ್ಡೆ, ಕುಪ್ಪಿಲ, ಪಲ್ಲಮಜಲು ಹಾಗೂ ಪರಾರಿ ಪ್ರದೇಶಗಳನ್ನು ವಾರ್ಡ್ ಸಂಖ್ಯೆ 20ರ ಬದಲು 21 ಎಂದೂ, ಈ ಪ್ರದೇಶದ ಮತದಾರ ಪಟ್ಟಿಯ ಭಾಗ ಸಂಖ್ಯೆ 23 ಮತ್ತು 24ರ ಬದಲು 24 ಮತ್ತು 25 ಎಂದೂ ತಪ್ಪಾಗಿ ನಮೂದಿಸಲಾಗಿದೆ. ಅದೇ ರೀತಿ ಮೊಡಂಕಾಪು, ಕೈಕಂಬ ಕಳ್ಳಿಗೆ ಪೊಳಲಿ ರಸ್ತೆ ಬಳಿ, ಶಾಂತಿಯಂಗಡಿ, ಕುರ್ಸುಗುಡ್ಡೆ ಜೊತೆಗೆ ಉಳಿದ ಗಾಂದೋಡಿ, ತಲಪಾಡಿ ಜುಮಾಡಿಗುಡ್ಡಗಳ ಪ್ರದೇಶವನ್ನು ವಾರ್ಡ್ ಸಂಖ್ಯೆ 21ರ ಬದಲು 20 ಎಂದೂ, ಮತದಾರರ ಪಟ್ಟಿ ಭಾಗ ಸಂಖ್ಯೆ 25ರ ಬದಲು 23 ಎಂದೂ ತಪ್ಪಾಗಿ ನಮೂದಿಸಲಾಗಿದೆ ಎಂದರು.
ಈ ಪ್ರಕ್ರಿಯೆನ್ನು ನಾಮನಿರ್ದೆಶಿತ ಸದಸ್ಯರೋರ್ವರು ರಾಜಕೀಯ ಸ್ವಾಹಿತ ಹಿತಾಸಕ್ತಿಗಾಗಿ ಪುರಸಭೆಯ ಅಧಿಕಾರಿಗಳನ್ನು ಬಳಸಿಕೊಂಡು ಪ್ರಕಟಗೊಂಡ ಮೀಸಲಾತಿಯನ್ನು ದುರುಪಯೋಗಪಡಿಸಿದ್ದಾರೆ ಎಂದು ಆರೋಪಿಸಿದ ಅವರು, ಈ ಎರಡು ವಾರ್ಡಿನ ಗೊಂದಲದ ಬಗ್ಗೆ ಈಗಾಗಲೇ ಜಿಲ್ಲಾಧಿಕಾರಿ ಹಾಗೂ ಸಹಾಯಕ ಕಮೀಷನರ್ ಅವರಿಗೆ ಮನದಟ್ಟು ಮಾಡಲಾಗಿದೆ. ಈ ಬಗ್ಗೆ ಅವರು ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದು, ಇಲ್ಲದಿದ್ದಲ್ಲಿ ಇದನ್ನು ನ್ಯಾಯಲಯದಲ್ಲಿ ಪ್ರಶ್ನಿಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಎಸ್ಡಿಪಿಐ ಬಂಟ್ವಾಳ ವಿಧಾನಸಭಾ ಸಮಿತಿ ಅಧ್ಯಕ್ಷ ಯೂಸುಫ್ ಆಲಡ್ಕ, ಜಿಲ್ಲಾ ಸಮಿತಿ ಕಾರ್ಯದರ್ಶಿ ಶಾಹುಲ್ ಹಮೀದ್, ಪುರಸಭಾ ಸಮಿತಿ ಸಿದ್ದೀಕ್ ನಂದರಬೆಟ್ಟು, ಉಪಾಧ್ಯಕ್ಷ ಅಕ್ಬರ್ ಅಲಿ, ತಲಪಾಡಿ ವಲಯ ಅಧ್ಯಕ್ಷ ಶಾಹುಲ್ ತಲಪಾಡಿ ಹಾಜರಿದ್ದರು.